ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!
ಬೆಂಗಳೂರು, ಮೇ 18: ಮೇ 18ರಿಂದ ಜಾರಿಗೆ ಬರುವಂತೆ ಲಾಕ್ಡೌನ್ 4.0 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ. ಇದರಲ್ಲಿ ಅಂತಾರಾಜ್ಯ ಸಾರಿಗೆ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ರಾಜ್ಯಗಳು ನಿರ್ಧಾರ ಕೈಗೊಳ್ಳಬಹುದಾಗಿದೆ. ಅದರಂತೆ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಂತಾರಾಜ್ಯ ಸಾರಿಗೆ ಸಂಪರ್ಕ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ನಾಲ್ಕು ರಾಜ್ಯಗಳಿಂದ ಕರ್ನಾಟಕಕ್ಕೆ ಸಾರಿಗೆ ಸಂಪರ್ಕ ನಿಷೇಧಿಸಿದ್ದಾರೆ.
ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯದಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ಸಂಪುಟ ಸದಸ್ಯರ ಜೊತೆ ಚರ್ಚೆ ನಡೆಸಿದ ಬಳಿಕ ಯಡಿಯೂರಪ್ಪ ಅವರು ಮೇ 18ರಂದು ಸುದ್ದಿಗೋಷ್ಠಿ ನಡೆಸಿದರು.
ಅಂತಾರಾಜ್ಯ ಸಾರಿಗೆಗೆ ಅವಕಾಶ, ಅಪಾಯ ಕಟ್ಟಿಟ್ಟ ಬುತ್ತಿ
ಅಂತಾರಾಜ್ಯ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಕೇಳಿ ಬಂದಿವೆ.
ರಾಜ್ಯದಲ್ಲಿ ಒಂದೂ ಹಸಿರು ಜಿಲ್ಲೆಯಾಗಿ ಉಳಿಯೋದು ಅನುಮಾನ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ಸಲಹೆ ಪಡೆಯಲಾಗಿದ್ದು, ಅದರಂತೆ , ಮೇ 31ರ ತನಕ ನಾಲ್ಕು ರಾಜ್ಯಗಳ ಜೊತೆ ಯಾವುದೇ ಸಾರಿಗೆ ಸಂಪರ್ಕ ಹೊಂದಿರಲು ತೀರ್ಮಾನಿಸಲಾಗಿದೆ.
ಕೊರೊನಾವೈರಸ್ ಸೋಂಕು ಹೆಚ್ಚಾಗಿ ಕಂಡು ಬಂದಿರುವ ಮಹಾರಾಷ್ಟ್ರ, ತಮಿಳುನಾಡು ಅಲ್ಲದೆ ಗುಜರಾತ್ ಹಾಗೂ ಕೇರಳ ರಾಜ್ಯದಿಂದಲೂ ಯಾವ ಪ್ರಯಾಣಿಕರು, ಪ್ರವಾಸಿಗರು ರಾಜ್ಯವನ್ನು ಪ್ರವೇಶಿಸುವಂತಿಲ್ಲ. ಕರ್ನಾಟಕದಲ್ಲಿ ಕೊವಿಡ್ 19 ಹಸಿರು ಜಿಲ್ಲೆಯಾಗಿದ್ದ ಶಿವಮೊಗ್ಗದಲ್ಲಿ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳಲು ಅಹಮದಾಬಾದಿನಿಂದ ಬಂದ ವ್ಯಕ್ತಿ ಕಾರಣ ಎಂಬುದು ದೃಢಪಟ್ಟಿದೆ.
ಕೆಲ ವಾರಗಳ ಹಿಂದೆ ರಾಜ್ಯ 14 ಜಿಲ್ಲೆಗಳಲ್ಲಿ ಒಂದೇ ಒಂದು ಸೋಕಿಂತ ಪ್ರಕರಣ ಇರಲಿಲ್ಲ. ಈಗ 14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಕರೋನಾ ಎಂಟ್ರಿಯಾಗಿದೆ. ಈ 8 ಜಿಲ್ಲೆಗಳಲ್ಲೇ ಕಳೆದ 15 ದಿನಗಳಲ್ಲಿ 153 ಪ್ರಕರಣ ವರದಿಯಾಗಿದೆ. ಈ ಎಲ್ಲಾ ಪ್ರಕರಣಗಳ ಮೂಲ ವಿದೇಶ ಹಾಗೂ ಹೊರ ರಾಜ್ಯದ ಹಿನ್ನಲೆಯವರಾಗಿದ್ದಾರೆ ಹೀಗಾಗಿ, ಈ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಇತರೆ ಎಲ್ಲಾ ರಾಜ್ಯಗಳಿಗೂ ಇದೇ ಆದೇಶವನ್ನು ಅನ್ವಯಗೊಳಿಸುವಂತೆ ಒತ್ತಾಯ ಕೇಳಿ ಬಂದಿದೆ.