ರಾಹುಲ್ ಗಾಂಧಿ ವಿರುದ್ಧದ ಸುಕನ್ಯಾ ದೇವಿ ಅತ್ಯಾಚಾರ ಆರೋಪ ಕೆದಕಿದ ಸಿ.ಟಿ ರವಿ
ಬೆಂಗಳೂರು, ಡಿಸೆಂಬರ್ 7: ಭಾರತವು ಜಗತ್ತಿನ ಅತ್ಯಾಚಾರಗಳ ರಾಜಧಾನಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
'ಹಿಂಸಾಚಾರದಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿ ಈ ದೇಶವನ್ನು ಆಳುತ್ತಿದ್ದಾರೆ. ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿರುವುದಕ್ಕೆ ಕಾರಣವೇ ಇದು. ಇಂದಿನ ಸ್ಥಿತಿ ಹೇಗಿದೆಯೆಂದರೆ ಭಾರತವು ಜಗತ್ತಿನ ಅತ್ಯಾಚಾರದ ರಾಜಧಾನಿಯಾಗಿಬಿಟ್ಟಿದೆ' ಎಂದು ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
ಅದಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ, ರಾಹುಲ್ ಗಾಂಧಿ ವಿರುದ್ಧ ಹಲವು ವರ್ಷಗಳ ಹಿಂದೆ ಕೇಳಿಬಂದಿದ್ದ ಅತ್ಯಾಚಾರ ಆರೋಪದ ಕುರಿತು ಪ್ರಸ್ತಾಪಿಸಿದ್ದಾರೆ. ಈ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ಸುಪ್ರೀಂಕೋರ್ಟ್ 2012ರಲ್ಲಿ ರಾಹುಲ್ ಗಾಂಧಿ ವಿರುದ್ಧ ಅರ್ಜಿ ಸಲ್ಲಿದ್ದ ಸಮಾಜವಾದಿ ಪಕ್ಷದ ಶಾಸಕ ಕಿಶೋರ್ ಸಮ್ರಿತೆಗೆ ಛೀಮಾರಿ ಹಾಕಿತ್ತು.
ಭಾರತದ ಯಾವುದೇ ನಿಜವಾದ ಪುತ್ರ, ದೇಶವನ್ನು ಅತ್ಯಾಚಾರದ ರಾಜಧಾನಿ ಎಂದು ಕರೆಯಲಾರ. ತಿರುಚಲ್ಪಟ್ಟ ಮನಸ್ಥಿತಿಯ ಹೊರಗಿನವರು ಮಾತ್ರ ಅಂತಹ ನಾನ್ಸೆನ್ಸ್ ವಿಚಾರ ಮಾತನಾಡಬಲ್ಲರು ಎಂದು ರಾಹುಲ್ ಗಾಂಧಿ ವಿರುದ್ಧ ಸಿ.ಟಿ. ರವಿ ಹರಿಹಾಯ್ದಿದ್ದಾರೆ.
ಸುಕನ್ಯಾ ದೇವಿ ಪರ ಏಕೆ ಹೋರಾಡುತ್ತಿಲ್ಲ?
ಹೆಚ್ಚಿನ ಅತ್ಯಾಚಾರಿಗಳು ಒಂದಲ್ಲ ಒಂದು ಬಗೆಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ಆದರೆ ಸುಕನ್ಯಾ ದೇವಿ ಅವರ ಅತ್ಯಾಚಾರಿ ಹೊರಗೆ ಮುಕ್ತವಾಗಿ ಓಡಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸುಕನ್ಯಾ ದೇವಿಯ ಪರವಾಗಿ ಏಕೆ ಹೋರಾಡುತ್ತಿಲ್ಲ? ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಕೇರಳ: ಅತ್ಯಾಚಾರ ಆರೋಪಿಗೆ ಸಾರ್ವಜನಿಕರಿಂದ ಏಟು
ಅಮೇಥಿಯಲ್ಲಿ ನಡೆದಿದ್ದೇನು?- ಸ್ವಾಮಿ
ಬಿಜೆಪಿಯ ಹಿರಿಯ ನಾಯಕ, ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಈ ಪ್ರಕರಣವನ್ನು ಕೆದಕಿದ್ದಾರೆ. ಭಾರತವು ಅತ್ಯಾಚಾರದ ರಾಜಧಾನಿ ಎಂದು ಬುದ್ದು ಹೇಳಿದರೆ, ಹಾಗಾದರೆ 2006 ರ ಡಿ.5ರಂದು ಅಮೇಥಿಯಲ್ಲಿ ನಡೆದಿದ್ದೇನು? ಎಂದು ಸುಬ್ರಮಣಿಯನ್ ಸ್ವಾಮಿ ಕೇಳಿದ್ದಾರೆ.
ಏನಿದು ಸುಕನ್ಯಾ ದೇವಿ ಪ್ರಕರಣ?
2007ರ ಆರಂಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಕೆಲವು ಬ್ಲಾಗರ್ಗಳು ಅತ್ಯಾಚಾರದ ಆರೋಪದ ಸುದ್ದಿ ಪ್ರಕಟಿಸಿದ್ದರು. ಅಮೇಥಿಯ ಸರ್ಕೀಟ್ ಹೌಸ್ನಲ್ಲಿ 2006ರ ಡಿಸೆಂಬರ್ನಲ್ಲಿ ರಾಹುಲ್ ಗಾಂಧಿ ಮತ್ತು ಅವರ ಸ್ನೇಹಿತರು ಸ್ಥಳೀಯ ಕಾಂಗ್ರೆಸ್ ಮುಖಂಡರ ಮಗಳು ಸುಕನ್ಯಾ ದೇವಿ ಎಂಬಾಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಆ ಮಹಿಳೆ ಮತ್ತು ಪೋಷಕರು ಸೋನಿಯಾ ಗಾಂಧಿ ಅವರಿಗೆ ದೂರು ನೀಡಿದ್ದರು. ಆದರೆ ಸುಕನ್ಯಾ ದೇವಿ ಮತ್ತು ಆಕೆಯ ಕುಟುಂಬ ಬಳಿಕ ನಾಪತ್ತೆಯಾಗಿತ್ತು. ಆಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು ಎಂದು ಆರೋಪಿಸಲಾಗಿತ್ತು.
