ಮೊದಲು ಓದಿ: ಕರ್ನಾಟಕದಲ್ಲಿ ಕೊರೊನಾವೈರಸ್ 2ನೇ ಡೋಸ್ ಲಸಿಕೆ ಸಿಗುವುದು ಸುಲಭವೇ?
ಬೆಂಗಳೂರು, ಜುಲೈ 21: ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವಿನ ವ್ಯತ್ಯಾಸ ಹೆಚ್ಚಿಸಲಾಗಿದೆ. ಇದರ ಹೊರತಾಗಿಯೂ ಮೊದಲ ಡೋಸ್ ಲಸಿಕೆ ಪಡೆದ ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ.
ಕರ್ನಾಟಕದಲ್ಲಿ 2,22,51,400 ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಮೊದಲ ಡೋಸ್ ಪಡೆದ 1.67 ಕೋಟಿ ಜನರು ಇನ್ನೂ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿಲ್ಲ. ಕೊವಿಡ್-19 ಲಸಿಕೆ ಪೂರೈಕೆ ಕೊರತೆಯೇ ಇಷ್ಟಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಲಸಿಕೆ ವಿತರಣೆ: ಮಧ್ಯಮವಯಸ್ಕರಿಗೆ ಮೊದಲ ಆದ್ಯತೆ ಏಕೆ?
ರಾಜ್ಯದಲ್ಲಿ ಕೊರೊನಾವೈರಸ್ ಸರಬರಾಜು ಮತ್ತು ಕೇಂದ್ರ ಸರ್ಕಾರದಿಂದ ಆಗುತ್ತಿರುವ ಪೂರೈಕೆ ಕೊರತೆಯಿಂದ ವಿತರಣೆಯಲ್ಲಿ ವ್ಯತ್ಯವಾಗುತ್ತಿದೆ. ಈ ವ್ಯತ್ಯಾಸವನ್ನು ತಗ್ಗಿಸುವ ಉದ್ದೇಶದಿಂದಲೇ ಎರಡು ಡೋಸ್ ಲಸಿಕೆ ನಡುವಿನ ಅಂತರವನ್ನು ಹೆಚ್ಚಿಸಲಾಗಿತ್ತು. ಈ ಹಿಂದೆ ಮೊದಲ ಡೋಸ್ ಲಸಿಕೆ ಪಡೆದ 6 ರಿಂದ 8 ವಾರಗಳ ನಂತರ ಎರಡನೇ ಡೋಸ್ ಪಡೆಯುವಂತೆ ನಿಯಮವಿತ್ತು. ಈ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲಾಗಿತ್ತು. ಅದಾಗ್ಯೂ, ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಪಡೆದ 2,22,51,400 ಜನರ ಪೈಕಿ 54,52,069 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈ ವ್ಯತ್ಯಾಸ ಮತ್ತು ಕೊರತೆ ಹಿಂದಿನ ಕಾರಣ ಮತ್ತು ಬೆಂಗಳೂರಿನಲ್ಲಿ ಲಸಿಕೆ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಾಸದ ಕುರಿತು ಒಂದು ವರದಿ ಇಲ್ಲಿದೆ ಓದಿ.
ರಾಜ್ಯದಲ್ಲಿ ಮೊದಲಿನಂತೆ ಇಲ್ಲ ಲಸಿಕೆ ಪೂರೈಕೆ ಸ್ಥಿತಿಗತಿ
"ಕೊರೊನಾವೈರಸ್ ಲಸಿಕೆ ವಿತರಣೆ ಮತ್ತು ಪೂರೈಕೆ ಪರಿಸ್ಥಿತಿ ಮೊದಲಿಗಿಂತ ಈಗ ಉತ್ತಮವಾಗಿದೆ. ರಾಜ್ಯದಲ್ಲಿ ಮೊದಲಿಗೆ ಒಂದು ವಾರದಲ್ಲಿ 50 ಬಾಟಲಿ ಲಸಿಕೆಯನ್ನು ಬಳಕೆ ಮಾಡಲಾಗುತ್ತಿತ್ತು. ಇದೀಗ ಮೂರು ದಿನಕ್ಕೆ ಅಷ್ಟು ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿನಿತ್ಯ 600 ರಿಂದ 700 ಮಂದಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಈ ಪೈಕಿ 400 ರಿಂದ 500 ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ," ಎಂದು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ವಿಶೇಷ ವರದಿ: ಕೇಂದ್ರ ಪೂರೈಸಿದ ಕೊರೊನಾವೈರಸ್ ಲಸಿಕೆಯಲ್ಲಿ ಉಳಿದಿರುವುದೆಷ್ಟು?
