ದೇಶಕ್ಕೊಂದೇ ಧ್ವಜ ಸಾಕು, ಕನ್ನಡಕ್ಕೆ ಏಕೆ?: ಮತ್ತೆ ಕೆಣಕಿದ ಸಿ.ಟಿ ರವಿ
Recommended Video
ಬೆಂಗಳೂರು, ಆಗಸ್ಟ್ 30: ಧ್ವಜ ಸಂಹಿತೆಯ ಪ್ರಕಾರ ದೇಶಕ್ಕೆ ಇರುವುದು ಒಂದೇ ಧ್ವಜ. ಅದು ತ್ರಿವರ್ಣ ಧ್ವಜ. ಪ್ರತ್ಯೇಕ ನಾಡ ಧ್ವಜದ ಅಗತ್ಯವಿಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ,ಟಿ ರವಿ ಪುರುಚ್ಚರಿಸಿದ್ದಾರೆ.
ಸಿ.ಟಿ. ರವಿ ಅವರ ಹೇಳಿಕೆ ಮತ್ತೆ ಕನ್ನಡದ ಅಭಿಮಾನಿಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಒಕ್ಕೂಟ ವ್ಯವಸ್ಥೆ. ಬಹುತ್ವದ ಸಂಸ್ಕೃತಿ. ಎಲ್ಲರಿಗೂ ದೇಶಾಭಿಮಾನವಿದೆ. ಆದರೆ, ಬಹುತ್ವವನ್ನು ನಾಶಪಡಿಸಿ ಏಕಸಂಸ್ಕೃತಿ, ಏಕಭಾಷೆಯ ವ್ಯವಸ್ಥೆಯನ್ನು ಹೇರಲು ಹೊರಟಿರುವ ಬಿಜೆಪಿ ಕನ್ನಡದ ಅಸ್ಮಿತೆಯನ್ನು ಬಿಂಬಿಸುವ ಧ್ವಜವನ್ನು ಪ್ರಶ್ನಿಸುವ ಮೂಲಕ ನಮ್ಮತನವನ್ನು ಕೊಲ್ಲಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆಯೂ ಸಿಟಿ ರವಿ ಅವರು ಕನ್ನಡ ಧ್ವಜದ ಬಗ್ಗೆ ಆಕ್ಷೇಪದ ಮಾತನ್ನಾಡಿದ್ದರು.
ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್
ಹಿಂದಿಯಲ್ಲಿ ಬರೆದ ತೆರವುಗೊಳಿಸುವ ಸಂಬಂಧ ಕನ್ನಡಪರ ಹೋರಾಟಗಾರರನ್ನು ರೌಡಿಗಳೆಂದು ಕರೆಯುವ ಮೂಲಕ ಕೆಲವು ದಿನಗಳ ಹಿಂದಷ್ಟೇ ಸಂಸದ ತೇಜಸ್ವಿ ಸೂರ್ಯ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಸಚಿವ ಸಿ.ಟಿ ರವಿ, ಕನ್ನಡ ಧ್ವಜದ ಅಸ್ತಿತ್ವವನ್ನು ಪ್ರಶ್ನಿಸಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.
ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವ ಕುರಿತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಇದರ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳದೆಯೇ ಇರುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಿ.ಟಿ. ರವಿ ಅವರನ್ನು ಪ್ರಶ್ನಿಸಿದ್ದರು.
ಪ್ರತ್ಯೇಕ ನಾಡಧ್ವಜದ ಅಗತ್ಯವಿಲ್ಲ
'ಒಂದು ರಾಷ್ಟ್ರ, ಒಂದು ಧ್ವಜ' ಎಂಬ ಧೋರಣೆ ನಮ್ಮದು. ಸಾಂಸ್ಕೃತಿಕವಾಗಿ ನಾವು ಬೇರೆಯದೇ ಧ್ವಜವನ್ನು ಹೊಂದಿದ್ದರೂ ಪ್ರತ್ಯೇಕ ನಾಡಧ್ವಜದ ಅಗತ್ಯವಿಲ್ಲ ಎಂದು ಸಿ.ಟಿ. ರವಿ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೆಲವು ಸಂಘ ಸಂಸ್ಥೆಗಳು ಕನ್ನಡದ ಪ್ರತ್ಯೇಕ ಧ್ವಜ ಹೊಂದಿದ್ದಾರೆ. ಆದರೆ ದೇಶಕ್ಕೆ ಒಂದೇ ಧ್ವಜ ಇರುವುದು ಒಳ್ಳೆಯದು. ಹಾಗೆಂದು ಕನ್ನಡದ ಧ್ವಜ ಹೊಂದಿರುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು.
