ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ
ನವದೆಹಲಿ, ಜೂನ್ 11: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಸದ್ಯಕ್ಕೆ ನೆಮ್ಮದಿಯ ಸುದ್ದಿ ಸಿಕ್ಕಿಲ್ಲ. ಪೂರ್ವನಿಗದಿಯಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಪ್ರಾಧಿಕಾರ ಸೂಚಿಸಿದೆ.
Recommended Video
ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 40 ಟಿಎಂಸಿ ಅಡಿ ನೀರನ್ನು ತಮಿಳುನಾಡಿನ ಮೆಟ್ಟೂರ್ ಅಣೆಕಟ್ಟಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜೂನ್ 11ರಂದು ಸೂಚಿಸಿದೆ.
ಅಂತಿಮ ತೀರ್ಪು: ತಮಿಳುನಾಡಿಗೆ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣವೆಷ್ಟು?
ಬುಧವಾರದಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 6ನೇ ಸಭೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಹರಿಸುವಂತೆ ಸಿಡಬ್ಲುಎಂಎ ಅಧ್ಯಕ್ಷತೆಯನ್ನು ರಾಜೇಂದ್ರಕುಮಾರ್ ಜೈನ್ ಸೂಚಿಸಿದರು.
ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ
ರಾಜೇಂದ್ರಕುಮಾರ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ನವೀನ್ ಕುಮಾರ್ ಮತ್ತು ಲೋಕೋಪಯೋಗಿ ಇಲಾಖೆ ಸದಸ್ಯರು ಮತ್ತು ತಮಿಳುನಾಡು, ಪುದುಚೇರಿ, ಕರ್ನಾಟಕ ಮತ್ತು ಕೇರಳದ ಸದಸ್ಯರು ಉಪಸ್ಥಿತರಿದ್ದರು. ತಮಿಳುನಾಡು ಪರವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಮಣಿವಾಸನ್, ಕಾವೇರಿ ತಾಂತ್ರಿಕ ಸಮಿತಿಯ ಅಧ್ಯಕ್ಷ ಆರ್.ಸುಬ್ರಮಣಿಯನ್ ಮತ್ತು ಸದಸ್ಯ ಪಟ್ಟಾಭಿರಾಮನ್ ಉಪಸ್ಥಿತರಿದ್ದರು. ಜೂನ್, ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ ಇನ್ನಿತರ ವಿವರ ಮುಂದಿದೆ...
ಸುಪ್ರೀಂಕೋರ್ಟ್ ಆದೇಶದ ಅನ್ವಯ ಆದೇಶ
ಕಾವೇರಿ ನದಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರತಿ ತಿಂಗಳು ಇಂತಿಷ್ಟು ನೀರು ಹರಿಸಬೇಕು ಎಂದು ನಿಗದಿಯಾಗಿದೆ. ಅದರಂತೆ ಜೂನ್ ತಿಂಗಳಿನಲ್ಲಿ 9.19 ಟಿಎಂಸಿ ಹಾಗೂ ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸಭೆಯಲ್ಲಿ ತಮಿಳುನಾಡಿನಿಂದ ಬಂದ ಬೇಡಿಕೆ ಮಾತ್ರ ಇದಾಗಿದೆ. ಕೇರಳ, ಪುದುಚೇರಿ ರಾಜ್ಯಗಳಿಂದ ಯಾವುದೇ ಬೇಡಿಕೆ ಬಂದಿಲ್ಲ. ನೀರು ಹಂಚಿಕೆ ಸಂಬಂಧ ಪುದುಚೇರಿ ಹಾಗೂ ತಮಿಳುನಾಡಿನ ನಡುವೆ ಆಗಿರುವ ಒಪ್ಪಂದ ಮುಂದುವರೆಯಲಿದೆ ಎಂದು ಸಭೆಯ ನಂತರ ರಾಜೇಂದ್ರಕುಮಾರ್ ಜೈನ್ ಹೇಳಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 67.16 ಟಿಎಂಸಿ ಅಡಿ. ಯೋಜನೆ ಪೂರ್ಣಗೊಂಡರೆ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಸರ್ಕಾರ ಹೇಳಿದೆ. ಮೇಕೆದಾಟು ಯೋಜನೆಯ ಒಟ್ಟು ವೆಚ್ಚ 5912 ಕೋಟಿ ರೂ. ಗಳು. ಆದರೆ, ಸಭೆಯಲ್ಲಿ ಈ ಬಗ್ಗೆ ತಮಿಳುನಾಡು ಪ್ರತಿನಿಧಿಗಳು ಆಕ್ಷೇಪ ತೆಗೆದರು.
ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ
ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ 2013ರಲ್ಲಿ ಪ್ರಸ್ತಾವನೆ ಸಿದ್ಧಪಡಿಸಿತ್ತು. ಯೋಜನೆಗೆ ತಮಿಳುನಾಡು, ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಯೋಜನೆ ಜಾರಿಯಾದರೆ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬುದು ತಮಿಳುನಾಡು ಸರ್ಕಾರದ ವಾದವಾಗಿದೆ.
ರಾಜ್ಯದಲ್ಲಿ ಮುಂಗಾರು ವಿಳಂಬ
ಜೂನ್ ತಿಂಗಳಿನಲ್ಲಿ 9.19 ಟಿಎಂಸಿ ಹಾಗೂ ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿದೆ. ಕೆಆರ್ ಎಸ್ (92/124), ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯ ತುಂಬಿಲ್ಲ. ಬೆಂಗಳೂರಿಗೆ ಪ್ರತಿ ತಿಂಗಳಿಗೆ 4 ಟಿಎಂಸಿಯಷ್ಟು ಕುಡಿಯುವ ನೀರಿನ ಬೇಡಿಕೆ ಇರುವುದರಿಂದ, ರಾಜ್ಯದಲ್ಲಿ ಮುಂಗಾರು ವಿಳಂಬ, ಅಣೆಕಟ್ಟಿಗೆ ಒಳಹರಿವು ಹೆಚ್ಚಾಗದಿರುವುದರಿಂದ ನೀರು ಹರಿಸಲು ಕಷ್ಟ ಎಂದು ಕರ್ನಾಟಕದ ಪ್ರತಿನಿಧಿಗಳು ಹೇಳಿದರು.
ಕಾವೇರಿಕೊಳ್ಳದ ಜಲಾಶಯಗಳ ನೀರಿನ ಮಟ್ಟ
ಕಾವೇರಿಕೊಳ್ಳದ
ಜಲಾಶಯಗಳ
ನೀರಿನ
ಮಟ್ಟ(ಜೂನ್
11)
ಹಾರಂಗಿ:
2831.54(ಪೂರ್ಣ
ಮಟ್ಟ
2859.0
ಅಡಿ)
ಹೇಮಾವತಿ:
2879.80
(2922.0)
ಕೃಷ್ಣರಾಜ
ಸಾಗರ:
92.55
(124.80
ಅಡಿ)
ಕಬಿನಿ:
2261.94
(2284.0)
ಒಳ
ಹರಿವು
ಬರದೇ
ಇದ್ದಲ್ಲಿ
ನೀರು
ಹರಿಸುವ
ಅಗತ್ಯವಿಲ್ಲ.
ಮೇಕೆದಾಟು ಯೋಜನೆ; ಕೇಂದ್ರಕ್ಕೆ ತಮಿಳುನಾಡು ಪತ್ರ
ಸುಪ್ರೀಂಕೋರ್ಟ್ ಅಂತಿಮ ಆದೇಶ
ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು, ಆದರೆ, ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ರಾಜ್ಯವು ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.ಆದರೆ, ಪ್ರಸ್ತಾವಿತ ಮೇಕೇದಾಟು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಒಟ್ಟಾರೆ, ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಇದರಲ್ಲಿ 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.