ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯ
Recommended Video
ಅತೃಪ್ತ ಶಾಸಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಬಿಜೆಪಿಯ ಆಪರೇಷನ್ ಕಮಲ ಮೂಲಕ ಯತ್ನಿಸಿ ವಿಫಲವಾಗಿದ್ದು ನೆನಪಿರಬಹುದು. ಕರ್ನಾಟಕದ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಯಡಿಯೂರಪ್ಪ ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ನಿರೀಕ್ಷೆಯೂ ಇತ್ತು.
ಆದರೆ, ಬಿಜೆಪಿ ಯತ್ನ ಸಫಲವಾಗಲಿಲ್ಲ. ನಂತರ ಲೋಕಸಭೆ ಚುನಾವಣೆ ಎದುರಾಯಿತು. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕ್ಲಿಕ್ ಆಗಲಿಲ್ಲ, ಮೋದಿ ಅಲೆಗೆ ಮತ್ತೆ ಬೆಲೆ ಸಿಕ್ಕಿದ್ದಲ್ಲದೆ, ಬಿಜೆಪಿ 25 ಸ್ಥಾನ ಗಳಿಸಿತು, ಕಾಂಗ್ರೆಸ್, ಜೆಡಿಎಸ್ ತಲಾ 1 ಸ್ಥಾನ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಒಬ್ಬರು (ಸುಮಲತಾ ಅಂಬರೀಷ್) ಗೆಲುವು ಸಾಧಿಸಿದರು.
ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್
ಲೋಕಸಭೆ ಚುನಾವಣೆ ಫಲಿತಾಂಶದ ನಂತರ(ಮೇ 23) ಒಂದಷ್ಟು ಖಾಸಗಿ ಸುದ್ದಿವಾಹಿನಿಗಳು ಸಮೀಕ್ಷೆ ನಡೆಸಿ, ಈ ವೇಳೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಫಲಿತಾಂಶ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು. ಈ ವರದಿ ಪ್ರಕಾರ, ಬಿಜೆಪಿ 150ಪ್ಲಸ್ ಸ್ಥಾನ ಗೆಲ್ಲಬಹುದು ಎಂದು ಹೇಳಲಾಯಿತು. ಇದಾದ ಬಳಿಕ, ಅತೃಪ್ತ ಶಾಸಕರಲ್ಲಿ ತಳಮಳ ಶುರುವಾಯಿತು.
ಬ್ರೇಕಿಂಗ್: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ
ಅತೃಪ್ತರನ್ನು ಶಮನಗೊಳಿಸಲು ಕೈ-ತೆನೆ ನಾಯಕರು ಸಚಿವ ಸಂಪುಟ ವಿಸ್ತರಣೆ ದಾಳ ಉರುಳಿಸಿದರು. ಪಕ್ಷೇತರರನ್ನು ಸೆಳೆದುಕೊಂಡರು. ಸಂಪುಟಕ್ಕೆ ಸೇರಿಸಿಕೊಂಡು ಸರ್ಕಾರಕ್ಕೆ ತಕ್ಷಣಕ್ಕೆ ಬೇಕಿದ್ದ ಆಮ್ಲಜನಕ ಒದಗಿಸಿದರು. ಆದರೆ, ಜೂನ್ ಅಂತ್ಯಕ್ಕೆ ಆಷಾಢ ಇನ್ನೇನು ಆರಂಭ ಎನ್ನುವಾಗ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿ, ಮತ್ತೊಮ್ಮೆ ರಾಜಕೀಯ ಚಟುವಟಿಕೆ, ಊಹಾಪೋಹ, ನಂಬರ್ ಗೇಮ್ ಗೆ ಚಾಲನೆ ನೀಡಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಆತುರದ ನಡೆ ಇಡುತ್ತಿಲ್ಲ.
ಬಿಜೆಪಿ ಮುಂದಿನ ನಡೆ ಇನ್ನೂ ನಿಗೂಢ
ಸತತ ಎರಡು ಬಾರಿ ವಿಫಲವಾದ ಬಳಿಕ ಮುಂದಿನ ಅಧಿವೇಶನ(ಜುಲೈ 12 ರಿಂದ 20)ದಲ್ಲಿ ತನ್ನ ನಡೆ ಇಡಲು ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೆ, ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಏನೇ ಹರಸಾಹಸ ಪಟ್ಟರೂ, ರಾಜ್ಯಪಾಲರು ಶಾಸಕರುಗಳ ಸರಣಿ ರಾಜೀನಾಮೆ ಅಂಗೀಕರಿಸಿದರೂ, ಬಿಜೆಪಿಯ ಸರ್ಕಾರ ರಚನೆ ಕನಸನ್ನು ಭಂಗಗೊಳಿಸುವ ಅಧಿಕಾರ ಸ್ಪೀಕರ್ ಕೈಲಿದೆ ಎಂಬ ಆಭಯದೊಂದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕದಲ್ಲಿದ್ದಾರೆ.
ಸರ್ಕಾರಕ್ಕೆ ಸಂಚಕಾರ ಯಾವಾಗ ಎದುರಾಗಬಹುದು
ಕಳೆದ ಅಧಿವೇಶನದಲ್ಲಿ ಸುಮಾರು 12ಕ್ಕೂ ಅಧಿಕ ಶಾಸಕರು ಗೈರಾಗುವ ನಿರೀಕ್ಷೆಯಿತ್ತು. ಆದರೆ, ಬಿಜೆಪಿಗೆ ಸರಿಯಾದ ಸಂಖ್ಯಾಬಲ ಸಿಗಲಿಲ್ಲ. ಹೆಚ್ಚಿನ ಶಾಸಕರ ಬಲ ಸಿಕ್ಕರೆ, ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾದಿದ್ದರು. ಈಗ ಅನಂದ್ ಸಿಂಗ್, ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದರೂ ಅಗತ್ಯ ಸಂಖ್ಯಾಬಲ ಹೊಂದಿರುವ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಅವರಂತೆಯೇ ಇತರೆ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಸಂಚಕಾರ ಎದುರಾಗುವುದು ನಿಶ್ಚಿತ.
