ಶೀತ, ಜ್ವರ ಬಂದರೆ, ಶಾಲಾ ಮಕ್ಕಳಿಗೆ ರಜೆ: ಸರ್ಕಾರದ ಆದೇಶ
ಬೆಂಗಳೂರು, ಮಾರ್ಚ್ 4: ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ಆವರಿಸುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಶೀತ, ಜ್ವರದಿಂದ ಶಾಲಾ ಮಕ್ಕಳು ಬಳಲುತ್ತಿದ್ದರೆ, ಅಂಥವರಿಗೆ ತಕ್ಷಣವೇ ರಜೆ ನೀಡುವಂತೆ ಎಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಆದೇಶಿಸಿದೆ. ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ
ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅವರಿಗೆ ರಜೆ ಮಂಜೂರು ಮಾಡಬೇಕು. ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ದೃಢೀಕರಿಸಿದ ಬಳಿಕವಷ್ಟೇ ಅವರು ಮರಳಿ ಶಾಲೆಗೆ ಬರಲು ಅನುಮತಿ ನೀಡಬೇಕು.
ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿ ಅಥವಾ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಲ್ಲಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿದೆ. ವಿದ್ಯಾರ್ಥಿ ಅಥವಾ ಸಿಬ್ಬಂದಿ ಪೈಕಿ ಇತ್ತೀಚೆಗೆ ಚೀನಾದಿಂದ ಬಂದವರು, ಅಥವಾ ವಿದೇಶದಿಂದ ಬಂದ ಸೋಂಕಿತರಿದ್ದರೆ ಅವರನ್ನು ಕೊರೋನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ.