ಬ್ರೇಕಿಂಗ್ ನ್ಯೂಸ್: ರಾಜ್ಯದಲ್ಲಿ 2,000 ಗಡಿ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ
ಬೆಂಗಳೂರು, ಮೇ.24: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,000ದ ಗಡಿ ದಾಟಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 97 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
Recommended Video
ಮಹಾರಾಷ್ಟ್ರದ ನಂಜು ಕರ್ನಾಟಕಕ್ಕೆ ಮತ್ತೆ ಮತ್ತೆ ಮುಳುವಾಗುತ್ತಿದೆ. ಇಂದು ರಾಜ್ಯದಲ್ಲಿ ಪತ್ತೆಯಾದ 97 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಲ್ಲಿ 75 ಮಂದಿಗೆ ಮಹಾರಾಷ್ಟ್ರದ ನಂಟು ಇರುವುದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಭಾನುವಾರ ಕರ್ಫ್ಯೂ: ಯಾವುದು ಓಪನ್? ಯಾವುದು ಬಂದ್? ಇಲ್ಲಿದೆ ಲಿಸ್ಟ್
ಭಾನುವಾರದ ಬೆಳಗ್ಗಿನ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ರಿಲೀಫ್ ಕೊಟ್ಟಿದೆ. ಬಹುದಿನಗಳ ನಂತರದಲ್ಲಿ ಸಿಲಿಕಾನ್ ಸಿಟಿಯಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗದಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಜ್ಯದಲ್ಲಿ ಜಿಲ್ಲಾವಾರು ಸೋಂಕಿತರ ಸಂಖ್ಯೆ ಎಷ್ಟಿದೆ?
ಚಿಕ್ಕಬಳ್ಳಾಪುರ -26, ಉಡುಪಿ - 18, ಮಂಡ್ಯ - 15, ಹಾಸನ - 14, ಯಾದಗಿರಿ - 6, ಕಲಬುರಗಿ - 6, ದಾವಣಗೆರೆ - 4, ತುಮಕೂರು - 2, ಉತ್ತರ ಕನ್ನಡ -2, ದಕ್ಷಿಣ ಕನ್ನಡ -1, ಕೊಡಗು - 1, ವಿಜಯಪುರ -1, ಧಾರವಾಡ - 1 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಚಿಕ್ಕಬಳ್ಳಾಪುರಕ್ಕೆ ಮಹಾರಾಷ್ಟ್ರದ ನಂಟೇ ಕಂಟಕ
ಕಳೆದ ಕೆಲವು ದಿನಗಳಿಂದ ಆತಂಕಮುಕ್ತವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೊರೊನಾ ವೈರಸ್ ಮತ್ತೊಂದು ಹಂತಕ್ಕೆ ತಂದು ನಿಲ್ಲಿಸಿದೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 26 ಮಂದಿಗೆ ಸೋಂಕು ಪತ್ತೆಯಾಗಿದ್ದು, ಎಲ್ಲ ಸೋಂಕಿತರಿಗೂ ಕೂಡಾ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ.
ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚಿದ ಆತಂಕ
ಮಹಿಳೆಯರು ಮತ್ತು ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿನಿಂದ ಹೆಚ್ಚಿನ ಅಪಾಯ ಕಂಡು ಬರುತ್ತಿದೆ. ಭಾನುವಾರ ಪತ್ತೆಯಾದ 97 ಸೋಂಕಿತರ ಪೈಕಿ 15 ವರ್ಷದೊಳಗಿನ 15 ಮಕ್ಕಳಿಗೆ ಕೊರೊನಾ ವೈರಸ್ ತಗಲಿದೆ. 46 ಮಂದಿ ಹೆಣ್ಣು ಮಕ್ಕಳಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ.
ಕರಾವಳಿಯಲ್ಲಿ ಅಟ್ಟಹಾಸ ಮೆರೆದ ಕೊರೊನಾ ವೈರಸ್
ಕೊರೊನಾ ವೈರಸ್ ಸೋಂಕು ಕರಾವಳಿ ಜನರಲ್ಲಿ ದಿನೇ ದಿನೆ ಆತಂಕವನ್ನು ಹೆಚ್ಚಿಸುತ್ತಿದೆ. ಭಾನುವಾರ ಒಂದೇ ದಿನ ಕರಾವಳಿಯಲ್ಲಿ 20 ಮಂದಿಗೆ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯೊಂದರಲ್ಲೇ 18 ಮಂದಿಗೆ ಸೋಂಕು ತಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರಿಗೆ ಕೊವಿಡ್-19 ಸೋಂಕು ಕನ್ಫರ್ಮ್ ಆಗಿದೆ.