3 ಮಕ್ಕಳಿರುವ ಕುಟುಂಬಕ್ಕಿಲ್ಲ ಸರ್ಕಾರಿ ಸವಲತ್ತು; ಕರ್ನಾಟಕದಲ್ಲಿ ಹೊಸ ಜನಸಂಖ್ಯೆ ನೀತಿ!?
ಬೆಂಗಳೂರು, ಜುಲೈ 13: ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಜನಸಂಖ್ಯೆ ಮಸೂದೆಯನ್ನು ಕರ್ನಾಟಕದಲ್ಲು ಜಾರಿಗೊಳಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಸುಳಿವು ನೀಡಿದ್ದಾರೆ.
ಕರ್ನಾಟಕದಲ್ಲಿ ಜನಸಂಖ್ಯೆ ನಿಯಂತ್ರಿಸುವ ಹೊಸ ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮೈ ಸ್ಪಷ್ಟಪಡಿಸಿದ್ದಾರೆ. ಹೊಸ ಜನಸಂಖ್ಯೆ ನೀತಿ ಜಾರಿಗೂ ಮೊದಲು ಈ ಬಗ್ಗೆ ಚರ್ಚೆ ನಡೆಸಬೇಕಾಗುತ್ತದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎದುರಿಗೆ ಈ ಬಗ್ಗೆ ಮೊದಲು ಪ್ರಸ್ತಾಪಿಸಬೇಕಾಗುತ್ತದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ.
3 ಮಕ್ಕಳಿರುವ ಪೋಷಕರಿಗಿಲ್ಲ ಸರ್ಕಾರಿ ಸೌಲಭ್ಯ: ಇದಪ್ಪಾ ಹೊಸ ಜನಸಂಖ್ಯಾ ನೀತಿ!
ರಾೈಜ್ಯದಲ್ಲಿ ಗೃಹ ಸಚಿವರ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ಮುಖಂಡ ಸಿ ಟಿ ರವಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಉತ್ತರ ಪ್ರದೇಶ ಮತ್ತು ಅಸ್ಸಾಂ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಿಸುವುದಕ್ಕೆ ಹೊಸ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜನಸಂಖ್ಯೆ ನೀತಿ ಬದಲಾವಣೆಗೆ ಟ್ವೀಟ್ ಬೆಂಬಲ
"ನಮ್ಮಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲಭ್ಯತೆಯು ಸೀಮಿತ ಪ್ರಮಾಣದಲ್ಲಿದೆ. ಒಂದು ವೇಳೆ ಜನಸಂಖ್ಯೆ ಮಿತಿ ಮೀರಿ ಹೆಚ್ಚಳವಾದರೆ ಎಲ್ಲ ಪ್ರಜೆಗಳ ಅಗತ್ಯತೆಗಳನ್ನು ಪೂರೈಸುವುದು ದೊಡ್ಡ ಸವಾಲು ಆಗುತ್ತದೆ," ಎಂದು ಬಿಜೆಪಿ ಮುಖಂಡ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ನೂತನ ಜನಸಂಖ್ಯಾ ಮಸೂದೆಗೆ ಸಿ ಟಿ ರವಿ ಜೊತೆಗೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಉಲ್ಲೇಖ
ಭಾರತದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ 2020ರ ವೇಳೆಗೆ ಪ್ರತಿ ಮಹಿಳೆಗೆ 2.2ರಷ್ಟು ಮಕ್ಕಳು ಜನಿಸುತ್ತಿದ್ದಾರೆ. 2016ರ ನೀತಿ ಆಯೋಗದ ಅಂಕಿ-ಅಂಶಗಳ ಪ್ರಕಾರ, ಜನನ ಪ್ರಮಾಣ ಉತ್ತರ ಪ್ರದೇಶ 3.1, ಬಿಹಾರ 3.3, ಛತ್ತೀಸ್ ಗಢ 2.5, ಮಧ್ಯಪ್ರದೇಶ 2.8ರಷ್ಟಿದೆ. ದಕ್ಷಿಣ ಭಾರತದ ಪೈಕಿ ಆಂಧ್ರ ಪ್ರದೇಶ 1.7, ಕರ್ನಾಟಕ 1.8, ಕೇರಳ 1.8, ತೆಲಂಗಾಣ 1.7, ತಮಿಳುನಾಡು 1.6ರಷ್ಟಿದ್ದು, ದೇಶದಲ್ಲಿ ಸರಾಸರಿ ಜನನ ಪ್ರಮಾಣ 2.1ರಷ್ಟಿದೆ.