ವಿಧಾನಸಭೆಯಲ್ಲಿ ಸಂಖ್ಯಾ ಬಲ ಎಷ್ಟಿದೆ.
ಸದ್ಯ ಕಾಂಗ್ರೆಸ್ 79 ಸ್ಥಾನ ಹೊಂದಿದ್ದು, ಇಬ್ಬರ ರಾಜೀನಾಮೆ ಅಂಗೀಕಾರವಾದರೆ ಬಳಿಕ 77ಕ್ಕೆ ಕುಸಿಯಲಿದೆ, ಈ ಪೈಕಿ ರೋಷನ್ ಬೇಗ್ ಅಮಾನತುಗೊಂಡಿದ್ದು, ಕಾಂಗ್ರೆಸ್ ಶಾಸಕರ ಸಂಖ್ಯೆ 76 ಆಗಿದೆ. ಜೆಡಿಎಸ್ 37 ಹಾಗೂ ಬಿಎಸ್ ಪಿ 1 ಹೊಂದಿದೆ. ಮೈತ್ರಿ ಸರ್ಕಾರ 117 ಸ್ಥಾನ ಹೊಂದಿದ್ದು, ಮ್ಯಾಜಿಕ್ ನಂಬರ್ 112 ದಾಟಿ ಸುಸ್ಥಿತಿಯಲ್ಲಿದೆ.
ಬಿಜೆಪಿ 105 ಸ್ಥಾನ ಹೊಂದಿದ್ದು, ಕೆಪಿಜೆಪಿ 1, ಪಕ್ಷೇತರ 1 ಇಬ್ಬರು ಈಗ ಸರ್ಕಾರದ ಭಾಗವಾಗಿದ್ದಾರೆ. ಹೀಗಾಗಿ, ಸರ್ಕಾರ ಬೀಳಿಸಬೇಕಾದರೆ ಕನಿಷ್ಠ 14 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಬೇಕು. ನಂತರ ನಡೆಯುವ ಉಪ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನ ಗೆಲ್ಲಬೇಕು.
20 ಶಾಸಕರೂ ಬೇಕಾದರೂ ರಾಜೀನಾಮೆ ಕೊಡಲಿ
ತಮಗೆ ಯಾರೂ ರಾಜೀನಾಮೆ ಸಲ್ಲಿಸಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಪಕ್ಷದಲ್ಲಿನ ಬಂಡಾಯದ ವಿಚಾರವಾಗಿ ಕೂಡ ತಮಗೆ ಮಾಹಿತಿ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. 20 ಶಾಸಕರೂ ಬೇಕಾದರೂ ರಾಜೀನಾಮೆ ಕೊಡಲಿ. ಕಾಂಗ್ರೆಸ್ನವರಾದರೂ ರಾಜೀನಾಮೆ ಕೊಡಲಿ, ಬಿಜೆಪಿಯವರಾದರೂ ಕೊಡಲಿ. ರಾಜೀನಾಮೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.
ಇದು ತಾಂತ್ರಿಕವಾಗಿ ನಿಜ, ಇಬ್ಬರು ಅಲ್ಲ 20 ಶಾಸಕರು ರಾಜೀನಾಮೆ ಸಲ್ಲಿಸಿದರೂ ಖುದ್ದು, ರಮೇಶ್ ಕುಮಾರ್ ಎದುರು ಹಾಜರಾಗಬೇಕು. ರಾಜೀನಾಮೆ ಅಂಗೀಕರಿಸುವುದು ಬಿಡುವುದು, ಯಾವಾಗ ಅಂಗೀಕರಿಸಬೇಕು ಎಂಬುದು ಸ್ಪೀಕರ್ ಆಯ್ಕೆಗೆ ಬಿಟ್ಟಿದ್ದು, ಇದನ್ನು ಶಾಸಕರು ಪ್ರಶ್ನಿಸುವಂತಿಲ್ಲ.ಮುಂದಿನ ಅಧಿವೇಶನ ಕುತೂಹಲಕಾರಿ
''ನಾವು ಆತಂಕ ಪಡುವಂಥ ಬೆಳವಣಿಗೆಯೇನೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಮಳೆಯಾಗಿಲ್ಲ, ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ". ನಾಲ್ಕು ಶಾಸಕರಲ್ಲ, ನಲವತ್ತು ಶಾಸಕರು ರಾಜೀನಾಮೆ ನೀಡಲಿ ಬಿಡಿ. ಸ್ವೀಕರಿಸುತ್ತೇನೆ, ನನಗೇನು?' ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಒಂದು ವೇಳೆ ಮುಂದಿನ ಅಧಿವೇಶನದಲ್ಲಿ ಬಿಜೆಪಿ ಏನಾದರೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಆಗ ಚಿತ್ರಣ ಬದಲಾಗುತ್ತದೆ ಆದರೆ, ಈ ಬಾರಿ ಬಿಜೆಪಿ ಈ ನಡೆ ಇಡದಂತೆ ಹೈಕಮಾಂಡ್ ನಿಂದ ಆದೇಶ ಬಂದಿದೆ.