ಕೆಸಿ ಜನರಲ್ ಆಸ್ಪತ್ರೆ ಮುಂಭಾಗದಲ್ಲಿ No Stock ಫಲಕ
ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ನಂತರದಲ್ಲಿ ಲಸಿಕೆ ಖಾಲಿ ಆಗುತ್ತಿದ್ದಂತೆ ಆಸ್ಪತ್ರೆ ಮುಂಭಾಗದಲ್ಲಿ No Stock ಎಂಬ ನಾಮಫಲಕವನ್ನು ಹಾಕುತ್ತಾರೆ. ಅಲ್ಲಿಂದ ಜನರು ಮತ್ತೆ ದಾಸಪ್ಪ ಆಸ್ಪತ್ರೆಗೆ ತೆರಳುತ್ತಿದ್ದಾರೆ. "ಸಾಮಾನ್ಯವಾಗಿ ವಾರದ ದಿನಗಳಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ 700 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗುತ್ತದೆ. ಅದೇ ಶನಿವಾರ ಮತ್ತು ಭಾನುವಾರದ ದಿನ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಸೇರಿದಂತೆ ಮೊದಲ ಹಾಗೂ ಎರಡನೇ ಡೋಸ್ ಸೇರಿ ಒಟ್ಟು 1,000 ದಿಂದ 1,200 ಜನರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಇಲ್ಲಿ ಯಾವುದೇ ರೀತಿ ಲಸಿಕೆಯ ಕೊರತೆ ಸೃಷ್ಟಿಯಾಗಿಲ್ಲ," ಎಂದು ಕೆ ಸಿ ಜನರಲ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಬಿ ಆರ್ ವೆಂಕಟೇಶ್ವರಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊವಿಡ್-19 ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳ ಪರದಾಟ
ಕರ್ನಾಟಕದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಮತ್ತು ಕೊ-ವಿನ್ ಪೋರ್ಟಲ್ ಮೂಲಕ ಲಸಿಕೆ ಖರೀದಿಗೆ ಅವಕಾಶ ನೀಡಿದ್ದರೂ, ರಾಜ್ಯದ ಖಾಸಗಿ ಆಸ್ಪತ್ರೆಗಳು ಲಸಿಕೆ ಪಡೆದುಕೊಳ್ಳಲು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಸುಗುಣ ಆಸ್ಪತ್ರೆಯು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯಿಂದ ನೇರವಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ಖರೀದಿಸುತ್ತಿದೆ. ಆದರೆ ಕೇಂದ್ರದಿಂದ ಕೊವಿಶೀಲ್ಡ್ ಲಸಿಕೆ ಖರೀದಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
"ನಮ್ಮಲ್ಲಿ ಎರಡನೇ ಡೋಸ್ ಲಸಿಕೆ ಸಿಗುವುದಿಲ್ಲ"
"ಜುಲೈ 15 ಲಸಿಕೆ ಸಂಗ್ರಹಿಸಲು ಕೊನೆಯ ದಿನ ಎಂದು ನಮಗೆ ತಿಳಿಸಲಾಯಿತು. ನಾವು ಕೊವಿಶೀಲ್ಡ್ ಲಸಿಕೆಗಾಗಿ ಕೋ-ವಿನ್ ಮೂಲಕ ನೋಂದಣಿ ಮಾಡಿದ್ದೆವು. ಆದರೆ ಲಸಿಕೆ ಸರಬರಾಜು ಮಾಡುವುದನ್ನು ಮರೆತು ಬಿಡಿ, ನಾವು ನೀಡಿರುವ ಪಾವತಿಯನ್ನು ಸಹ ಅಂಗೀಕರಿಸಿಲ್ಲ. ಹೀಗಾಗಿ ಕೊವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು ಎರಡನೇ ಡೋಸ್ ಲಸಿಕೆಗಾಗಿ ಬೇರೆ ಕಡೆಗಳಲ್ಲಿ ಹೋಗುವಂತೆ ನಾವು ಹೇಳುತ್ತಿದ್ದೇವೆ," ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಮತ್ತು ಸುಗುನಾ ಆಸ್ಪತ್ರೆಯ ಎಂಡಿ ಡಾ.ರವೀಂದ್ರ ಆರ್ ಹೇಳಿದ್ದಾರೆ.
