ಐತಿಹಾಸಿಕ ಕೊರೊನಾ ಲಸಿಕೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಾಲನೆ
ಬೆಂಗಳೂರು, ಜನವರಿ 16: ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದ್ದು, ಕೊರೊನಾ ಮಹಾಮಾರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. ದೇಶದ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
Recommended Video
ಇಂದು 3006 ಲಸಿಕಾ ಕೇಂದ್ರಗಳಲ್ಲಿ 3 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಬೃಹತ್ ಲಸಿಕಾ ಕಾರ್ಯಕ್ರಮ ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಿದೆ. ಅದೇ ರೀತಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಲಸಿಕಾಕರಣಕ್ಕೆ ಚಾಲನೆ ನೀಡಲಾಯಿತು.
ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ
ಉತ್ತರ ಕನ್ನಡ ವರದಿ
ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ವರ್ಚ್ಯುವಲ್ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಇನ್ನಿತರರು ಭಾಗಿಯಾದರು.
ಮೈಸೂರು ವರದಿ
ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿ ವರ್ಚ್ಯುವಲ್ ವೇದಿಕೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಂದ ಕೊರೊನಾ ಲಸಿಕೆ ವಿತರಣೆಗೆ ಚಾಲನೆ ನೀಡಲಾಯಿತು. ಆಸ್ಪತ್ರೆಗೆ ಆವರಣದಲ್ಲಿ ಬೃಹತ್ ಎಲ್ಇಡಿ ಸ್ಕ್ರೀನ್ ಹಾಕಲಾಗಿತ್ತು.
ಮೈಸೂರಿನ ಟ್ರಾಮಾ ಸೆಂಟರ್ ನಲ್ಲಿ ಕೊರೊನಾ ಲಸಿಕೆ ವಿತರಣೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು. ಜಿಲ್ಲೆಯ ಮೊದಲನೆ ಲಸಿಕೆಯನ್ನು ಕೆ.ಆರ್.ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಸಂದೇಶ್ ಪಡೆದರು. ಸಂದೇಶ್ ಅವರು ಲಸಿಕೆ ಪಡೆದು ಅರ್ಧ ಗಂಟೆವರೆಗೆ ನಿಗಾ ಘಟಕದಲ್ಲಿದ್ದರು. ಆದರೆ ಮೈಸೂರು ಟ್ರಾಮಾಸೆಂಟರ್ ದನದ ಕೊಟ್ಟಿಗೆಯಾಗಿತ್ತು. ಒಂದೇ ಗುಂಪಲ್ಲಿ ನೂರಾರು ಮಂದಿ ಸೇರಿಕೊಂಡು ಲಸಿಕೆ ನೀಡಿದರು. ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳು ಮಾಯವಾಗಿದ್ದವು.
ಉಡುಪಿ ವರದಿ
ಉಡುಪಿಯಲ್ಲಿ ಕೊರೋನಾ ವ್ಯಾಕ್ಸಿನ್ ಗೆ ಚಾಲನೆ ನೀಡಲಾಗಿದ್ದು, ಮೊದಲ ಲಸಿಕೆ ವೈದ್ಯರಿಗೆ ಹಾಗೂ ಗ್ರೂಪ್ ಡಿ ನೌಕರನಿಗೆ ಹಾಕಲಾಯಿತು. ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯ ಅರಿವಳಿಕೆ ತಜ್ಞ ಗಣಪತಿ ಹೆಗ್ಡೆ ಅವರಿಗೆ ಮೊದಲ ಲಸಿಕೆ ನೀಡಿದ್ದು, ಇವರ ಜೊತೆಗೆ ಗ್ರೂಪ್ ಡಿ ನೌಕರ ನಾಗರಾಜ್ ಅವರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಉಪಸ್ಥಿತಿರಿದ್ದರು.
ರಾಮನಗರ ವರದಿ
ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಶಿವಾನಂದ ಎನ್ನುವವರು ಮೊದಲ ಲಸಿಕೆ ಪಡೆದುಕೊಂಡಿದ್ದಾರೆ. ಶಿವಾನಂದ ಅವರು ರಾಮನಗರ ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಾಗಿದ್ದಾರೆ. ಕೊರೊನಾ ಲಸಿಕೆಗೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಚಾಲನೆ ನೀಡಿದದರು. ರಾಮನಗರ ಜಿ.ಪಂ ಸಿಇಒ ಇಕ್ರಂ, ಡಿಎಚ್ಒ ಡಾ.ನಿರಂಜನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರದುರ್ಗ ವರದಿ
ಚಿತ್ರದುರ್ಗದ ಲಸಿಕಾ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು. ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡಲಾಯಿತು. ಈ ವೇಳೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ, ಜಿ.ಪಂ ಅದ್ಯಕ್ಷೆ ಶಶಿಕಲಾ ಸುರೇಶಬಾಬು, ಜಿಲ್ಲಾಧಿಕಾರಿ ಕವಿತಾ, ಸಿಇಒ ನಂದಿನಿದೇವಿ, ಡಿಹೆಚ್ಒ ಡಾ.ಪಾಲಾಕ್ಷ, ಜಿಲ್ಲಾಸ್ಪತ್ರೆ ಡಿಎಸ್ ಡಾ.ಬಸವರಾಜ ಉಪಸ್ಥಿತರಿದ್ದರು.
