ಅಸಾನಿ ಚಂಡಮಾರುತ: ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಮಳೆ
ಬೆಂಗಳೂರು ಮೇ 11: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಹಿನ್ನೆಲೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ಮೈಸೂರು, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಚಂಡಮಾರುತ ಆಸಾನಿ ಎಫೆಕ್ಟ್: ಆಂಧ್ರ ತೀರಕ್ಕೆ ಕೊಚ್ಚಿ ಬಂದ ಚಿನ್ನದ ರಥ
ಅಸಾನಿ ಚಂಡಮಾರುತ ಹಿನ್ನೆಲೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರದ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಸಮುದ್ರ ಇಳಿಯದಂತೆ ಸೂಚನೆ ನೀಡಲಾಗಿದ್ದು, ಆಂಧ್ರದ ಸಮುದ್ರ ತೀರದಲ್ಲಿ ರಕ್ಷಣಾ ತಂಡಗಳು ಸಿದ್ದವಾಗಿ ನಿಂತಿವೆ.
ಜೊತೆಗೆ ಚಂಡಮಾರುತದ ಹಿನ್ನೆಲೆಯಲ್ಲಿ, ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ವರುಣನ ಆರ್ಭಟ ಮುಂದುವರೆಯಲಿದೆ. ಆಸಾನಿ ಚಂಡಮಾರುತದ ಕಾರಣ, ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಜಿಟಿಜಿಟಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಇಂದು ಮಧ್ಯಾಹ್ನದ ಚಂಡಮಾರುತದ ಅಬ್ಬರ ವೇಳೆಗೆ ಘಂಟೆಗೆ 100 ಕಿಮೀ ಕ್ರಮಿಸುವ ಸಾಧ್ಯತೆಯಿದೆ. ಹೀಗಾಗಿ, ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Recommended Video
ಇನ್ನೂ ಇದೇ ವೇಳೆ ಆಂಧ್ರಪ್ರದೇಶ ತೀರಕ್ಕೆ ಚಿನ್ನದ ರಥವೊಂದು ಕೊಚ್ಚಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಚಂಡಮಾರುತ ಆಸಾನಿ ಎಫೆಕ್ಟ್ ಎನ್ನಲಾಗುತ್ತಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯ ಗ್ರಾಮಗಳ ನಿವಾಸಿಗಳು ಮಂಗಳವಾರ (ಮೇ 10) ಚಿನ್ನದ ಬಣ್ಣದ ರಥವನ್ನು ದಡದಲ್ಲಿ ಕಂಡು ಆಶ್ಚರ್ಯಗೊಂಡಿದ್ದಾರೆ. ರಥವು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್ನಿಂದ ಕೊಚ್ಚಿಕೊಂಡು ಬಂದಿರುವಂತೆ ತೋರುತ್ತಿದೆ ಮತ್ತು ಅಸನಿ ಚಂಡಮಾರುತದಿಂದ ಉಂಟಾದ ಹೆಚ್ಚಿನ ಉಬ್ಬರವಿಳಿತದ ಅಲೆಗಳಿಂದ ಇದು ಬಂದಿರಬಹುದು ಎಂದು ಮೀನುಗಾರರು ಮತ್ತು ಅಧಿಕಾರಿಗಳು ಶಂಕಿಸಿದ್ದಾರೆ.
ಚಂಡಮಾರುತ ಆಸಾನಿ ಎಫೆಕ್ಟ್: ಆಂಧ್ರ ತೀರಕ್ಕೆ ಕೊಚ್ಚಿ ಬಂದ ಚಿನ್ನದ ರಥ