'ಕೋವಿಡ್-19: ಮೂರು ತಿಂಗಳುಗಳ ಸುವರ್ಣಾವಕಾಶ ಹಾಳು ಮಾಡಿದ ಸರ್ಕಾರ'
ಬೆಂಗಳೂರು, ಜು. 02: ಕೊರೊನಾ ವೈರಸ್ ಸೋಂಕು ಹರಡುವ ಆರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿದ್ದ ಕ್ರಮಗಳನ್ನು ನೋಡಿದ್ದ ಜನರು ಮುಂದೆ ಸೋಂಕು ಉಲ್ಬಣವಾದರೂ ಆತಂಕವಿಲ್ಲ ಎಂದು ಕೊಂಡಿದ್ದರು. ಅಮೆರಿಕಾ, ಇಟಲಿ ಹಾಗೂ ಚೀನಾ ಸೇರಿದಂತೆ ಉಳಿದ ದೇಶಗಳ ಸರ್ಕಾರಗಳಿಂದ ಭಾರತ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಸೋಂಕಿಗೆ ತುತ್ತಾಗುವ ಜನರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತದೆ ಎಂದುಕೊಂಡಿದ್ದರು.
Recommended Video
ಆದರೆ ಈಗ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ಸರ್ಕಾರ ಕೈಚೆಲ್ಲಿದೆಯಾ ಎಂಬ ಅನುಮಾನ ಜನರಿಗೆ ಕಾಡುತ್ತಿದೆ. ಒಂದೆಡೆ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಮತ್ತೊಂದೆಡೆ ಲಾಕ್ಡೌನ್ ಅಗತ್ಯವಿಲ್ಲ ಎನ್ನುತ್ತಿದೆ. ಜೊತೆಗೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಬರುವ ಜನರನ್ನು ಆಸ್ಪತ್ರೆ ಒಳಗೂ ಸೇರಿಕೊಳ್ಳುತ್ತಿಲ್ಲ. ಕನಿಷ್ಠ ಚಿಕಿತ್ಸೆ ಸಿಗದೇ ಜನರು ಸಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಮಾತಿನ ಮಂಟಪ
ಆರಂಭದಲ್ಲಿ ಲಾಕ್ಡೌನ ಮಾಡಿದಾಗಲೇ ಕೊರೊನಾ ವೈರಸ್ ಹೆಚ್ಚಾದಲ್ಲಿ ಚಿಕಿತ್ಸೆ ಹೇಗೆ ಕೊಡಬೇಕು ಎಂಬುದನ್ನು ಸರ್ಕಾರ ಅರಿಯಬೇಕಾಗಿತ್ತು. ಕೊರೊನಾ ವೈರಸ್ ಸೋಂಕು ಹೆಚ್ಚಾವುದಕ್ಕೂ ಮೊದಲು 3 ತಿಂಗಳುಗಳ ಸುವರ್ಣಾವಕಾಶ ಸರ್ಕಾರದ ಬಳಿಯಿತ್ತು. ಆದರೆ ಚಿಕಿತ್ಸೆಗೆ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲು ಇದ್ದ ಕಾಲಾವಾಕಾಶವನ್ನು ಸರ್ಕಾರ ಹಾಳು ಮಾಡಿದೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರುಗಳು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು ಎಂದು ಎಚ್ಡಿಕೆ ಆರೋಪಿಸಿದ್ದಾರೆ. ಕೊರೋನಾ ಸೋಂಕು ಪೀಡಿತರು ಚಿಕಿತ್ಸೆ ಪಡೆಯುವುದು ಹೋಗಲಿ ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಸೋಂಕು ತೀವ್ರವಾಗಿ ಹರಡುತ್ತಿರುವ ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಬೀದಿಯಲ್ಲಿ ಸಾವು
ಕೊರೋನಾ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳು ಕರುಳು ಹಿಂಡುತ್ತಿವೆ. ಸರ್ಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈಗಲೇ ಹೀಗಾದರೇ ಮುಂದಿನ ಪರಿಸ್ಥಿತಿಯನ್ನು ನೆನೆಸಿಕೊಳ್ಳಲು ಭಯವಾಗುತ್ತದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೇರಳ ಮಾದರಿ
ತನ್ನದೇ ವೈಫಲ್ಯಗಳಿಂದ ರಾಜ್ಯ ಬಿಜೆಪಿ ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದೆ. ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ.
ನೆರೆಯ ಕೇರಳ ಸರ್ಕಾರ ಕೊರೋನ ತಡೆಗೆ ಕೈಗೊಂಡ ಕ್ರಮಗಳ 'ಸಿದ್ದ' ಮಾದರಿ ನಮ್ಮ ಕಣ್ಣೆದುರಿಗೆ ಇದೆ. ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ, ಒಬ್ಬೊಬ್ಬರದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ ಎಂದಿದ್ದಾರೆ.
ಸಲಹೆ ಪರಿಗಣಿಸಿ
ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಕೊರೊನಾ ವೈರಸ್ ಸೋಂಕನ್ನು ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಕೊಟ್ಟಿದ್ದೇನೆ. ಆದರೆ ಎಲ್ಲ ಸಲಹೆಗಳನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಇಲ್ಲದಿದ್ದರೇ ಸರ್ಕಾರದ ವೈಫಲ್ಯಕ್ಕೆ ಜನರು ಬಲಿಯಾಗಬೇಕಾಗುತ್ತದೆ ಎಂದು ಎಚ್ಡಿಕೆ ಎಚ್ಚರಿಸಿದ್ದಾರೆ.