ಮೋಡದಲ್ಲಿ ಮುಚ್ಚಿಹೋದ ಬೆಂಗಳೂರು: ಇಂದು ಭಾರಿ ಮಳೆ ಸಂಭವ
ಬೆಂಗಳೂರು, ನವೆಂಬರ್ 26: ಭಾರಿ ಮಳೆ ಗಾಳಿಯ ಭೀತಿ ಹುಟ್ಟಿಸಿರುವ ಭೀಕರ ನಿವಾರ್ ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿ ನಡುವೆ ಗುರುವಾರ ನಸುಕಿನಲ್ಲಿ ಭೂಸ್ಪರ್ಶ ಮಾಡಿದ್ದು, ವಿಪರೀತ ಮಳೆ ಸುರಿಸುತ್ತಿದೆ. ಆದರೆ ನಿರೀಕ್ಷಿತ ಮಟ್ಟಕ್ಕಿಂತ ಚಂಡಮಾರುತದ ಅಬ್ಬರು ತುಸು ಕಡಿಮೆ ಇದೆ. ಹಾಗೆಂದು ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಮಧ್ಯಾಹ್ನದ ಬಳಿಕ ಚಂಡಮಾರುತದ ರಭಸ ತಗ್ಗುವ ನಿರೀಕ್ಷೆಯಿದೆ.
Recommended Video
ಚಂಡಮಾರುತದ ಪ್ರಭಾವ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಾಣಿಸುತ್ತಿದೆ. ಎರಡು ದಿನಗಳಿಂದ ಮೋಡದ ವಾತಾವರಣವಿದ್ದ ಬೆಂಗಳೂರಿನಲ್ಲಿ ಗುರುವಾರ ರಾತ್ರಿಯಿಂದಲೇ ದಟ್ಟ ಮೋಡ ಆವರಿಸಿದೆ. ಜನರು ಹೊರಗೆ ಕಾಲಿಡಲಾಗದಷ್ಟು ಚಳಿ ವಾತಾವರಣ ಸೃಷ್ಟಿಯಾಗಿದೆ. ಅನೇಕ ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದಲೇ ತುಂತುರು ಮಳೆ ಸುರಿಯುತ್ತಿದೆ. ಮಧ್ಯಾಹ್ನದ ಬಳಿಕ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.
ಪುದುಚೆರಿಯಲ್ಲಿ ಅಪ್ಪಳಿಸಿದ ನಿವಾರ್: ಚಂಡಮಾರುತ ಕೊಂಚ ದುರ್ಬಲ
ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಸುರಿಯುವ ಸಂಭವವಿದೆ. ಸಂಜೆ ಬಳಿಕ ಮಳೆ ಪ್ರಮಾಣ ವಿಪರೀತವಾಗಬಹುದು. ಹೀಗಾಗಿ ಮುಖ್ಯವಾಗಿ ಬೆಂಗಳೂರಿನ ಜನತೆ ಹೊರಗೆ ಓಡಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ಮಲ್ಲೇಶ್ವರ ಸೇರಿದಂತೆ ಅನೇಕ ಭಾಗಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಇನ್ನು ಎರಡು ದಿನಗಳ ಕಾಲ ಮಳೆ ಸುರಿಯುವ ನಿರೀಕ್ಷೆಯಿದೆ. ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ತಮಿಳುನಾಡಿನಲ್ಲಿ ಸುರಿಯುವಷ್ಟು ತೀವ್ರವಾಗಿ ಇರಲಾರದು.