ಕರ್ನಾಟಕದಲ್ಲಿ ಒಂದೇ ದಿನ 58,395 ಕೊರೊನಾ ಸೋಂಕಿತರು ಗುಣಮುಖ!
ಬೆಂಗಳೂರು, ಮೇ 18: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಅಂಟಿಕೊಂಡವರಲ್ಲಿ ಮೃತಪಟ್ಟವರಿಗಿಂತ ಗುಣಮುಖರಾಗಿ ಹಿಂತಿರುಗಿದವರ ಸಂಖ್ಯೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲೂ ಅಂಥದ್ದೇ ಒಂದು ಅಂಕಿ-ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ಅವರು ನೀಡಿದ್ದಾರೆ.
ಕರ್ನಾಟಕದಲ್ಲಿ ಕೊವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ ಒಂದು ದಿನದಲ್ಲೇ ಅತಿಹೆಚ್ಚು ಸೋಂಕಿತರು ಗುಣಮುಖರ ಸಂಖ್ಯೆ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಮಂಗಳವಾರ ಹೊಸ ಪ್ರಕರಣಕ್ಕಿಂತ ಎರಡು ಪಟ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.
ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ 'ಕೈವಾಡ' ವಿವರಿಸಿದ ಎಚ್ಡಿಕೆ
"ರಾಜ್ಯದಲ್ಲಿ ಇಂದು 58,395 ಜನ ಗುಣಮುಖರಾಗಿದ್ದು ಈವರೆಗೂ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತೀ ಹೆಚ್ಚು ಸಂಖ್ಯೆಯಾಗಿದೆ. ರಾಜ್ಯದಲ್ಲಿ ಇಂದು 30,309 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದೆ. ಬೆಂಗಳೂರಿನಲ್ಲಿ 8,676 ಪ್ರಕರಣಗಳು ಪತ್ತೆಯಾಗಿದ್ದು, 31,795 ಜನ ಗುಣಮುಖ ಹೊಂದಿದ್ದಾರೆ" ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲೂ ಅತಿಹೆಚ್ಚು ಕೊವಿಡ್-19 ಸೋಂಕಿತರು ಗುಣಮುಖ:
Recommended Video
ಭಾರತದಲ್ಲಿ ಒಂದೇ ದಿನ 2,63,533 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,22,436 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಮಹಾಮಾರಿಗೆ 4,329 ರೋಗಿಗಳು ಉಸಿರು ನಿಲ್ಲಿಸಿದ್ದು, ಸಾವಿನ ಸಂಖ್ಯೆ 2,78,719ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು 2,52,28,996 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,15,96,512 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,78,719 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 33,53,765 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.