ಸಾಯುವ ಮುನ್ನಾ ಅತ್ಯಾಚಾರ ಸಂತ್ರಸ್ತೆ ಹೇಳಿದ ಕೊನೆಯ ಮಾತು
ಎಸ್ಪಿ ಶಾಸಕ ಕಿಶೋರ್ ಅರ್ಜಿ
ಸಮಾಜವಾದಿ ಪಕ್ಷದ ಶಾಸಕ ಕಿಶೋರ್ ಸಮ್ರಿತೆ ಅವರು ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ 2011ರ ಮಾರ್ಚ್ನಲ್ಲಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ರಾಹುಲ್ ಗಾಂಧಿ, ಪೊಲೀಸರು ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಬ್ಲಾಗ್ಗಳಿಂದ ತಮಗೆ ಮಾಹಿತಿ ದೊರೆತಾಗ ಆ ಹಳ್ಳಿಗೆ ಹೋಗಿದ್ದೆ. ಅಲ್ಲಿ ಆ ಮನೆಯಲ್ಲಿ ಯಾರೂ ಇರಲಿಲ್ಲ. ಅಕ್ಕಪಕ್ಕದವರಿಗೂ ಅವರ ನಿಗೂಡ ನಾಪತ್ತೆ ಬಗ್ಗೆ ಗೊತ್ತಿರಲಿಲ್ಲ ಎಂದು ಸಮ್ರಿತೆ ಹೇಳಿದ್ದರು.
ಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶ
ತಿರುವು ಪಡೆದುಕೊಂಡಿದ್ದ ಪ್ರಕರಣ
ಆದರೆ ಎರಡೇ ದಿನದಲ್ಲಿ ಕೀರ್ತಿ ಸಿಂಗ್ ಎಂಬ ಹೆಸರಿನ ಯುವತಿ ಅಲಹಾಬಾದ್ ಹೈಕೋರ್ಟ್ನ ಇನ್ನೊಂದು ಪೀಠದ ಮುಂದೆ ತಾನೇ ಸುಕನ್ಯಾ ದೇವಿ ಎಂದು ಹೇಳಿ, ತಮಗೆ ಕೆಟ್ಟ ಹೆಸರು ತರಲು ಸಲ್ಲಿಸಿರುವ ಸಮ್ರಿತೆ ಅವರ ಅರ್ಜಿಯ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು ಎನ್ನಲಾಗಿದೆ. ಹೈಕೋರ್ಟ್ ಇನ್ನೊಂದು ಕಡೆಯ ಅರ್ಜಿಯ ವಿಚಾರಣೆ ನಡೆಸದೆಯೇ ಅತ್ಯಾಚಾರದ ಸುದ್ದಿ ಪ್ರಕಟಿಸಿದ ಬ್ಲಾಗ್ಗಳ ವಿರುದ್ಧ ಮತ್ತು ಅದರ ಹಿಂದಿನ ಸಂಚಿನ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅಲ್ಲದೆ ಸಮ್ರಿತೆ ಅವರ ಮೇಲೆ 50 ಲಕ್ಷ ರೂ. ಮೊತ್ತದ ಭಾರಿ ದಂಡ ವಿಧಿಸಿತ್ತು.
ಛೀಮಾರಿ ಹಾಕಿದ್ದ ಸುಪ್ರೀಂಕೋರ್ಟ್
ಇದರ ವಿರುದ್ಧ ಸಮ್ರಿತೆ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 2012ರ ಅಕ್ಟೋಬರ್ನಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್, ಯಾವುದೇ ಆಧಾರಗಳಿಲ್ಲದೆ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಅವರ ಸಾರ್ವಜನಿಕ ವರ್ಚಸ್ಸನ್ನು ಕೆಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಮ್ರಿತೆ ಅವರಿಗೆ ಐದು ಲಕ್ಷ ರೂ. ದಂಡ ವಿಧಿಸಿತ್ತು.
ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ಆರೋಪ ಮಾಡಲಾಗಿದ್ದ ಇ-ಮೇಲ್ ವಿದೇಶದಿಂದ ಬಂದಿತ್ತು. ಇದರ ಹೊರತಾಗಿ ಆರೋಪದ ಕುರಿತು ಯಾವುದೇ ಪುರಾವೆ ಇರಲಿಲ್ಲ. ಸುಳ್ಳು ಆರೋಪಗಳ ಆಧಾರದಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ರಾಜಕೀಯ ದುರುದ್ದೇಶವಿದೆ. ಇದರಿಂದ ನ್ಯಾಯಾಲಯದ ಸಮಯ ಹಾಳು ಮಾಡಲಾಗಿದೆ. ಅಲ್ಲದೆ, ಅತ್ಯಾಚಾರದ ಸಂತ್ರಸ್ತೆ ಎಂದು ಹೇಳಲಾದ ಕುಟುಂಬದವರನ್ನು ನ್ಯಾಯಾಲಯಕ್ಕೆ ಎಳೆದು ತರುವ ಮೂಲಕ ಅವರಿಗೆ ತೊಂದರೆ ಉಂಟುಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.