ಕನ್ನಡ ಅವಶ್ಯಕತೆ ಇಲ್ಲ ಎನ್ನುತ್ತಾರೆ
ಒಂದು ರಾಷ್ಟ್ರ ಒಂದು ಧ್ವಜ ಎಂಬ ನೆಪವೊಡ್ಡಿ ನಾಡ ಧ್ವಜದ ಅವಶ್ಯಕತೆ ಇಲ್ಲ ಎಂದು ಹೇಳುವವರು ಮುಂದೊಂದು ದಿನ ಒಂದು ರಾಷ್ಟ್ರ ಒಂದು ಭಾಷೆ ಹೆಸರಿನಲ್ಲಿ ಕನ್ನಡದ ಅವಶ್ಯಕತೆ ಇಲ್ಲವೆಂದು ಹೇಳುವ ದಿನ ದೂರವಿಲ್ಲ. ಸಿಟಿ ರವಿ ಅವರ ದೆಹಲಿ ಹಾಗೂ ನಾಗಪುರದ ದೊರೆಗಳನ್ನು ಖುಷಿಪಡಿಸಲು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರತಾಪ್ ಕಣಗಾಲ್ ಕಿಡಿಕಾರಿದ್ದಾರೆ.
ಹಿಂದಿ ಬ್ಯಾನರ್, ಕನ್ನಡಿಗರ ಬಂಧನ; ಏನಿದು ವಿವಾದ?
ಕನ್ನಡದ ಮೇಲೂ ಪ್ರಹಾರ ನಡೆಸುತ್ತಾರೆ
ಒಂದು ರಾಷ್ಟ್ರ ಒಂದು ಧ್ವಜ ಎನ್ನವವರು ಒಂದು ರಾಷ್ಟ್ರ ಒಂದು ಭಾಷೆ ಎನ್ನುವ ದಿನಗಳು ದೂರವಿಲ್ಲ ಎಚ್ಚರ ಕನ್ನಡಿಗ! ಎಂದು ಮಧುಪ್ರಿಯಾ ಅವರು ಕನ್ನಡದ ಮೇಲೆಯೂ ಪ್ರಹಾರ ನಡೆಸುವ ಕಾಲ ಹತ್ತಿರದಲ್ಲಿಯೇ ಇದೆ ಎಂದು ಹೇಳಿದ್ದಾರೆ.
ಧ್ವಜ ಇಂದು ನಿನ್ನೆಯಿಂದ ಇಲ್ಲ
ಬಿಜೆಪಿ ಕರ್ನಾಟಕದ ನಾಯಕರು ನಮ್ಮ ರಾಜ್ಯಕ್ಕೆ ಅವಮಾನ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಧ್ವಜ ಇರುವುದು ಇಂದು ನಿನ್ನೆಯಲ್ಲ. ಅದಕ್ಕೆ ತನ್ನದೇ ಅದ ಇತಿಹಾಸ ಇದೆ. ಆದರೆ ಅದನ್ನು ರವಿ ಹಾಗು ಬಿಜೆಪಿಯವರು ಅರಿಯುತ್ತಿಲ್ಲ ಎಂದು ಪ್ರತೀಕ್ಷಾ ಲಾಲ್ ತ್ರಿಪಾಠಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಉರ್ದು ಎಂದರೆ ಒಪ್ಪಿಗೆ, ಹಿಂದಿ ಎಂದರೆ ವಿರೋಧ ಎನ್ನುವುದು ಮೂರ್ಖತನ: ರಕ್ಷಿತ್ ಬರಹ
ಬಾವುಟದ ಹಕ್ಕು, ಸ್ವಾತಂತ್ರ ನಮಗಿದೆ
ಕನ್ನಡ ಬಾವುಟ ಒಕ್ಕೂಟದ ಬಾವುಟಕ್ಕೆ ಪರ್ಯಾಯ ಅಲ್ಲ, ಕನ್ನಡ ನಾಡು ಒಕ್ಕೂಟಕ್ಕೆ ಪ್ರತಿಸ್ಪರ್ಧಿ ಅಲ್ಲ. ಬಾವುಟ ನಮ್ಮ ಗುರುತು ಆ ಗುರುತನ್ನು ಒಕ್ಕೂಟದ ಪ್ರಜೆಗಳಾಗಿ ಹೊಂದುವ, ತೋರಿಸಿಕೊಳ್ಳುವ ಹಕ್ಕು, ಸ್ವಾತಂತ್ರ್ಯ ನಮಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ಒಕ್ಕೂಟ ಇದಕ್ಕೆ ವಿರೋಧಿಸುವ ಎಲ್ಲಾ ಶಕ್ತಿಗಳು ನಾಡ ದ್ರೋಹಿಗಳು ಕೃಷಿಕ್ ಎ.ವಿ. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರ ಅಪ್ಪಣೆಯೂ ಬೇಕಿಲ್ಲ
ನಮ್ಮ ಕನ್ನಡ ಬಾವುಟವನ್ನು ನಾವು ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಸಿರಿಗನ್ನಡಮ್ ಗೆಲ್ಗೆ !! ಸಿರಿಗನ್ನಡಮ್ ಬಾಳ್ಗೆ !! ಎಂದು ರಾಮಚಂದ್ರ ಎಂ. ಅವರು ಟ್ವೀಟ್ ಮಾಡಿದ್ದಾರೆ.
