ಕೊರೊನಾ ಮೂರನೇ ಅಲೆಯ ಭೀಕರತೆ ಬಗ್ಗೆ ಎಚ್ಚರಿಕೆ: ತಜ್ಞ ವೈದ್ಯರು ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 11: ಕೊರೊನಾ ಸೋಂಕಿನಲ್ಲಿ 25 ಸಾವಿರ ರೂಪಾಂತರಿಗಳಿವೆ. ಬರೋಬ್ಬರಿ 8572 ತಳಿಗಳು ಕೋವಿಡ್ ಸೋಂಕಿನಿಂದ ಉತ್ಪತ್ತಿಯಾಗಲಿವೆ. ಮೂರನೇ ಅಲೆ ಬಗ್ಗೆ ನಾವು ಮುಂಜಾಗ್ರತೆ ವಹಿಸದಿದ್ದರೆ ಎರಡನೇ ಅಲೆಗಿಂತಲೂ ಹೆಚ್ಚು ಭೀಕರತೆಯನ್ನು ಎದುರಿಸಬೇಕಾಗುತ್ತದೆ.
ನಮ್ಮ ಬೆಂಗಳೂರು ಫೌಂಡೇಷನ್ ಆಯೋಜಿಸಿದ್ದ "ಮೂರನೇ ಅಲೆ ಹಾಗೂ ಅದರ ಸಾಧಕ ಬಾಧಕಗಳ ಬಗ್ಗೆ ಏರ್ಪಡಿಸಿದ್ದ ಚರ್ಚೆಯಲ್ಲಿ ಎಚ್ಸಿಸಿ ಆಸ್ಪತ್ರೆಯ ಸಂಶೋಧನಾ ಕೇಂದ್ರದ ಡೀನ್ ಡಾ. ಯು.ಎಸ್. ವಿಶಾಲ್ ರಾವ್ ಸೇರಿದಂತೆ ತಜ್ಞರು ವ್ಯಕ್ತಪಡಿಸಿರುವ ಆತಂಕದ ವಿಚಾರವಿದು.
ಎರಡನೇ ಅಲೆಯಿಂದ ಪಾಠ ಕಲಿತಿದ್ದೇವೆ. ಮೂರನೆ ಅಲೆ ಅಪಾಯ ತಪ್ಪಿಸಬೇಕಾದರೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮುಂಜಾಗ್ರತಾ ಕ್ರಮ ವಹಿಸಬೇಕು. ಊಟದಲ್ಲಿ ರುಚಿ ಸಿಕ್ಕಲಿಲ್ಲ ಎಂದರೆ ಕೊರೊನಾ ಸೋಂಕು ಎಂಬ ಅರಿವು ಇದೆ. ಆದರೆ, ನಡವಳಿಕೆಯಲ್ಲಿ ಸಾಮಾನ್ಯ ಜ್ಞಾನ ಇಲ್ಲದ ರೀತಿ ಜನರು ವರ್ತನೆ ಮಾಡುತ್ತಿದ್ದಾರೆ. ಮೂರನೇ ಅಲೆ ಅಬ್ಬರಿಸಿದರೆ ಮತ್ತೆ ಆರೋಗ್ಯ ಸೇವೆಯ ಮೇಲೆ ಒತ್ತಡ ಬಿದ್ದು ಸಂಪೂರ್ಣ ಅದೋಗತಿಗೆ ಇಳಿಯಲಿದೆ ಎಂದು ಡಾ. ವಿಶಾಲ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಸ್ 25 ಸಾವಿರ ಸಲ ರೂಪಾಂತರಗೊಳ್ಳಲಿದ್ದು, 8572 ಹೊಸ ತಳಿಗಳಿವೆ. ವೈರಸ್ ಗೆ ಕೈ ಕಾಲು ಇಲ್ಲದಿದ್ದರೂ, ನಾವೇ ಅದರ ಸಮೀಪ ಹೋಗುತ್ತಿದ್ದೇವೆ. ಜಸಂಖ್ಯೆಯ ಸ್ವಲ್ಪ ಭಾಗವನ್ನು ಮಾತರ ಆಸ್ಪತ್ರೆಗಳು ರಕ್ಷಣೆ ಮಾಡಲಿಕ್ಕೆ ಸಾಧ್ಯ. ಮೂರನೇ ಅಲೆ ಬಗ್ಗೆ ಮೈಮರೆತರೇ ಇಡೀ ಜನಸಂಖ್ಯೆಗೆ ಆರೋಗ್ಯ ಸೇವೆ ಸಿಗುವುದು ಅಸಾಧ್ಯ. ಎರಡನೇ ಅಲೆ ಬಂದ ವೇಳೆ ಮಾರ್ಚ್ ನಲ್ಲಿ ಶೇ. 05 ರಷ್ಟಿದ್ದ ಸೋಂಕು ಏಪ್ರಿಲ್ ಮೊದಲ ಕೊನೆ ವಾರದ ವೇಳೆಗೆ ಶೇ. 25 ರಷ್ಟು ಹಬ್ಬಿತ್ತು. ಎರಡನೇ ಅಲೆಯಿಂದ ನಾವು ಪಾಠ ಕಲಿಯಬೇಕಿದೆ. ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಧರಿಸಿವುದು, ಲಸಿಕೆ ಹಾಕಿಸಿಕೊಳ್ಳುವುದು ನಮಗೆ ಇರುವ ರಕ್ಷಣೆಯ ಮಾರ್ಗಗಳು. ಮೂರನೇ ಅಲೆ ಅಪಾಯದಿಂದ ಪಾರಾಗಲು ಸಿಂಗಪೂರ್ ಮಾದರಿಯಲ್ಲಿ ಮೂರು ಸುರಕ್ಷತಾ ಕ್ರಮ ಪಾಲಿಸಿ ಕರ್ನಾಟಕವನ್ನು ಸುರಕ್ಷಿತ ರಾಜ್ಯವನ್ನಾಗಿ ಮಾಡುವುದು ಜನರ ಕೈಯಲ್ಲಿದೆ ಎಂದು ಡಾ. ಯು.ಎಸ್. ವಿಶಾಲ್ ರಾವ್ ಸಲಹೆ ನೀಡಿದರು.
