ಸಿ.ಟಿ. ರವಿ ಕ್ಯಾಸಿನೋಕ್ಕೆ ನೋ ಅಂದಿದ್ಯಾಕೆ, ಇಲ್ಲಿದೆ ಮಾಹಿತಿ!
ಬೆಂಗಳೂರು. ಫೆ. 26: ರಾಜ್ಯದಲ್ಲಿ ಪರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕ್ಯಾಸಿನೋ ಜೂಜು ಆರಂಭಿಸುವುದು ಉತ್ತಮ ಎಂದಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಇದೀಗ ಯುಟರ್ನ್ ಹೊಡೆದಿದ್ದಾರೆ. ಎಫ್ಕೆಸಿಸಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಬಂದಿದ್ದ ಪ್ರಶ್ನೆಗೆ ಅಲ್ಲಿಯೇ ಸ್ಪಷ್ಟಪಡಿಸಿದ್ದೇನೆ. ಕ್ಯಾಸಿನೋ ಆರಂಭಿಸುವ ಮಾತನ್ನು ಆಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸಚಿವ ಸಿ.ಟಿ. ರವಿ ಅವರು ಯುಟರ್ನ್ ತೆಗೆದುಕೊಂಡಿರುವುದಕ್ಕೆ ಬೇರೆಯದ್ದೆ ಕಾರಣವಿದೆ. ಅದಕ್ಕೊಂದು ಕಾರಣ ರಾಜ್ಯಾದ್ಯಂತ ವ್ಯಕ್ತವಾದ ತೀವ್ರ ವಿರೋಧ ಒಂದು ಕಡೆಯಾದರೆ ಮತ್ತೊಂದು ಕಾರಣ ಆರ್ಎಸ್ಎಸ್ ಸೂಚನೆ.
Recommended Video
ಕ್ಯಾಸಿನೋ ಆರಂಭಿಸಲು ಅನುಮತಿ ಕೊಡುವ ಪ್ರಸ್ತಾವನೆಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಆವರು ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ಆರ್ಎಸ್ಎಸ್ ಪ್ರಮುಖರು ಕೊಟ್ಟಿರುವ ಖಡಕ್ ಸೂಚನೆ ಎಂಬ ಮಾಹಿತಿಯಿದೆ. ವಿಧಾನಸೌಧದಲ್ಲಿ ಮಾತನಾಡಿರುವ ರವಿ ಅವರು, ನಮ್ಮ ಸರ್ಕಾರದಲ್ಲಿ ಕ್ಯಾಸಿನೋ ಜಾರಿ ಬಗ್ಗೆ ಚರ್ಚೆಯೇ ಆಗಿಲ್ಲ. ಅಂತಹ ಪ್ರಸ್ತಾವನೆಯೂ ಇಲ್ಲ ಎಂದಿದ್ದಾರೆ. ನಮ್ಮ ಸರ್ಕಾರ ಕ್ಯಾಸಿನೋ ಜೂಜಿಗೆ ಅವಕಾಶ ಮಾಡಿಕೊಡುವುದಿಲ್ಲ, ಎಫ್ಕೆಸಿಸಿಐಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂದಿದ್ದ ಪ್ರಶ್ನೆಗೆ ಅಲ್ಲಿಯೇ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.
ಆರ್ಎಸ್ಎಸ್ ಪ್ರಮುಖರು ಗರಂ, ನೋ ಕ್ಯಾಸಿನೋ ಎಂದ ರವಿ
ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವುದರಿಂದ ವಿದೇಶಿ ವಿನಿಮಯ ಹಣ ಉಳಿತಾವಾಗುತ್ತದೆ. ಇಲ್ಲಿ ಮಡಿವಂತಿಕೆ ಎಂಬಂತೆ ನಟಿಸುವರು ವಿದೇಶಕ್ಕೆ ಹೋಗಿ ಕ್ಯಾಸಿನೋ ಆಡುತ್ತಾರೆ. ವಿದೇಶಿ ವಿನಿಮಯ ಹಣ ಉಳಿಸಲು ಸರ್ಕಾರ ಚಿಂತನೆ ನಡೆಸಬೇಕು. ಕ್ಯಾಸಿನೋ ಆರಂಭಿಸಲು ಕೇವಲ ಪ್ರವಾಸೋದ್ಯಮ ಇಲಾಖೆಯ ಒಪ್ಪಿಗೆಯಿಂದ ಆಗಲ್ಲ ಎಂದು ಸಚಿವ ಸಿ.ಟಿ. ರವಿ ಮಾತನಾಡಿದ್ದರು.
ಮಡಿವಂತಿಕೆಯ ಪಕ್ಷ ಎಂದೇ ಕರೆಯಿಸಿಕೊಳ್ಳುವ ಬಿಜೆಪಿ ಸರ್ಕಾರದಲ್ಲಿ ಕ್ಯಾಸಿನೋ ಆರಂಭಿಸುವ ಚರ್ಚೆ ನಡೆದಿದ್ದು ರಾಜ್ಯ ಆರ್ಎಸ್ಎಸ್ ಪ್ರಮುಖರಿಗೆ ಸರಿಕಂಡಿರಲಿಲ್ಲ. ಇದರಿಂದಾಗಿಯೆ ಸಚಿವ ಸಿ.ಟಿ. ರವಿ ಅವರಿಗೆ ಆರ್ಎಸ್ಎಸ್ ನಿಂದ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದ್ದು, ಈ ಬಗ್ಗೆ ಸ್ಪಷ್ಟನೆ ಕೊಡಲು ಸೂಚಿಸಿದ್ದರಂತೆ. ಹೀಗಾಗಿಯೆ ಸಿ.ಟಿ. ರವಿ ಅವರು ಸ್ಪಷ್ಟನೆ ಕೊಟ್ಟು ಅಂತಹ ಯಾವುದೇ ಪ್ರಸ್ತಾವನೆ ಇಲಾಖೆ ಅಥವಾ ಸರ್ಕಾರದ ಮುಂದೆ ಇಲ್ಲ ಎಂದು ಕ್ಯಾಸಿನೋ ಆರಂಭಿಸಲು ಅನುಮತಿ ಕೊಡುವ ವಿಚಾರಕ್ಕೆ ಪೂರ್ಣವಿರಾಮ ಹಾಕಿದ್ದಾರೆ.