ಹೆಲ್ತ್ ವಾರಿಯರ್ ಅಜಯ್ ಮೊದಲು ಲಸಿಕೆ ಪಡೆದವರಾಗಿದ್ದು, ಮೊದಲ ಲಸಿಕೆ ಪಡೆದ ವ್ಯಕ್ತಿಗೆ ಸಚಿವ ಶ್ರೀರಾಮುಲು ಅವರು ಶಾಲು ಹೊದಿಸಿ ಗೌರವಿಸಿದರು. ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.
ಚಿಕ್ಕಮಗಳೂರು ವರದಿ
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮವನ್ನು ಜಿ.ಪಂ ಉಪಾಧ್ಯಕ್ಷ ಸೋಮಶೇಖರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾಸ್ಪತ್ರೆ ಸೇರಿದಂತೆ ಒಂಬತ್ತು ಕೇಂದ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗಿದೆ. ಪ್ರತಿ ಕೇಂದ್ರದಲ್ಲಿ ನೂರು ಮಂದಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಡಿ-ದರ್ಜೆ ಸಿಬ್ಬಂದಿ ಗುರಮ್ಮಗೆ ಮೊದಲ ಲಸಿಕೆ ನೀಡಲಾಗಿದ್ದು, ಇವರು ಜಿಲ್ಲೆಗೆ ಮೊದಲು ಕೊರೊನಾ ಲಸಿಕೆ ಪಡೆದವರು ಎನಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಡಿಹೆಚ್ಒ ಉಮೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಬೆಳವಾಡಿ, ಜಸಿಂತಾ ಅನಿಲ್ ಕುಮಾರ್ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಭರತ್, ಲೋಕೇಶ್, ಜಿಲ್ಲಾಸ್ಪತ್ರೆ ಸರ್ಜನ್ ಮೋಹನ್ ಕುಮಾರ್ ಸೇರಿದಂತೆ ಇತರರು ಇದ್ದರು.
ಬಳ್ಳಾರಿ ವರದಿ
ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಲಸಿಕೆ ನೀಡಲಾಗಿದ್ದು, ಡಿ ಗ್ರೂಪ್ ನೌಕರ ಶಾಂತಾ ಕುಮಾರ ಅವರು ಜಿಲ್ಲೆಯ ಮೊದಲ ಲಸಿಕೆ ಪಡೆದವರಾಗಿದ್ದಾರೆ. ಕೊರೊನಾ ಲಸಿಕಾ ಕೇಂದ್ರ ವೀಕ್ಷಿಸಲು ಬಂದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅದಾವತ್, ಸಿಇಒ ನಂದಿನಿ ಹಾಗೂ ಶಾಸಕರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಕೂಡ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು.
ಮುಂಡಗೋಡ ವರದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ಕೋವಿಡ್-19 ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ಜಿಲ್ಲಾ ಪಂಚಾಯತಿ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.
ಕೊಡಗು ವರದಿ
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಿತು. ಜಿಲ್ಲೆಯಲ್ಲಿ ಪ್ರಥಮವಾಗಿ ಡಿ ದರ್ಜೆ ನೌಕರರಾದ ಪೊನ್ನಮ್ಮ ಅವರು ಕೋವಿಡ್ ವಿರುದ್ಧದ ಲಸಿಕೆ ಪಡೆದರು. ಜಿಲ್ಲೆಯ ಕೊಡಗು ವೈದ್ಯಕೀಯ ಸಂಸ್ಥೆಯ ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಆಸ್ಪತ್ರೆ ಹಾಗೂ ನಗರದ ಸಂತ ಮೈಕಲರ ಶಾಲೆ ಮತ್ತು ಕಾಕೋಟುಪರಂಬು ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ಧದ ಲಸಿಕೆ ಹಾಕಲಾಗುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ನಜೀಮಾ ತಬಸಿರಾ ಅವರು ಕೊರೊನಾ ವಿರುದ್ಧದ ಲಸಿಕೆ ಪಡೆದರು.
ಬೆಂಗಳೂರು ವರದಿ
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗು ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡಲಾಯಿತು. ಇದರೊಂದಿಗೆ ರಾಜ್ಯಾದ್ಯಂತ ಲಸಿಕೆ ವಿತರಣೆ ಕಾರ್ಯ ಅಧಿಕೃತವಾಗಿ ಚಾಲನೆ ಪಡೆದುಕೊಂಡಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸಂಸದ ಪಿ.ಸಿ. ಮೋಹನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ವಾರ್ಡ್ ಅಟೆಂಡೆಂಟ್ ನಾಗರತ್ನ ಅವರು ಮೊದಲ ಲಸಿಕೆ ಹಾಕಿಸಿಕೊಂಡರು.
ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಇಂದು ಕೆ.ಆರ್ ಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿವಮೊಗ್ಗ ವರದಿ
ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟದ ಭಾಗವಾಗಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಲಸಿಕೆಯನ್ನು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಗಾಯತ್ರಿ, ಎರಡನೆಯ ಲಸಿಕೆ ನಾನ್ ಕ್ಲಿನಿಕಲ್ ಸ್ಟಾಫ್ ವಿಕಾಸ್ ಹಾಗೂ ಮೂರನೆಯ ಲಸಿಕೆ ಆಸ್ಪತ್ರೆಯ ಮೆಡಿಕಲ್ ಸರ್ಜನ್ ಡಾ.ಶ್ರೀಧರ್ ಅವರುಗಳಿಗೆ ನೀಡಲಾಯಿತು. ಆನಂತರ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸರ್ಜನ್ ಡಾ.ಶ್ರೀಧರ್ ಅವರಿಗೆ ಲಸಿಕೆಯನ್ನು ಹಾಕಲಾಯಿತು