ಕರ್ನಾಟಕದ ಗ್ರೀನ್ ಜೋನ್ ನಲ್ಲೂ ಮದ್ಯ ಮಾರಾಟವಿಲ್ಲವೇಕೆ?
ಬೆಂಗಳೂರು, ಏಪ್ರಿಲ್ 28: ಪ್ರಧಾನಿ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬೆನ್ನಲ್ಲೇ ಕರ್ನಾಟಕದ ವಿವಿಧ ಜೋನ್ ಗಳಿಗೆ ಮಾರ್ಗಸೂಚಿ ಸಿದ್ಧವಾಗಿದೆ. ಮೇ 3ರ ತನಕ ಕೇಂದ್ರ ಗೃಹ ಸಚಿವಾಲಯ ನೀಡಿರುವ ನಿರ್ದೇಶನದ ಅನ್ವಯ ವಿವಿಧ ಜೋನ್ ಗಳಲ್ಲಿ ಕೆಲವು ನಿಬಂಧನೆಗಳ ಸಹಿತ ವಿನಾಯಿತಿ ನೀಡಲಾಗಿದೆ. ಆದರೆ, ಮದ್ಯಪ್ರಿಯರಿಗೆ ಮತ್ತೆ ಆಘಾತಕಾರಿ ಸುದ್ದಿ ಸಿಕ್ಕಿದೆ.
Recommended Video
ರಾಜ್ಯದಲ್ಲಿ ಗ್ರೀನ್ ಜೋನ್ ಗಳಲ್ಲಿ ಶಾಪಿಂಗ್ ಮಾಲ್ ಹೊರತುಪಡಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ದೊರೆತಿದೆ. ಆದರೆ, ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆದಾಯ ಗಳಿಕೆಗೆ ಮೂಲವೆನಿಸಿದರೂ, ಪ್ರಧಾನಿ ಮೋದಿ ಅವರಿಂದ ಆದೇಶ ಬರುವ ತನಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮದ್ಯದಂಗಡಿ ಓಪನ್ ಮಾಡಿ ಅಂತ ಅಧಿಕಾರಿಗಳು ಹೇಳಿದ್ರೂ, ಸಿಎಂ ಒಪ್ಪುತ್ತಿಲ್ಲ!
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗ್ರೀನ್ ಜೋನ್ ವ್ಯಾಪ್ತಿಯ 14 ಜಿಲ್ಲೆಗಳಲ್ಲಿ ಅನುಸರಿಸಬೇಕಾದ ಹೊಸ ಮಾರ್ಗಸೂಚಿ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. 14 ಜಿಲ್ಲೆಗಳಿಗೆ ಮೇ.3 ರವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ಏಪ್ರಿಲ್ 28ರಂದು ಪ್ರಕಟಿಸಲಾಗಿದ್ದು, ವ್ಯಾಪಾರ, ಆರ್ಥಿಕ ಚಟುವಟಿಕೆ, ವಿಶೇಷ ಆರ್ಥಿಕ ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಮದ್ಯದಂಗಡಿ ಓಪನ್ ಮಾಡಲು ಅನುಮತಿ ನೀಡಿಲ್ಲ. ಈ ರೀತಿ ನಿರ್ಧಾರ ಕೈಗೊಳ್ಳಲು ಏನಿರಬಹುದು ಕಾರಣ? ಮುಂದೆ ಓದಿ...
ಮದ್ಯ ಮಾರಾಟಕ್ಕೆ ನಿರ್ಬಂಧ ಹಿಂಪಡೆದಿಲ್ಲ
ಗೃಹ ಸಚಿವಾಲಯದ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ವಿನಾಯಿತಿ ಸೂಚಿಸಿಲ್ಲ. ಹೀಗಾಗಿ ಎರಡನೇ ಅವಧಿ ಲಾಕ್ ಡೌನ್ ಮುಗಿಯುವ ತನಕ ರಾಜ್ಯದೆಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿರಲಿದೆ. ಕೇಂದ್ರ ಸರ್ಕಾರದ ಸೂಚನೆಗೆ ಬದ್ಧವಾಗಿ ಇಷ್ಟು ಕಾಲ(ಎರಡು ಲಾಕ್ಡೌನ್ ಅವಧಿ) ನಡೆದುಕೊಂಡಿದ್ದೇವೆ.. ಮೇ 3 ರ ತನಕ ಮದ್ಯ ಮಾರಾಟ ಬಗ್ಗೆ ಮಾರ್ಗಸೂಚಿಯಲ್ಲಿ ಬದಲಾವಣೆ ಬೇಡ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಈ ಹೊಸ ಮಾರ್ಗಸೂಚಿಯಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ. ಗ್ರೀನ್, ಆರೆಂಜ್, ಯೆಲ್ಲೋ ಹಾಗೂ ರೆಡ್ ಜೋನ್ ಗಳಿಗೆ ತಕ್ಕಂತೆ ಮಾರ್ಗಸೂಚಿ ನೀಡಲಾಗಿದ್ದು, ಎಲ್ಲೂ ಮದ್ಯ ಮಾರಾಟದ ಮೇಲಿರುವ ನಿರ್ಬಂಧ ಹಿಂಪಡೆದಿಲ್ಲ.
ಎಂಎಸ್ಐಲ್ ಮಳಿಗೆಗಳ ಮೂಲಕ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಯನ್ನು ಬೆಂಗಳೂರಿನ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ವಿರೋಧ ವ್ಯಕ್ತಪಡಿಸಿತ್ತು.
