ಕರ್ನಾಟಕದಲ್ಲಿ ಕೊವಿಡ್-19ನಿಂದ ಸತ್ತವರ ಲೆಕ್ಕ: ಯಾವುದು ಪಕ್ಕಾ!?
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಅಂಕಿ-ಸಂಖ್ಯೆಗಳ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಮರ ಮುಂದುವರಿದಿದೆ. ರಾಜ್ಯದಲ್ಲಿ 9 ಕೋಟಿಗೂ ಅಧಿಕ ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ.
ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, 2020ರ ಮಾರ್ಚ್ ತಿಂಗಳಿನಿಂದ 2021ರ ಆಗಸ್ಟ್ ತಿಂಗಳ ನಡುವಿನ 18 ತಿಂಗಳ ಅವಧಿಯಲ್ಲಿ 37,423 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಇದೆಂಥಾ ಸ್ಥಿತಿ: ಮನೆ-ಮನೆಯಲ್ಲೂ ಒಬ್ಬರಿಗಿಂತ ಹೆಚ್ಚು ಮಂದಿಗೆ ಜ್ವರ, ಕೆಮ್ಮು, ನೆಗಡಿ!
ಕಳೆದ ಇದೇ 18 ತಿಂಗಳ ಅವಧಿಯಲ್ಲಿ 9,40,416 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ, ಈ ಪೈಕಿ ಕಳೆದ ಎಂಟು ತಿಂಗಳಿನಲ್ಲೇ 4,78,082 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ರಾಜ್ಯದ ಜನನ ಮತ್ತು ಮರಣ ಪ್ರಮಾಣ ನೋಂದಣಿ ಅಂಕಿ-ಅಂಶಗಳು ಪ್ರತಿಪಕ್ಷಗಳ ವಾದಕ್ಕೆ ಪೂರಕ ಎನ್ನುವಂತಿವೆ. ಸ್ವತಃ ರಾಜ್ಯದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಂಕಿ-ಅಂಶಗಳನ್ನು ಕಲಾಪದಲ್ಲಿ ಮಂಡಿಸಿದ್ದಾರೆ. ಹಾಗಿದ್ದರೆ ಸಾವಿನ ಪ್ರಕರಣಗಳಲ್ಲಿ ಇಷ್ಟಂದು ಮಟ್ಟಿಗೆ ವ್ಯತ್ಯಾಸ ಕಂಡು ಬರುತ್ತಿರುವುದು ಏಕೆ,? ಯಾವ ರೀತಿ ಸಾವಿನ ಪ್ರಕರಣಗಳನ್ನು ಮಾತ್ರ ಕೊವಿಡ್-19 ಪಟ್ಟಿಗೆ ಸೇರಿಸಲಾಗುತ್ತಿದೆ?, ಜಿಲ್ಲಾವಾರು ಕೊರೊನಾವೈರಸ್ ಸಾವಿನ ಪ್ರಕರಣಗಳೆಷ್ಟಿವೆ ಎನ್ನುವುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಉತ್ತರವೇನು?
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಾಣ ಬಿಟ್ಟವರೆಷ್ಟು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಪ್ರಶ್ನಿಸಿದರು. ಈ ಪ್ರಶ್ನೆಗೆ ವಿಧಾನಪರಿಷತ್ ಕಲಾಪದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಉತ್ತರ ನೀಡಿದ್ದು, "2020ರ ಮಾರ್ಚ್ 1 ರಿಂದ 2020ರ ಡಿಸೆಂಬರ್ 31ರವರೆಗೂ 4,62,334 ಮಂದಿ ಹಾಗೂ 2021ರ ಜನವರಿ 1 ರಿಂದ 2021ರ ಆಗಸ್ಟ್ 31ರವರೆಗೆ 4,78,082 ಮಂದಿ ಮರಣ ಹೊಂದಿದ್ದಾರೆ," ಎಂದರು.