ಕರ್ನಾಟಕದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವ ವೇಳೆ ನಿಯಂತ್ರಣ?
ಕರ್ನಾಟಕದಲ್ಲಿ ಈಗಾಗಲೇ ಜನಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ದೀರ್ಘಾವಧಿ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಅದಾಗ್ಯೂ, ಆಡಳಿತ ಪಕ್ಷ ಬಿಜೆಪಿಯು ತನ್ನ ನಾಯಕರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಬಿಜೆಪಿ ವಕ್ತಾರ ಎಸ್ ಪ್ರಕಾಶ್ ಈ ಬಗ್ಗೆ ಮಾತನಾಡಿದ್ದಾರೆ. "ಭಾರತದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಬೇಕಿದೆ, ಅದು ಎಲ್ಲರಿಂದ ಮಾತ್ರ ಸಾಧ್ಯವಾಗುತ್ತದೆ. ಇದು ಕೇವಲ ಒಂದು ರಾಜ್ಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಜನಸಂಖ್ಯೆ ನಿಯಂತ್ರಿಸುವುದಕ್ಕೆ ಅಂಥದೊಂದು ನೀತಿಯನ್ನು ಜಾರಿಗೊಳಿಸುವ ಪ್ರಸ್ತಾಪ ಬಂದರೆ ಅದನ್ನು ಸ್ವಾಗತಿಸಲಾಗುವುದು," ಎಂದು ಹೇಳಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಯುುಪಿ ಸರ್ಕಾರ ಮುಂದು
ಉತ್ತರಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, 2021 ಎಂಬ ಶೀರ್ಷಿಕೆಯ ಪ್ರಸ್ತಾವಿತ ಶಾಸನವು ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ವರ್ಷದ ನಂತರ ಜಾರಿಗೆ ಬರಲಿದೆ. ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್ಎಲ್ಸಿ)ದ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಈ ಶಾಸನದ ನಿಬಂಧನೆಯು ವಿವಾಹಿತ ದಂಪತಿಗಳಿಗೆ ಅನ್ವಯಿಸುತ್ತದೆ. 21 ವರ್ಷ ಮೇಲ್ಪಟ್ಟ ಪುರುಷ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಜುಲೈ 19ರವರೆಗೂ ಸಾರ್ವಜನಿಕರಿಂದ ಸಲಹೆ ಸೂಚನೆ ಮತ್ತು ಅಭಿಪ್ರಾಯ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.
ಹೊಸ ಜನಸಂಖ್ಯಾ ನೀತಿಯಲ್ಲಿ ಇರುವ ಪ್ರಮುಖ ಅಂಶ
* ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವಂತಿಲ್ಲ
* ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ
* ಸರ್ಕಾರದ ಯಾವುದೇ ವಿನಾಯಿತಿ ಯೋಜನೆಗಳನ್ನು ಪಡೆಯುವುದಕ್ಕೆ ಅರ್ಹ ಇರುವುದಿಲ್ಲ
* ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ
* ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರೋತ್ಸಾಹ ಧನ
* ಸರ್ಕಾರದ ನಿಯಮ ಪಾಲಿಸುವ ಸರ್ಕಾರಿ ನೌಕರರಿಗೆ ಇಡೀ ಸೇವಾವಧಿಯಲ್ಲಿ ಎರಡು ಬಾರಿ ವೇತನ ಹೆಚ್ಚಳ
* ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ನಿಧಿ ಹೆಚ್ಚಳ
* ಗರ್ಭಧಾರಣೆ, ಹೆರಿಗೆ, ಜನನ ಮತ್ತು ಸಾವುಗಳ ಕಡ್ಡಾಯ ನೋಂದಣಿ
* ಮಾಧ್ಯಮಿಕ ಶಾಲೆಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಡ್ಡಾಯ ವಿಷಯ ಸೇರ್ಪಡೆ
Recommended Video