ಫೋರ್ಟೀಸ್ ಆಸ್ಪತ್ರೆಯ Pulmonology ವಿಭಾಗದ ನಿರ್ದೇಶಕ ಡಾ. ವಿವೇಕ್ ಮಾತನಾಡಿ, ನಮ್ಮ ಆತ್ಮೀಯರು, ಸಂಬಂಧಿಕರು ನಮ್ಮವರನ್ನೇ ಕಳೆದುಕೊಂಡಿದ್ದೇವೆ. ವೈದ್ಯಕೀಯ ಸೇವೆ ಒದಗಿಸಲಾಗದಂತಹ ಪರಿಸ್ಥಿತಿಗೆ ಆರೋಗ್ಯ ಕ್ಷೇತ್ರ ತಲುಪಿದ್ದನ್ನು ನೋಡಿದ್ದೇವೆ. ನಮ್ಮ ಹತ್ತಿರದವನ್ನು ಕಳೆದುಕೊಳ್ಳುತ್ತೀವಿ ಎಂಬ ಅರಿವು ಎಲ್ಲರಿಗೂ ಇರಬೇಕು. ಮೊದಲನೇ ಹಂತದಲ್ಲಿ ಬೆಂಗಳೂರಿನಲ್ಲಿ ಶೇ. 70 ರಷ್ಟು ಮಂದಿಗೆ ಲಸಿಕೆ ಸಿಕ್ಕಿರುವುದು ಸಂತಸದ ವಿಚಾರ.ಮಾಸ್ಕ್ ಧರಸುವ ಮೂಲಕ ಶೇ. 70 ರಷ್ಟು ವೈರಸ್ ಹರಡುವ ಭೀತಿಯಿಂದ ರಕ್ಷಣೆ ಪಡೆಯಬಹುದು ಎಂಬುದನ್ನು ಮರೆಯಬಾರದು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮತ್ತು ಲಸಿಕೆ ಹಾಕಿಸಿಕೊಳ್ಳುವುದನ್ನು ಯಾರೂ ನಿರ್ಲಕ್ಷ್ಯಿಸಬಾರದು ಎಂದರು ಸಲಹೆ ಮಾಡಿದರು.
Recommended Video
ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಕೌಶಲ್ಯ ಅಭಿವೃದ್ಧಿಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಬೆಂಗಳೂರಿನಲ್ಲಿ ಕೊರೊನಾ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ದೇಶದ ಮೂರನೇ ಅಲೆ ಎದುರಸುವ ಸಂಕಷ್ಟ ಸ್ಥಿತಿಯಲ್ಲಿದೆ. ಮೂರನೇ ಅಲೆ ನಿಜವಾಗಿಯೂ ನಮ್ಮ ಮುಂದೆ ಇರುವ ಸವಾಲು ಎಂಬುದು ಜನ ಮರೆಯಬಾರದು. ಕೊರೊನಾದಿಂದ ಈ ಹಿಂದೆ ಆಗಿರುವ ಅನಾಹುತಗಳು ಮತ್ತೆ ಮರುಗಳಿಸದಂತೆ ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಳೆದ ಏಪ್ರಿಲ್ - ಮೇ ನಲ್ಲಿ ಸಂಭವಿಸಿದ ಅವಘಡಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು೯. ಭಾರತದಲ್ಲಿ 500 ಮಿಲಿಯನ್ ಜನರಿಗೆ ಲಸಿಕೆ ನೀಡಿದ್ದು, ಉತ್ತಮ ಸ್ಥಿತಿಯಲ್ಲಿದ್ದೇವೆ. ತುರ್ತು ಬಳಕೆಗೆ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಬಳಕೆಗೆ ಸರ್ಕಾರ ಅನುಮತಿ ನೀಡಿದೆ. ಈ ವರ್ಷಾಂತ್ಯದೊಳಗೆ ನೂರು ಕೋಟಿ ಜನರಿಗೆ ಲಸಿಕೆ ಸಿಗಲಿದೆ ಎಂದು ಅವರು ತಿಳಿಸಿದರು.