ಕಾರ್ಪೋರೇಟ್ ಲೂಕಿಗೆ ಬೊಮ್ಮಾಯಿ ಬಜೆಟ್ ನೆರವು ಎಂದ ಸಿಪಿಐ(ಎಂ)
ಬೆಂಗಳೂರು, ಮಾರ್ಚ್ 4: ಕರ್ನಾಟಕ ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ರಾಜ್ಯದ ಜನತೆಯ ಮೇಲೆ ಹೊಸದಾಗಿ 72,000 ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊರಿಸಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ದೂಷಿಸಿದೆ.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2,65,720 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆದರೆ ಸತತ ಅತಿವೃಷ್ಟಿ, ಪ್ರವಾಹ ಹಾಗೂ ಕೊವಿಡ್-19 ಸಂಕಷ್ಠದಿಂದ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಜ್ಯವನ್ನು ಮೇಲೆತ್ತುವ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ. ಅದರ ಬದಲಿಗೆ ಜನತೆಯ ಸಂಕಷ್ಟವನ್ನು ಮತ್ತಷ್ಠು ಹೆಚ್ಚಿಸುವ ಬಜೆಟ್ ಇದಾಗಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಯು ಬಸವರಾಜ್ ಖಂಡಿಸಿದ್ದಾರೆ.
ಕರ್ನಾಟಕ ಬಜೆಟ್ 2022: ಯಾವ ಇಲಾಖೆಗೆ ಎಷ್ಟು ಅನುದಾನ, ಇಲ್ಲಿದೆ ವಿವರ
ಬಜೆಟ್ನ ದಿಶೆ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಕ್ಕೆ ಪೂರಕವಾಗಿಯೇ ಮುಂದುವರೆದಿದೆ. ಆದ್ದರಿಂದ ಇದರಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಅನ್ನು ತಡೆಯುವ ಬಗ್ಗೆ ಉಲ್ಲೇಖಿಸಿಲ್ಲ. ಇದರ ಜೊತೆಗೆ ಕಾರ್ಮಿಕ ಸಂಹಿತೆಗಳ ಜಾರಿಯನ್ನು ತಡೆಯುವ ಮತ್ತು ಜನ ವಿರೋಧಿ ಹೊಸ ಶಿಕ್ಷಣ ನೀತಿ ವಾಪಾಸ್ ಪಡೆಯುವ ಪ್ರಸ್ಥಾಪಗಳನ್ನು ಮಾಡಲಿಲ್ಲ. ಬದಲಿಗೆ ಅವುಗಳ ಜಾರಿಗೆ ಪೂರಕ ಕ್ರಮಗಳನ್ನು ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಟೀಕಿಸಲಾಗಿದೆ.
ಕನಿಷ್ಠ ವೇತನ ಹೆಚ್ಚಿಸುವ ಬಗ್ಗೆ ಉಲ್ಲೇಖವಿಲ್ಲ:
ರಾಜ್ಯದ ಜನತೆಯ ತಲಾ ಆದಾಯವನ್ನು ಹೆಚ್ಚಿಸುವ ಉದ್ಯೋಗಾವಕಾಶಗಳ ಕುರಿತಾಗಲಿ, ಕನಿಷ್ಠ ವೇತನವನ್ನು 21,000ಕ್ಕೆ ಹೆಚ್ಚಿಸುವ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನದ ಬಗ್ಗೆ ಪ್ರಸ್ತಾಪಗಳಿಲ್ಲ. ಜನತೆಯನ್ನು ಋಣ ಭಾರದಿಂದ ಮುಕ್ತಗೊಳಿಸುವುದಬ ಇಲ್ಲವಾಗಿವೆ.
ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತರಿಗೆ ಹಾಗೂ ಗ್ರಾಮ ಸೇವಕರಿಗೆ ತಲಾ 1000 ರೂ. ಗಳಷ್ಠು ಗೌರವ ವೇತನ ಹೆಚ್ಚಳದ ಪ್ರಸ್ತಾಪ ಬಿಟ್ಟರೆ, ಉಳಿದ ಭಾಗ ಬಹುತೇಕ ಜನತೆಯನ್ನು ಒಡೆದಾಳುವ ಕೋಮುವಾದಕ್ಕೆ ಹಾಗೂ ಜಾತಿವಾದಕ್ಕೆ ಕುಮ್ಮಕ್ಕು ನೀಡುವಂತಹ ಬಜೆಟ್ ಇದಾಗಿದೆ.
ರೈತರಿಗೆ ತಲಾ ಎಕರೆಗೆ 250 ರೂ. ಗಳ ಮತ್ತು 600 ರೂ. ಗಳನ್ನು ಪಡೆಯುವ ದುರ್ಬಲ ಮಾಶಾಸನ ಫಲಾನುಭವಿಗಳಿಗೆ ಕೇವಲ 200 ರೂ. ಗಳ ಹೆಚ್ಚಳವನ್ನು ಬಹಳ ಕನಿಕರದಿಂದ ಮಾಡಲಾಗಿದೆ. ಕಳೆದ ವಾರವಷ್ಠೇ ರಾಜ್ಯ ಸರ್ಕಾರ ತನ್ನ ಮಂತ್ರಿ ಮಂಡಲದ ಹಾಗೂ ಶಾಸಕರ ವೇತನವನ್ನು ಮಾಸಿಕ 20 ರಿಂದ 50 ಸಾವಿರದಷ್ಟು ಹೆಚ್ಚಿಸಿಕೊಂಡಿರುವುದಕ್ಕೆ ಹೋಲಿಸಿದರೆ ಇದು ಒಂದು ರೀತಿಯ ಅಪಹಾಸ್ಯದಂತೆ ಕಾಣುತ್ತದೆ.
Recommended Video
ಕೊವಿಡ್-19 ಸಂಕಷ್ಠದಲ್ಲಿರುವಾಗ ದೇವದಾಸಿ ಮಹಿಳೆಯರು ಸೇರಿದಂತೆ ಹಲವು ಸಮುದಾಯಗಳ ಮಾಶಾಸನವನ್ನು ಕಳೆದ 9 ತಿಂಗಳಿಂದ ನೀಡದೇ ಬಾಕಿ ಉಳಿಸಿಕೊಂಡಿದೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿಯು ತಕ್ಷಣವೇ ರಾಜ್ಯದ ಜನತೆಯ ತಲಾ ಆದಾಯವನ್ನು ಹೆಚ್ಚಿಸುವುದಕ್ಕೆ ಮತ್ತು ರಾಜ್ಯವನ್ನು ಕಾರ್ಪೊರೇಟ್ ಲೂಟಿಕೋರತನದಿಂದ ಮುಕ್ತಗೊಳಿಸುವ ಬಜೆಟ್ ಆಗಿ ಬದಲಾಯಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.