ಕೋವಿಡ್ 19: ರಾಜ್ಯದ 23 ಜಿಲ್ಲೆಗಳಲ್ಲಿ ಏರುಗತಿಯಲ್ಲಿದೆ ಮರಣ ಪ್ರಮಾಣ
ಬೆಂಗಳೂರು, ಮೇ 31: ಕೊರೊನಾ ಸೋಂಕಿನಿಂದಾಗಿ ಮೃತಪಡುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ 23 ಜಿಲ್ಲೆಗಳಲ್ಲಿ ಹೆಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೆಸ್ಟಿಂಗ್ ಕಾರ್ಯವಿಧಾನಗಳು, ಕಂಟೈನ್ಮೆಂಟ್ ಕ್ರಮಗಳು ಹಾಗೂ ಜೀವ ರಕ್ಷಣೆಗಾಗಿ ನಿರ್ಣಾಯಕ ಕ್ರಮಗಳಲ್ಲಿ ಉಂಟಾಗಿರುವ ಲೋಪದೋಷಗಳಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಮರಣ ಪ್ರಮಾಣ ದುಪ್ಪಟ್ಟುಗೊಂಡು, ದಿನದ ಸರಾಸರಿ ಸಾವುಗಳು ಏರಿಕೆಯಾಗುತ್ತಿರುವ ಸೂಚನೆ ಇದಾಗಿದೆ.
ಬೆಂಗಳೂರು; 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಭ್ಯ, ಪಟ್ಟಿ
ಬೆಂಗಳೂರು ಗ್ರಾಮೀಣ, ನಗರ ಪ್ರದೇಶ ಸೇರಿದಂತೆ ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಕೋವಿಡ್-19 ಮರಣ ಪ್ರಮಾಣ ಏರುಗತಿಯಲ್ಲಿದ್ದು ಶೇ.10 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ.
ಚೆನ್ನೈ ನಲ್ಲಿ ದಿನವೊಂದಕ್ಕೆ 30,000+ ಟೆಸ್ಟಿಂಗ್ ನಡೆಸಿ ಬೆಂಗಳೂರು ನಗರ ಪ್ರದೇಶದಲ್ಲಿ ದಿನವೊಂದಕ್ಕೆ 45,000+ ನಡೆಸಲಾಗುತ್ತಿದ್ದರೂ ಅಸಮರ್ಪಕ ಹಾಗೂ ನಿಧಾನಗತಿಯ ಟೆಸ್ಟಿಂಗ್ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿದ್ದು, ತಮಿಳುನಾಡಿನಲ್ಲಿ ಸಮರ್ಪಕ ಹಾಗೂ ಅತ್ಯಂತ ಗುಣಮಟ್ಟದ ಟೆಸ್ಟಿಂಗ್ ನಡೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಪ್ರಾರಂಭವಿಂದಲೂ ಶೇ.100 ರಷ್ಟು ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗುತ್ತಿತ್ತು.
ಆದರೆ ಕರ್ನಾಟಕದಲ್ಲಿ ಆರ್ ಟಿಪಿಸಿಆರ್ ಜೊತೆಗೆ ಹೆಚ್ಚು ವಿಶ್ವಾಸಾರ್ಹವಲ್ಲದ ರ್ಯಾಪಿಡ್ ಆಂಟಿಜನ್ ಪರೀಕ್ಷೆಯನ್ನೂ ಮಾಡುತ್ತಿರುವ ಪರಿಣಾಮವಾಗಿ ನಿಖರ ಫಲಿತಾಂಶ ಸಿಗಲಿಲ್ಲ ಎಂದು ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದ್ದು ಲಾಕ್ ಡೌನ್ ಇನ್ನಷ್ಟೇ ನಿರೀಕ್ಷಿತ ಫಲಗಳನ್ನು ನೀಡಬೇಕಿದೆ ಎಂದು ಹೇಳಿದೆ.
ವಾರದ ಮರಣ ಪ್ರಮಾಣ
ಮೇ.19-26 ರ ಅವಧಿಯಲ್ಲಿ ಕೋವಿಡ್ ಮರಣದ ಮೂವಿಂಗ್ ಗ್ರೋತ್ ರೇಟ್ (ಎಂಜಿಆರ್) ಪ್ರಮಾಣ 23 ಜಿಲ್ಲೆಗಳಲ್ಲಿ ಶೇ.10 ರಷ್ಟಿತ್ತು. ನಾಲ್ಕು ವಾರಗಳಗಳ ಅವಧಿಯಲ್ಲಿ ರಾಜ್ಯದಲ್ಲಿನ ಮರಣ ಪ್ರಮಾಣ 15,033 ರಿಂದ 26,926 ರಷ್ಟು ಅಂದರೆ ಶೇ.79 ರಷ್ಟು ಇತ್ತು. ಬೆಂಗಳೂರು ನಗರ ಪ್ರದೇಶ ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ಒಂದು ವಾರದ ಎಂಜಿಆರ್ ನ ಪ್ರಮಾಣ ಶೇ.6 ರಿಂದ 11 ಕ್ಕೆ ಏರಿಕೆಯಾಗಿದೆ.
ಪ್ರತ್ಯೇಕ ಅಧ್ಯಯನ
ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ತಾಂತ್ರಿಕ ಮಾರ್ಗದರ್ಶನದಲ್ಲಿ ಜೀವನ್ ರಕ್ಷ ನಡೆಸಿರುವ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಎರಡು ಪ್ರತ್ಯೇಕ ಅವಧಿಗಳಲ್ಲಿ ಅಂದರೆ ಮೇ.19 ಹಾಗೂ 26 ಹಾಗೂ ಏ.28 ಮತ್ತು ಮೇ.26 ರ ಅವಧಿಯಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ.
ಪರೀಕ್ಷೆಗೆ ಅವಕಾಶ ಕಡಿಮೆ
"ಗ್ರಾಮೀಣ ಪ್ರದೇಶಗಳಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಗಳಿಗಳಿಗೆ ಅತ್ಯಂತ ಕಡಿಮೆ ಅವಕಾಶಗಳಿರುವುದೂ ಸಹ ಮರಣ ಪ್ರಮಾಣ ಏರಿಕೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು ಗ್ರಾಮೀಣ, ಅರೆ ಗ್ರಾಮೀಣ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ. ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಜೂನ್ ಅಂತ್ಯದ ವೇಳೆಗೆ 42,000 ದಾಟಲಿದೆ ಎಂದು ಜೀವನ್ ರಕ್ಷಾ ಸಂಚಾಲಕ ಸಂಜೀವ್ ಮೈಸೂರು ಹೇಳಿದ್ದಾರೆ.
ಬೆಂಗಳೂರು ಅಂಕಿ-ಅಂಶ
ನಾಲ್ಕು ವಾರಗಳ ಅವಧಿಯಲ್ಲಿ ಬೆಂಗಳೂರು ನಗರ ಪ್ರದೇಶದ ಎಂಜಿಆರ್ ಪ್ರಮಾಣ ಶೇ.98 ಕ್ಕೆ ಅಂದರೆ 6,139 ರಿಂದ 12,148 ಕ್ಕೆ ಏರಿಕೆ ಕಂಡಿದೆ. ಕರ್ನಾಟಕದ ಉಳಿದ ಭಾಗಗಳಲ್ಲಿ 8,894 ರಿಂದ 14,778 ಏರಿಕೆಯಾಗಿದ್ದು, ಶೇ.66ಕ್ಕೆ ಏರಿಕೆ ಕಂಡಿದೆ.