ನಿಮ್ಮಂತಹ ಕನ್ನಡದ್ರೋಹಿಗಳು ಇನ್ನೊಬ್ಬರಿಲ್ಲ
ಕನ್ನಡವನ್ನು ಕಡ್ಡಾಯವಾಗಿ ಕಲಿಸೋದು ಬೇಡ, ಮೆಟ್ರೋನಲ್ಲಿ ಹಿಂದಿ ಇದ್ದರೆ ಕನ್ನಡಕ್ಕೇನೂ ತೊಂದ್ರೆ ಇಲ್ಲ, ಹಿಂದಿ ಕೂಡ ಭಾರತದ ಭಾಷೆ ಅದನ್ನ ಬಿಟ್ಟು ಇಂಗ್ಲೀಷ್ ಎಂಬ ಪರಕೀಯ ಭಾಷೆ ಯಾಕೆ ಬಳಸುತ್ತೀರ, ಕನ್ನಡ ನಾಡಲ್ಲಿ ಕನ್ನಡದ ಅಧಿಕೃತ ಧ್ವಜ ಬೇಡ, ಇಂತಹ ಯೋಚನೆಗಳು ಸ್ವಭಾವಗಳು ನಿಮ್ಮಲ್ಲಿ ಇದ್ದರೆ, ನಿಮ್ಮಂತಹ ಕನ್ನಡದ್ರೋಹಿಗಳು ಇನ್ನೊಬ್ಬರಿಲ್ಲ ಎಂದು ಸಾಗರ್ ರವೀನಾಥ್ ಹೇಳಿದ್ದಾರೆ.
ಆರೆಸ್ಸೆಸ್ ಬಾವು ಹಾರಿಸಿದ್ದೇಕೆ?
ಸಿಟಿ ರವಿ ಅವರೇ ಮೊದಲು ನಿಮ್ಮ RSS ನವರಿಗೆ ಹೇಳಿ ಸ್ವತಂತ್ರ ಬಂದು 52 ವರ್ಷಗಳವರೆಗೆ ತಮ್ಮ ನಾಗಪೂರದ ಕಚೇರಿಯಲ್ಲಿ ಒಮ್ಮೆ ಕೂಡ ಭಾರತದ ಬಾವುಟ ಹಾರಿಸಿರಲಿಲ್ಲವಂತೆ. ಅಟಲ್ ಬಿಹಾರಿ ವಾಜಪೇಯಿ ಬಂದು ಬೆಂಡೆತ್ತಿದ ಮೇಲೆ ಹಾರಿಸಿದ್ದರು (ಅಲ್ಲಿಯವರೆಗೆ ಅವರು ಕೇಸರಿ ಬಣ್ಣದ ಭಗವಾಧ್ವಜ ಹಾರಿಸುತ್ತಿದ್ದರು) .ದೇಶ ದ್ರೋಹ ಕೆಲಸ ಅವರದು ನಮ್ಮದಲ್ಲ ಎಂದು ಮಂಜುನಾಥ್ ಸಿರುಗುಪ್ಪ ತಿರುಗೇಟು ನೀಡಿದ್ದಾರೆ.
ಅಧಿಕಾರ ಕೊಟ್ಟಿರುವುದೇ ರಾಜ್ಯಗಳು
ಕರ್ನಾಟಕ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾದ ರಾಜ್ಯ. 29 ರಾಜ್ಯಗಳು 8 ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟಗಳು ಈ ಕೇಂದ್ರ ಸರಕಾರಕ್ಕೆ ಸ್ಥಾನಮಾನ ನೀಡಿವೆ. ಕೇಂದ್ರಕ್ಕೆ ಆಡಳಿತಾತ್ಮಕ ಅಧಿಕಾರ ಕೊಟ್ಟಿದ್ದೇ ಈ ಒಕ್ಕೂಟ ರಾಜ್ಯಗಳು. ಈ ರಾಜ್ಯಗಳು ತಮ್ಮ ರಾಜ್ಯಗಳಿಗೆ ಪ್ರತ್ಯೇಕ ಬಾವುಟ ಕೇಳಿದರೆ ತಪ್ಪೇನು? ಎಂದು ಭೀಮಾಶಂಕರ ಪಾಟೀಲ ಪ್ರಶ್ನಿಸಿದ್ದಾರೆ.