ಮದ್ಯ ವ್ಯಾಪಾರಿಗಳ ಸಂಘದಿಂದಲೇ ವಿರೋಧ
ಕೊರೊನಾ ವೈರಸ್ ಸಮಸ್ಯೆಯಿಂದ ಸಿಎಲ್ 4 ಲೈಸನ್ಸ್ ಹೊಂದಿರುವ ಕ್ಲಬ್ಗಳು ಮಾರ್ಚ್ 14 ರಿಂದ ಮುಚ್ಚಿವೆ. ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್ ಹೊರತು ಪಡಿಸಿ ಉಳಿದ ಎಲ್ಲ ವರ್ಗದ ಲೈಸನ್ಸ್ ಹೊಂದಿರುವ ಮದ್ಯದ ಅಂಗಡಿಗಳು ಮಾರ್ಚ್ 21 ರಿಂದ ಮುಚ್ಚಲ್ಪಟ್ಟಿವೆ. ಜೊತೆಗೆ ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್ ಹೊಂದಿದ್ದ ಅಂಗಡಿಗಳು ಮಾರ್ಚ್ 24 ರಿಂದ ಮುಚ್ಚಲ್ಪಿಟ್ಟಿವೆ. ಸರ್ಕಾರದ ನಿಲುವಿಗೆ ಮದ್ಯದ ವ್ಯಾಪಾರಿಗಳು ಸಹಕಾರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅನೇಕ ಮಂದಿ ಮದ್ಯ ಸೇವನೆ ಮಾಡುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸರ್ಕಾರ ಎಂಎಸ್ಐಎಲ್ಗಳ ಮೂಲಕ ಮದ್ಯ ಮಾರಾಟದ ಚಿಂತನೆ ಮಾಡಿರುವುದನ್ನು ರಾಜ್ಯ ಮದ್ಯ ವ್ಯಾಪಾರಿಗಳ ಸಂಘ ವಿರೋಧಿಸಿವೆ, ಮೇ 3 ರತನಕ ಕಾಯಲು ಸಿದ್ಧ ಎಂದು ಹೇಳಿದ್ದಾರೆ.
ಎಂಎಸ್ಐಎಲ್ ಓಪನ್ ಮಾಡುವಂತೆ ಒತ್ತಡ
ಎಂಎಸ್ಐಎಲ್ ಲೈಸನ್ಸ್ ಹೊಂದಿರುವವರಿಗೆ ಷರತ್ತುಬದ್ಧವಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ಮನವಿ ಮಾಡಿಕೊಂಡಿದ್ದಾರೆ ರಾಜ್ಯದಲ್ಲಿ ಕೇವಲ 789 ಎಂಎಸ್ಐಎಲ್ ಮಳಿಗೆಗಳಿವೆ, ಅವುಗಳಿಗೆ ಮಾತ್ರ ಮದ್ಯ ಮಾರಾಟದ ಅವಕಾಶ ಕೊಟ್ಟರೆ ಜನದಟ್ಟಣೆ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಮದ್ಯ ಮಾರಾಟದ ಲೈಸನ್ಸ್ ಹೊಂದಿರುವ ಎಲ್ಲರಿಗೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಹಕರಿಗೆ ಪಾರ್ಸೆಲ್ ಮಾತ್ರ ನೀಡಲು ವಿಶೇಷ ಅನುಮತಿ ಕೊಡಬೇಕೆಂದು ಸಂಘಟನೆ ಮನವಿ ಮಾಡಿದೆ.
ಹಸಿರುವಲಯದಲ್ಲೂ ನಿರ್ಬಂಧವಿದೆ
ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸುವ ಹೋಟೆಲ್ಗಳು, ಹೋಂ ಸ್ಟೇಗಳು, ವಸತಿಗೃಹಗಳು ಮತ್ತು ಮೋಟೆಲ್ಗಳು, ಕ್ಲಬ್, ಪಬ್, ಬಾರ್ ಗಳು ಎಲ್ಲವನ್ನು ನಿರ್ಬಂಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಮೇ 3 ರ ತನಕ ಸರ್ಕಾರಿ ಹಾಗೂ ಖಾಸಗಿ ಮದ್ಯ ಮಾರಾಟ ಮಳಿಗೆಗಳನ್ನು ಮಾರುವಂತಿಲ್ಲ. ರಾಜ್ಯದಲ್ಲಿ ಜಿಲ್ಲಾಧಿಕಾರಿಗಳು ಈ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗುತ್ತದೆ. ಹಸಿರುವಲಯವಾದರೂ ಸಾಮಾಜಿಕ ಅಂತರ, ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯದ ನಿರ್ದೇಶನದಲ್ಲಿ ಬದಲಾವಣೆಗಳಿಲ್ಲ. ವಾಣಿಜ್ಯ ಉದ್ದೇಶಿತ ಅಂಗಡಿ ಆರಂಭಗೊಂಡರೂ ಶಾಪಿಂಗ್ ಮಾಲ್ ಗೆ ಅನುಮತಿ ಇಲ್ಲ.
ಒಂದು ವೇಳೆ ನಿರ್ಬಂಧ, ನಿಯಮ ಮೀರಿದರೆ ನಿರ್ವಹಣಾ ಕಾಯ್ದೆಯ ಸೆಕ್ಷನ್ 51 ರಿಂದ 60 ರ ನಿಬಂಧನೆಗಳ ಪ್ರಕಾರ, 2005, ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮಗಳ ಜೊತೆಗೆ. ಐಪಿಸಿಯ 188 ಅನ್ವಯ ಶಿಕ್ಷೆಗೆ ಗುರಿಪಡಿಸಲಾಗುತ್ತದೆ