ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಮಹತ್ವದ ಸಭೆ
ಬೆಂಗಳೂರು, ಮೇ. 03: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕೈ ಮೀರಿದೆ. ಹೀಗಾಗಿ ಮೇ. 16 ರಿಂದ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕಾ ? ಅಥವಾ ಮುಂದೂಡಬೇಕಾ? ಎಂಬುದರ ಬಗ್ಗೆ ಗೊಂದಲ ಏರ್ಪಟ್ಟಿದೆ. ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ, ರಾಜ್ಯದಲ್ಲಿ ದಿನಕ್ಕೆ ವರದಿಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ 40 ಸಾವಿರ ಗಡಿ ದಾಟಿದೆ. ಹೀಗಾಗಿ ಪಿಯುಸಿ ಪರೀಕ್ಷೆ ಮುಂದೂಡುವ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿತ್ತು. ಇದರ ನಡುವೆಯೇ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದರು. ಇದಾದ ಬಳಿಕ ಕೊರೊನಾ ಸೋಂಕು ರಣಕೇಕೆ ಹಾಕಲಾರಂಭಿಸಿತು. ಹಾಸಿಗೆ ಇಲ್ಲದೇ ಕೊರೊನಾ ಸೋಂಕಿತರು ಬೀದಿ ಹೆಣವಾಗುತ್ತಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ನಿಗದಿ ಮಾಡಿರುವಂತೆ ಮೇ. 16 ರಿಂದ ಪಿಯುಸಿ ಪರೀಕ್ಷೆ ನಡೆಸಲು ಅಸಾಧ್ಯ. ಹೀಗಾಗಿ ಅಧಿಕಾರಿಗಳ ಸಭೆ ಕರೆದು ಅನಿರ್ಧಿಷ್ಟ ಅವಧಿಗೆ ಮುಂದೂಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?
''ಕೊರೊನಾ ಸೋಂಕು ಈ ಪರಿ ಹರಡುತ್ತದೆ ಎಂದು ಭಾವಿಸಿರಲಿಲ್ಲ. ನಮ್ಮ ಇಲಾಖೆಯಲ್ಲಿ ಸಹೋದ್ಯೋಗಿಗಳೇ ಕೊವಿಡ್ಗೆ ಬಲಿಯಾದರು. ಎರಡು ದಿನದಲ್ಲಿ ಪರಿಚಿತ ಇಬ್ಬರು ಉಪನ್ಯಾಸಕರು ತೀರಿಕೊಂಡಿದ್ದಾರೆ. ಪರಿಸ್ಥಿತಿ ತೀರಾ ಕ್ಲಿಷ್ಟಕರವಾಗಿದೆ. ಹೀಗಾಗಿ ಪಿಯುಸಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಇಂದು ನಮ್ಮ ನಿರ್ದೇಶನಾಲಯದ ನಿರ್ದೇಶಕರ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟ. ಹೀಗಾಗಿ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ'' ಎಂದು ಪಿಯುಸಿ ಪರೀಕ್ಷಾ ವಿಭಾಗದ ಅಧಿಕಾರಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಪರೀಕ್ಷೆ ರದ್ದು ಸಾಧ್ಯವಿಲ್ಲ: ಎಸ್ಎಸ್ಎಲ್ಸಿ ಪರೀಕ್ಷೆ ಬೇಕಾದರೆ ರದ್ದು ಮಾಡಬಹುದು. ಆದರೆ ಪಿಯುಸಿ ಪರೀಕ್ಷೆ ರದ್ದು ಮಾಡಲು ಸಾಧ್ಯವಿಲ್ಲ. ಉದ್ಯೋಗದಿಂದ ಹಿಡಿದು, ವೈದ್ಯಕೀಯ ಸೀಟು, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್ಗಳಿಗೆ ಪಿಯುಸಿ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ. ಇದರ ಜತೆಗೆ ರಾಷ್ಟ್ರ ಮಟ್ಟದ ಶ್ರೇಯಾಂಕಿತರ ಪಟ್ಟಿ ಬಿಡುಗಡೆ ಮಾಡುವ ಕಾರಣದಿಂದ ದೇಶದ ಯಾವ ರಾಜ್ಯದಲ್ಲೂ ಪಿಯುಸಿ ಪರೀಕ್ಷೆ ರದ್ದು ಮಾಡಲು ಸಾಧ್ಯವಿಲ್ಲ. ಅದರಿಂದ ಬಹುದೊಡ್ಡ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಮುಂದೂಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
Recommended Video
ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಪರೀಕ್ಷೆ ಅನಿರ್ಧಿಷ್ಟ ಅವಧಿಗೆ ಮುಂದೂಡಿದರೂ, ಪುನಃ ಒಂದು ತಿಂಗಳ ಮುಂಚಿತವಾಗಿಯೇ ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಸಲಹೆಗಳು ಬಂದಿವೆ. ಇದೆಲ್ಲವನ್ನು ಮನಗೊಂಡು ಇಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಪಿಯುಸಿ ಪರೀಕ್ಷೆ ಹಾಲಿ ವೇಳಾಪಟ್ಟಿಯಂತೆ ನಡೆಸುವುದು ತುಂಬಾ ಕಷ್ಟಕರ ಎಂದು ಅವರು ಹೇಳಿದ್ದಾರೆ.