ಹೊಸ ಕಚೇರಿ ಉದ್ಘಾಟನೆ; ಸಿಟಿ ರವಿ ಭಾವುಕ ಫೇಸ್ ಬುಕ್ ಪೋಸ್ಟ್
ಬೆಂಗಳೂರು, ನವೆಂಬರ್ 27 : ಚಿಕ್ಕಮಗಳೂರು ಶಾಸಕ, ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಬಿಜೆಪಿ ಪಕ್ಷ ಸಂಘಟನೆ ಮಾಡುವ ಮಹತ್ವದ ಕಾರ್ಯವನ್ನು ನೀಡಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ನೇಮಕವಾಗಿದ್ದು, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಪಕ್ಷದ ಉಸ್ತುವಾರಿಯಾಗಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಸಿ. ಟಿ. ರವಿ ಅವರ ನೂತನ ಕಚೇರಿ ಉದ್ಘಾಟನಾ ಸಮಾರಂಭವಿತ್ತು. ಕರ್ನಾಟಕದ ಹಲವು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿ. ಟಿ. ರವಿ ಅವರನ್ನು ಅಭಿನಂದಿಸಿದರು. ಯಡಿಯೂರಪ್ಪ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಿ. ಟಿ. ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದು ಅಂಗೀಕಾರಗೊಂಡಿದೆ.
ದೀಪಾವಳಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿ.ಟಿ ರವಿ
ಕಾರ್ಯಕ್ರಮ ಮುಗಿದ ಬಳಿಕ ಸಿಟಿ ರವಿ ಅವರು ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. 'ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಇವತ್ತು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ' ಎಂದು ನೆನಪು ಮಾಡಿಕೊಂಡಿದ್ದಾರೆ.
ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ!
'ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಸಮಯದಲ್ಲಿ ಹಳೆಯ ನೆನಪಿನ ಹಾಯಿದೋಣಿಗಳು ನನ್ನ ಭಾವ ಕಡಲಿನಲಿ ತೇಲಿ ಹೋಗುತ್ತಿವೆ. ಹೃದಯ ತುಂಬಿ ಬಂದಿದೆ. ನಿಮಗೆ ನಾನು ಸದಾ ಆಭಾರಿ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಜೀವವಿರುವ ತನಕ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ' ಎಂದು ಪೋಸ್ಟ್ ಹಾಕಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ರಾಜೀನಾಮೆ ಅಂಗೀಕಾರ!
ಸಾಮಾನ್ಯ ರೈತನ ಮಗ
"ಬಂಧುಗಳೇ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯ ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಇವತ್ತು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ. ಕರ್ನಾಟಕದ ಹಳ್ಳಿಯಿಂದ ಆರಂಭವಾದ ರಾಜಕೀಯ ಯಾತ್ರೆ ದಿಲ್ಲಿಯವರೆಗೂ ಬಂದು ನಿಂತಿದೆ" ಎಂದು ಪೋಸ್ಟ್ ಹಾಕಿದ್ದಾರೆ.
ಬಿಜೆಪಿ ಸದಸ್ಯನಾಗಿ ಮಾಡಿದರು
"1988ರಲ್ಲಿ ಆಟೋ ಚಂದ್ರಣ್ಣನವರು ನನಗೆ ಬಿಜೆಪಿ ಸದಸ್ಯನಾಗಲು ಆಹ್ವಾನಿಸಿ ಬಿಜೆಪಿಯ ಸದಸ್ಯನನ್ನಾಗಿ ಮಾಡಿದರು. ಅಲ್ಲಿಂದ ಇಂದು ನಾನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾಗುವವರೆಗೆ ನನ್ನನ್ನು ಬೆಳೆಸಿದವರು ಇಂತಹುದೇ ಅನೇಕ ಚಂದ್ರಣ್ಣರು. ಪ್ರಚಾರ ಮುಗಿಸಿ ಹಸಿದು ಬಾಗಿಲ ಬಳಿ ಬಂದು ನಿಂತಾಗ ಅಕ್ಕರೆಯಿಂದ ಕೈ ತುತ್ತು ಕೊಟ್ಟರು, ಖಾಲಿ ಜೇಬಿನಲ್ಲಿ ಹೋರಾಟಗಳನ್ನು ಪ್ರಾರಂಭಿಸಿದಾಗ ಖರ್ಚಿಗೆ ಹಣ ಕೊಟ್ಟರು, ನನ್ನ ತಪ್ಪುಗಳನ್ನು ತಿದ್ದಿ ಕಿವಿ ಹಿಂಡಿದರು, ರಾಜಕೀಯದ ಸರಿ ತಪ್ಪುಗಳನ್ನು ಹೇಳಿಕೊಟ್ಟರು" ಎಂದು ನೆನಪು ಮಾಡಿಕೊಂಡಿದ್ದಾರೆ.
ಬ್ಯಾನರ್ ಕಟ್ಟುವ ಮೂಲಕ ಆರಂಭ
"33 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬೀದಿಗಳಲ್ಲಿ ಪಕ್ಷದ ಬ್ಯಾನರ್ ಕಟ್ಟುವ ಮೂಲಕ ಆರಂಭವಾದ ನನ್ನ ರಾಜಕೀಯ ಜೀವನ ಇವತ್ತು ಇಲ್ಲಿಯವರೆಗೂ ಬಂದು ನಿಂತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನೂರ ಜನತೆ. ಹೆತ್ತೂಡಲ ಮಗನಂತೆ ನನ್ನನ್ನು ಪೋಷಿಸಿ ಈ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನದ ಋಣ ದೊಡ್ಡದು" ಎಂದು ಭಾವುಕರಾಗಿದ್ದಾರೆ.
ಹೊಸ ರಾಜಕೀಯ ಯಾನ
"ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಸಮಯದಲ್ಲಿ ಹಳೆಯ ನೆನಪಿನ ಹಾಯಿದೋಣಿಗಳು ನನ್ನ ಭಾವ ಕಡಲಿನಲಿ ತೇಲಿ ಹೋಗುತ್ತಿವೆ. ಹೃದಯ ತುಂಬಿ ಬಂದಿದೆ.ನಿಮಗೆ ನಾನು ಸದಾ ಆಭಾರಿ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಜೀವವಿರುವ ತನಕ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ" ಎಂದು ಪೋಸ್ಟ್ ಹಾಕಿದ್ದಾರೆ.