ಕ್ಯಾಸಿನೋ ತೆರೆಯಲಿ ನೋಡೋಣ ಎಂದು ಸವಾಲು ಹಾಕಿದ್ದು ಡಿಕೆಶಿ
ಇನ್ನು ಕ್ಯಾಸಿನೋ ಜೂಜು ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಚರ್ಚೆಗಳು ಆರಂಭವಾಗುತ್ತಿದ್ದಂತೆಯೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಜೂಜು ಅಡ್ಡೆ ತೆರೆಯಲು ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ಯಾಸಿನೋ ಆರಂಭಿಸಲು ತೀವ್ರ ವಿರೋಧ ವ್ಯಕ್ತೊಡಿಸಿದ್ದರು. ಜೊತೆಗೆ ಬಜೆಟ್ನಲ್ಲಿ ಕ್ಯಾಸಿನೋ ತೆರೆಯುತ್ತೇವೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದರು.
ಕ್ಯಾಸಿನೋ ಆರಂಭಿಸುವುದರಿಂದ ಜನರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಹೇಗೆ ಹಣ ಬರುತ್ತದೆ ಎಂದಬುದನ್ನು ಮೊದಲು ಹೇಳಲಿ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದರು.
ಇಸ್ಪೀಟ್ ಆಟ, ಬೆಲ್ಲಿ ಡ್ಯಾನ್ಸ್ ಮೂಲಕ ಪ್ರತಿಭಟಿಸಿದ್ದ ಕಾಂಗ್ರೆಸ್
ರಾಜ್ಯದಲ್ಲಿ ಕ್ಯಾಸಿನೋ ಜೂಜು ಆರಂಭಿಸುವುದಕ್ಕೆ ರಾಜ್ಯ ಕಾಂಗ್ರೆಸ್ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಸ್ಪೀಟ್ ಆಡುವ ಮೂಲಕ, ಬೆಲ್ಲ ಡ್ಯಾನ್ಸ್ ಮಾಡುವುದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸಿ.ಟಿ. ರವಿ ಮತ್ತು ರಾಜ್ಯ ಬಿಜಪಿ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಬೇಕಾದರೆ ಕ್ಯಾಸಿನೋ ಆಡಲು ಗೋವಾ ಅಥವಾ ಶ್ರೀಲಂಕಾಕ್ಕೆ ಹೋಗಲಿ, ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವುದು ಬೇಡ ಎಂದು ಪ್ರತಿಭಟನಾಕಾರರು ಘೊಷಣೆ ಹಾಕಿದ್ದರು. ಸಿ.ಟಿ. ರವಿ ಅವರ ಮುಖವಾಡ ಹಾಕಿಕೊಂಡು ಬೆಂಗಳೂರಿನಲ್ಲಿ ಧರಣಿ ನಡೆಸಿದ್ದರು.
ಕ್ಯಾಸಿನೋ ವಿರುದ್ಧ ರಾಜ್ಯಾದಂತ್ಯ ವ್ಯಕ್ತವಾಗಿದ್ದ ತೀವ್ರ ವಿರೋಧ!
ಕ್ಯಾಸಿನೋ ಕುರಿತು ಸಚಿವ ಸಿ.ಟಿ. ರವಿ ಅವರ ಹೇಳಿಕೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆಯೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ದೇಶ, ಧರ್ಮ, ಸಂಸ್ಕೃತಿ ಎಂದು ಮಾತನಾಡುವ ಬಿಜೆಪಿಯಿವರು ನಮ್ಮ ಸಂಸ್ಕೃತಿಯನ್ನು ಕಾಪಾಡುವುದು ಇದೇನಾ ಎಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದ ಸಂಘಟನೆಗಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಕ್ಯಾಸಿನೋ ಆರಂಭಿಸುವುದರಿಂದ ಯುವ ಜನತೆಗೆ ಜೂಜಿಗೆ ತುತ್ತಾಗುತ್ತಾರೆ. ಕೆಲವು ಜೂಜು ಅಡ್ಡೆ ನಡೆಸುವವರನ್ನು ಶ್ರೀಮಂತರನ್ನಾಗಿ ಮಾಡಲು ಎಲ್ಲರೂ ಕ್ಯಾಸಿನೋ ಆಡುವಂತೆ ಸರ್ಕಾರವೇ ಪ್ರೇರೆಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರೂ ಪ್ರಶ್ನೆ ಮಾಡಿದ್ದರು. ಇದೀಗ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಕ್ಯಾಸಿನೋ ಆರಂಭಿಸುವುದಿಲ್ಲ ಎಂದು ಹೇಳಿಕೆ ಕೊಡುವ ಮೂಲಕ ವಿವಾದಕ್ಕೆ ತೆರೆ ಹಾಕಲು ಪ್ರಯತ್ನಿಸಿದ್ದಾರೆ.