ಎರಡನೇ ಡೋಸ್ ಲಸಿಕೆ ವಿಳಂಬಕ್ಕೆ ನೂರಾರು ಕಾರಣ?
ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಪಡೆದುಕೊಂಡ ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಕಾರಣಗಳು ಸಾಕಷ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಕಾರ್ಯಾಚರಣೆ ನಿರ್ದೇಶಕರಾದ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ. ಅವರು ಹೇಳಿರುವ ಕಾರಣಗಳೇನು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
2ನೇ ಡೋಸ್ ಲಸಿಕೆ ವಿಳಂಬಕ್ಕೆ ಕಾರಣಗಳು:
* ಮೊದಲ ಡೋಸ್ ಲಸಿಕೆ ಪಡೆದ ವ್ಯಕ್ತಿಗೆ ಕೊರೊನಾವೈರಸ್ ಪಾಸಿಟಿವ್
* ಎರಡನೇ ಡೋಸ್ ಪಡೆಯುವದಕ್ಕೆ ಕೊ-ವಿನ್ ತಂತ್ರಾಂಶದಲ್ಲಿ ದೋಷ
* ಮೊದಲ ಡೋಸ್ ಪಡೆದ ವ್ಯಕ್ತಿ ತಮ್ಮ ಮೊಬೈಲ್ ಸಂಖ್ಯೆ ಬದಲಾಯಿಸಿರುತ್ತಾರೆ
* ಲಸಿಕೆಗೆ ನೋಂದಣಿ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಹೆಸರಿನ ಉಲ್ಲೇಖ
* ಎರಡನೇ ಡೋಸ್ ಪಡೆದ ವ್ಯಕ್ತಿಯು ಮೊದಲ ಬಾರಿ ಕೊ-ವಿನ್ ಮೂಲಕ ಹೆಸರು ನೋಂದಾಯಿಸಿರುತ್ತಾರೆ
* ಮೊದಲ ಬಾರಿಗೆ ಕೊ-ವಿನ್ ಮೂಲಕ ಹೆಸರು ನೋಂದಾಯಿಸಿದ ಶೇ.25 ರಿಂದ 30ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ
ಭಾರತದಲ್ಲಿ ಕೊರೊನಾವೈರಸ್ ಸಾವಿನ ಪ್ರಮಾಣ ಇಳಿಕೆಗೆ ಕಾರಣವೇನು?
ರಾಜ್ಯದಲ್ಲಿ ಇಳಿಮುಖವಾದ ಕೊವಿಡ್-19 ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ ಜನರನ್ನು ಕೊಂಚ ನಿರಾಳರನ್ನಾಗಿಸುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.29ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.98ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 29 ಮಂದಿ ಕೊವಿಡ್-19 ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36226 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ದಿನದಲ್ಲಿ 1464 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2706 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,86,702ಕ್ಕೆ ಏರಿಕೆಯಾಗಿದೆ. ಈವರೆಗೂ 28,24,197 ಸೋಂಕಿತರು ಗುಣಮುಖರಾಗಿದ್ದು. 26,256 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಎಷ್ಟು ಮಂದಿಗೆ ಕೊವಿಡ್-19 ಪರೀಕ್ಷೆ?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 32,474 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 80,982 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,13,456 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 68,33,971 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,02,99,116 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 3,71,33,137 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಒಟ್ಟು 1464 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು 352, ಬೀದರ್ 2, ಚಾಮರಾಜನಗರ 16, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 81, ಚಿತ್ರದುರ್ಗ 11, ದಕ್ಷಿಣ ಕನ್ನಡ 200, ದಾವಣಗೆರೆ 13, ಧಾರವಾಡ 14, ಗದಗ 1, ಹಾಸನ 108, ಹಾವೇರಿ 3, ಕಲಬುರಗಿ 8, ಕೊಡಗು 56, ಕೋಲಾರ 36, ಕೊಪ್ಪಳ 0, ಮಂಡ್ಯ 37, ಮೈಸೂರು 117, ರಾಯಚೂರು 3, ರಾಮನಗರ 4, ಶಿವಮೊಗ್ಗ 63, ತುಮಕೂರು 86, ಉಡುಪಿ 68, ಉತ್ತರ ಕನ್ನಡ 53, ವಿಜಯಪುರ 4, ಯಾದಗಿರಿ 1 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.