ಸಿ. ಟಿ. ರವಿ ರಾಜೀನಾಮೆ?; ಸರ್ಕಾರಿ ಕಾರು ವಾಪಸ್!
ಬೆಂಗಳೂರು, ಆಗಸ್ಟ್ 26 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿ. ಟಿ. ರವಿ ಮುಂದಾಗಿದ್ದಾರೆ.
ಸೋಮವಾರ ರಾತ್ರಿ ಯಡಿಯೂರಪ್ಪ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಚಿಕ್ಕಮಗಳೂರು ಶಾಸಕ, ಹಿರಿಯ ನಾಯಕ ಸಿ. ಟಿ. ರವಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆಗಳ ಹೊಣೆ ವಹಿಸಲಾಗಿದೆ.
ಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿ
ನಿರೀಕ್ಷೆ ಮಾಡಿದ ಖಾತೆ ಸಿಗದ ಕಾರಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮಂಗಳವಾರ ಅವರು ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಸರ್ಕಾರಿ ಕಾರನ್ನು ಈಗಾಗಲೇ ಅವರು ವಾಪಸ್ ಕಳಿಸಿದ್ದಾರೆ.
ಕೊನೆಗೂ ಅಧಿಕೃತ : ಕರ್ನಾಟಕಕ್ಕೆ 3 ಉಪಮುಖ್ಯಮಂತ್ರಿಗಳು
ಸಿ. ಟಿ. ರವಿ ಮಂಗಳವಾರ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಸೇರಿದಂತೆ ಪ್ರಮುಖವಾದ ಖಾತೆಯ ಮೇಲೆ ಸಿ. ಟಿ. ರವಿ ನಿರೀಕ್ಷೆ ಇಟ್ಟುಕೊಂಡಿದ್ದರು.
ಸಿ. ಟಿ. ರವಿ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿ ನೇಮಕವಾದರು. ಬಳಿಕ ಪ್ರಬಲವಾದ ಖಾತೆ ಸಿಗಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಈಗ ಅದು ಕೂಡಾ ಹುಸಿಯಾಗಿದೆ.
ಸಿ. ಟಿ. ರವಿ ಟ್ವೀಟ್ : ಸಿ. ಟಿ. ರವಿ ಅವರು ಟ್ವೀಟ್ ಮಾಡಿದ್ದು, "ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ" ಎಂದು ಹೇಳಿದ್ದಾರೆ.
"ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ" ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.