ರಾಜ್ಯದಲ್ಲಿ ದಿನಕ್ಕೆ ಕನಿಷ್ಠ ಒಂದು ಅತ್ಯಾಚಾರ: ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಳ
ಬೆಂಗಳೂರು, ಆಗಸ್ಟ್ 27: ರಾಜ್ಯದಲ್ಲಿ ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೇ ಆತಂಕದ ಮಾಹಿತಿಯೊಂದು ತಿಳಿದುಬಂದಿದೆ.
ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ
ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ಜನವರಿಯಿಂದ ಮೇ 2021ರವರೆಗೆ ಸುಮಾರು 1, 168 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಪ್ರತಿದಿನ ಸರಾಸರಿ ಒಂದು ಅತ್ಯಾಚಾರ ಘಟನೆ ನಡೆಯುತ್ತಿದೆ.
22 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚು ಭೀತಿ ಹುಟ್ಟಿಸಿವೆ. ರಾಜ್ಯದ ಪೊಲೀಸರಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಮಾಹಿತಿ ಲಭ್ಯವಾಗಿದ್ದು, ಪ್ರಸಕ್ತ ಅವಧಿಯಲ್ಲಿ 18 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಈ ವರ್ಷದಿಂದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗತೊಡಗಿವೆ.
ಮಹಿಳೆಯರು ಇಂದಿಗೂ ಲೈಂಗಿಕ ಅಪರಾಧಗಳಿಗೆ ಬಲಿಪಶುಯಾಗುತ್ತಿರುವುದು ದುರದೃಷ್ಟಕರ. 2019ರಲ್ಲಿ ಹಿಂಸೆ, ಅಪಹರಣ, ವರದಕ್ಷಣೆ ಸೇರಿದಂತೆ 10,227 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಈ ಪ್ರಕರಣಗಳ ಸಂಖ್ಯೆ 10, 761ಕ್ಕೆ ಏರಿಕೆಯಾಯಿತು. 2021 ಮೇ ಅಂತ್ಯದವರೆಗೂ ಮಹಿಳೆಯರ ವಿರುದ್ಧ 4,401 ಪ್ರಕರಣಗಳು ವರದಿಯಾಗಿವೆ.
ಕೊರೋನಾ ಲಾಕ್ಡೌನ್ ನಂತರ ಕಳವು, ಡಕಾಯಿತಿ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳು ನಂತರು ನಿಂತಿಲ್ಲ. ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 400 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಇಂತಹ ಹೀನ ಕೃತ್ಯಗಳು ಮುಂದೆ ಸಂಭವಿಸದಂತೆ ಅತ್ಯಾಚಾರಿಗಳನ್ನು ಶಿಕ್ಷಿಸಲು ಹೊಸ ಕಾನೂನಿನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಳೆದ ಎರಡೂ ವರ್ಷಗಳಲ್ಲಿ ಮಹಿಳೆಯರ ವಿರುದ್ಧ ಅಮಾನವೀಯ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದೆ.
ಮಹಿಳೆಯರ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದರೂ ಇಂತಹ ಪ್ರಕರಣಗಳು ರಾಜ್ಯದ ಎಲ್ಲಾ ಕಡೆ ನಡೆಯುತ್ತಲೇ ಇದೆ.
ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯದ ಭದ್ರತೆ ವಿಚಾರದಲ್ಲಿ ಕಳಂಕವಾಗಿ ಪರಿಣಮಿಸಿದ್ದು, ಇಡೀ ಕರ್ನಾಟಕವೇ ದೇಶಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈಗಾಗಲೇ ಕಾಮುಕರ ಬಂಧನಕ್ಕೆ ಬಲೆಬೀಸಿದ್ದು, ಈಗಾಗಲೇ ಪೊಲೀಸರು ತಂಡೋಪಾದಿಯಾಗಿ ಅಪರಾಧಿಗಳ ಪತ್ತೆ ಬಲೆ ಬೀಸಿದೆ.
ಈ ಮಧ್ಯೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯ ಜೊತೆಗಿದ್ದ ಸ್ನೇಹಿತ ದುಷ್ಕರ್ಮಿಗಳ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಕುರಿತು ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿದೆ. ಹಲ್ಲೆಗೊಳಗಾದ ಯುವಕ ನೀಡಿರೋ ಮಾಹಿತಿ ಪ್ರಕಾರ ಅವರಿಬ್ಬರು ಜಾಗಿಂಗ್ಗೆ ಹೋದ ಸಂದರ್ಭದಲ್ಲಿ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ತನ್ನ ಮೇಲೂ ದಾಳಿ ನಡೆದಿರುವುದಾಗಿ ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಯುವಕ ನೀಡಿರೋ ಮಾಹಿತಿ ಪ್ರಕಾರ, 'ಆಗಸ್ಟ್ 24ರ ಸಂಜೆ 7.30ರ ಸುಮಾರಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಾಟರ್ ಟ್ಯಾಂಕ್ ಬಳಿಯ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ದಿನಾಲೂ ಜಾಗಿಂಗ್ಗೆ ಹೋಗುವ ಸ್ಥಳ ಅದಾಗಿದ್ದು, ಈ ವೇಳೆ ಬೈಕ್ ನಿಲ್ಲಿಸಿದಾಗ 25-30 ವರ್ಷದ ಸುಮಾರು ಆರು ಮಂದಿ ಯುವಕರು ಬಂದು ಏಕಾಏಕಿ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದರು.
ನಂತರ ನನ್ನನ್ನು ಕೆಳಕ್ಕೆ ತಳ್ಳಿ ನನ್ನ ಗೆಳತಿಯನ್ನು ಪೊದೆಯೊಳಗೆ ಎಳೆದುಕೊಂಡು ಹೋದರು. ಈ ವೇಳೆ ಅವರ ಜೊತೆಗಿದ್ದ ತೆಳ್ಳಗಿನ ವ್ಯಕ್ತಿಯೊಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆ ಏಟಿಗೆ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಹದಿನೈದು ನಿಮಿಷದ ನಂತರ ನನಗೆ ಪ್ರಜ್ಞೆ ಬಂತು. ಆಗ ಆ ಯುವಕರು ನನ್ನ ತಂದೆಗೆ ಫೋನ್ ಮಾಡಿಸಿ 3 ಲಕ್ಷ ಕೊಡುವಂತೆ ಒತ್ತಾಯ ಮಾಡಿದರು.
Recommended Video
ನಾನು ನನ್ನ ಗೆಳತಿ ಎಲ್ಲಿ ಎಂದು ಕೇಳಿದಾಗ ಅವಳನ್ನು ಪೊದೆಯಿಂದ ಎಳೆದುಕೊಂಡು ಬಂದು ನನ್ನ ಬಳಿ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳ ದೇಹದ ಮೇಲೆ ತರಚಿದ ಗಾಯಗಳಾಗಿತ್ತು' ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವಕ ಹೇಳಿದ್ದಾನೆ.