ಕ್ಯಾಮ್ಸ್ ಸಮೀಕ್ಷಾ ಫಲಿತಾಂಶ: ಶೇ. 90 ರಷ್ಟು ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟ
ಬೆಂಗಳೂರು, ಜು. 18: ಖಾಸಗಿ ಶಾಲಾ ಶುಲ್ಕ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿಯೇ ಕೋವಿಡ್ 19 ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅನುದಾನ ರಹಿತ ಖಾಸಗಿ ಶಾಲೆಗಳ ಸಮೀಕ್ಷಾ ವರದಿಯನ್ನು ಕ್ಯಾಮ್ಸ್ ಸಾರ್ವಜನಿಕರ ಮುಂದಿಟ್ಟಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 254 ಶಾಲೆಗಳು ಒಂದಲ್ಲಾ ಒಂದು ರೂಪದಲ್ಲಿ ಸಾಲ ಪಡೆದು ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿರುವ ಆಘಾತಕಾರಿ ಸಂಗತಿಯನ್ನು ಬಹಿರಂಗಗೊಳಿಸಿದೆ. ಈ ಸಮೀಕ್ಷಾ ವರದಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಡಲು ಶಿಕ್ಷಣ ಇಲಾಖೆ ಅನುಸರಿಸುತ್ತಿರುವ ಉಡಾಫೆ ನೀತಿಗಳೇ ಕಾರಣ ಎಂದು ಕ್ಯಾಮ್ಸ್ ಅಧ್ಯಕ್ಷ ಡಿ. ಶಶಿಕುಮಾರ್ ಆರೋಪ ಮಾಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಮೀಕ್ಷಾ ವರದಿ ಅಂಶಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶಶಿಕುಮಾರ್ ಡಿ. 2020-21 ನೇ ಸಾಲಿನಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದಿದ್ದಾರೆ. ಅವರು ಬೇರೆ ಶಾಲೆಯಲ್ಲಿ ಓದುತ್ತಿದ್ದಾರೆಯೇ ? ಇಲ್ಲವೇ ಶಾಲೆ ತೊರೆದಿದ್ದಾರಾ? ಶಿಕ್ಷಣದಿಂದ ವಂಚಿತರಾಗಿದ್ದಾರೆಯೇ ಎಂಬುದರ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲ. ಶುಲ್ಕ ವಿವಾದ ಮುಂದಿಟ್ಟುಕೊಂಡು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಗಲಾಟೆ ತಂದಿಟ್ಟ ಕಾರಣ ಇಷ್ಟು ಮಕ್ಕಳು ದೂರ ಉಳಿಯಲು ಕಾರಣವಾಗಿದ್ದಾರೆ. ಮಕ್ಕಳ ಶಿಕ್ಷಣ ಹಕ್ಕು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಡ್ಡಾಯ ಹಾಜರಾತಿ ಹಾಗೂ ದಾಖಲಾತಿ ಬಗ್ಗೆ ಯಾವುದೇ ಸ್ಪಷ್ಟ ಆದೇಶ ಮಾಡಿಸದ ಪರಿಣಾಮ ಇಂತಹ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿಗಾಗಿ ದೌರ್ಜನ್ಯ ಎಸಗುತ್ತಿವೆ ಎಂದೇ ಬಿಂಬಿಸಲಾಗಿದೆ. ಕೋವಿಡ್ ಸಂಕಷ್ಟಕ್ಕೆ ಶಾಲೆಗಳು ತುತ್ತಾಗಿವೆ ಕಳೆದ ವರ್ಷ 60 ಸಾವಿರ ವಿದ್ಯಾರ್ಥಿಗಳು ಶಾಲೆಗಳಿಂದ ದೂರ ಉಳಿದಿದ್ದಾರೆ. ಪ್ರಸಕ್ತ ಸಾಲಿನ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಸಮೀಕ್ಷೆಗೆ ಒಳಪಟ್ಟಿರುವ 254 ಶಾಲೆಗಳ ಪೈಕಿ 178 ಶಾಲೆಗಳು ಒಂದಲ್ಲಾ ಒಂದು ರೂಪದಲ್ಲಿ ಸಾಲಕ್ಕೆ ತುತ್ತಾಗಿವೆ. ಇದರ ಮಾನದಂಡ ಇಟ್ಟುಕೊಂಡು ಹೇಳುವುದಾದರೆ ರಾಜ್ಯದಲ್ಲಿ ಶೇ. 90 ರಷ್ಟು ಅನುದಾನ ರಹಿತ ಖಾಸಗಿ ಶಾಲೆಗಳು ಸಾಲದ ಸಂಕಷ್ಟಕ್ಕೆ ಒಳಗಾಗಿವೆ.
ಬಹುತೇಕ ಶಾಲೆಗಳು ಕನಿಷ್ಠ 10 ರಿಂದ 40 ಸಾವಿರದೊಳಗೆ ವಾರ್ಷಿಕ ಶುಲ್ಕ ವಿಧಿಸುವ ಶಾಲೆಗಳಿಗೆ ಅನ್ವಯವಾಗಲಿದೆ. ಈ ವಾಸ್ತವ ಸತ್ಯಾಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಶಾಲಾ ಶುಲ್ಕ ವಿವಾದ ವಿಚಾರವಾಗಿ ಈಗಗಲೇ ಸುಪ್ರೀಂಕೋರ್ಟ್ ನ್ಯಾಯ ಸಮ್ಮತ ತೀರ್ಪು ನೀಡಿದೆ. ಹೈಕೋರ್ಟ್ ಕೂಡ ಸುಪ್ರೀಂಕೋರ್ಟ್ ನ ತೀರ್ಪಿನಂತೆ ಸಾಮಾಜಿಕ ನ್ಯಾಯದ ತತ್ವದಡಿ ತೀರ್ಪು ಪ್ರಕಟಿಸಿ ಶಿಕ್ಷಣ ವ್ಯವಸ್ಥೆ ಉಳಿಸಲಿದೆ ಎಂಬ ನಂಬಿಕೆಯಿದೆ. ಜು. 22 ರಂದು ಶಾಲಾ ಶುಲ್ಕ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಶಶಿಕುಮಾರ್ ತಿಳಿಸಿದರು.
ಕೋವಿಡ್ ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ನಿಜ. ಆದರೆ, ಅವರು ಕಟ್ಟುವ ಮನೆ ಬಾಡಿಗೆಯಲ್ಲಿ ರಿಯಾಯಿತಿ ಇಲ್ಲ. ಕೇಬಲ್ ಬಿಲ್ ರಿಯಾಯಿತಿ ಇಲ್ಲ. ವಿದ್ಯುತ್ ಬಿಲ್, ನೀರಿನ ಬಿಲ್ ನಲ್ಲಿ ರಿಯಾಯಿತಿ ನೀಡಿಲ್ಲ. ಕೇವಲ ಖಾಸಗಿ ಶಾಲೆಗಳ ಶುಲ್ಕವನ್ನು ಕಡಿಮೆ ಮಾಡುವಂತೆ ಸರ್ಕಾರ ಒತ್ತಡ ಹಾಕುತ್ತಿದೆ. ವಾಸ್ತವದಲ್ಲಿ ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇದರ ನಡುವೆ ಸರ್ಕಾರ ತೆಗೆದುಕೊಂಡ ಅವೈಜ್ಞಾನಿಕ ತೀರ್ಮಾನಗಳಿಂದ ಶಿಕ್ಷಣ ವ್ಯವಸ್ಥೆಗೆ ಪೆಟ್ಟಾಗಿದೆ.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಂವಿಧಾನಬದ್ಧ ಹಕ್ಕು. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು. ದಾಖಲಾತಿ ಮಾಡಬೇಕು. ಆದರೆ, ಸರ್ಕಾರ ಈವರೆಗೂ ದಾಖಲಾತಿ ಬಗ್ಗೆ ಸ್ಪಷ್ಟ ಆದೇಶ ನೀಡಿಲ್ಲ. ಈಗಲಾದರೂ ಶಿಕ್ಷಣ ಇಲಾಖೆ ಎಚ್ಚೆತ್ತು ಶಿಕ್ಷಣ ವಂಚಿತ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡಬೇಕು. ನ್ಯಾಯಾಲಯ ಪ್ರಶ್ನಿಸಿದ ಕಾರಣಕ್ಕೆ ಸುಳ್ಳು ಲೆಕ್ಕ ನೀಡಬಾರದು ಎಂದು ಮನವಿ ಮಾಡಿದರು.
Recommended Video
ರಾಜ್ಯದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಬಾರದು. ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಸೆಕ್ಷನ್ 8 ನ್ನು ಪಾಲಿಸಬೇಕಿದೆ. ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳನ್ನು ವಾಪಸು ಶಾಲೆಗಳಿಗೆ ಕರೆ ತರುವ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ, ಶಿಕ್ಷಣ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಗಮನ ಹರಿಸಬೇಕಿದೆ. ಕೇವಲ ಶಾಲಾ ಶುಲ್ಕ ವಿಚಾರದಲ್ಲಿ ಗೊಂದಲ ಏರ್ಪಡಿಸಿ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು ಎಂದು ಕ್ಯಾಮ್ಸ್ ಮನವಿ ಮಾಡಿದೆ.