ಪ್ರತಿನಿತ್ಯ ಕೊವಿಡ್-19 ಸಾವಿನ ಪ್ರಕರಣಗಳ ದಾಖಲು
"ಜನನ ಮತ್ತು ಮರಣ ಪ್ರಮಾಣ ನೋಂದಣಿ ಕಚೇರಿಯ ದಾಖಲೆಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ ಮತ್ತು ಪ್ರಸ್ತುತ ವರ್ಷದ ಸಂಖ್ಯೆಯನ್ನು ಸಮನ್ವಯಗೊಳಿಸಲಾಗುತ್ತಿದೆ. ಎಲ್ಲ ಕೊವಿಡ್-19 ಸೋಂಕಿತರ ಸಾವಿನ ಪ್ರಕರಣವನ್ನು ನೋಂದಾಯಿಸಿಕೊಳ್ಳಲಾಗುತ್ತಿದ್ದು, ಐಸಿಎಂಆರ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಪ್ರತಿನಿತ್ಯ ಸಾವಿನ ಪ್ರಕರಣಗಳ ಎಣಿಕೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮನೆಗಳಲ್ಲಿ ಸಾವನ್ನಪ್ಪಿದವರ ಅಂಕಿ-ಸಂಖ್ಯೆಗಳ ಮೇಲೆ ಗಮನ ಹರಿಸುವಂತೆ ಪರಿಷತ್ ಸದಸ್ಯರು ನೀಡಿದ ಸಲಹೆಯನ್ನು ಪರಿಗಣಿಸಲಾಗುವುದು," ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೇಳುವವರು ಯಾರು ಸಾವಿನ ಲೆಕ್ಕ!?
"ಕರ್ನಾಟಕ ಸರ್ಕಾರವು RT-PCR ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವ ರೋಗಿಯ ಸಾವನ್ನು ಮಾತ್ರ ಕೊರೊನಾವೈರಸ್ ಸೋಂಕಿತನ ಸಾವು ಎಂದು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅದೆಷ್ಟು ಜನರು ಕೊವಿಡ್-19 ಸೋಂಕಿತ ಲಕ್ಷಣಗಳಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಉಸಿರು ಚೆಲ್ಲಿದ್ದಾರೆ. ಇನ್ನು ಅದೆಷ್ಟೋ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದ ನಂತರದಲ್ಲೇ ಸೋಂಕು ತಗುಲಿರುವುದು ಖಾತ್ರಿಯಾಗಿರುತ್ತದೆ," ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ದೂಷಿಸಿದರು. ರಾಜ್ಯ ಸರ್ಕಾರವು ಇಂಥ ಎಲ್ಲ ಪ್ರಕರಣಗಳ ಮೇಲೆ ಗಮನಹರಿಸಿ ಎಲ್ಲ ಸಾವಿನ ಪ್ರಕರಣಗಳನ್ನು ಕೊವಿಡ್-19 ಸಾವಿನ ಲೆಕ್ಕಕ್ಕೆ ಸೇರಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಮೂರು ತಿಂಗಳಿನ ಸಾವಿನ ಸಂಖ್ಯೆ?
ಕರ್ನಾಟಕದ ಜನನ ಮತ್ತು ಮರಣ ಪ್ರಮಾಣ ನೋಂದಣಿ ಕಚೇರಿ ನೀಡಿರುವ ಅಂಕಿ-ಅಂಶಗಳ ಆಧಾರದಲ್ಲಿ ಸಚಿವರು ನೀಡಿರುವ ಮಾಹಿತಿ ಪ್ರಕಾರ, 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 67,444, ಮತ್ತು 2021ರ ಮಾರ್ಚ್ ತಿಂಗಳಿನಲ್ಲಿ 77,221 ಹಾಗೂ 2021ರ ಜೂನ್ ತಿಂಗಳಿನಲ್ಲಿ 99,665 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಒಟ್ಟು ಕೊವಿಡ್-19 ಸಾವಿನ ಪ್ರಕರಣ?
ರಾಜ್ಯದಲ್ಲಿ ಕೊರೊನಾವೈರಸ್ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.60ರಷ್ಟಿದ್ದರೆ, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 3.54ರಷ್ಟಿದೆ. ಒಂದು ದಿನದಲ್ಲಿ 677 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1678 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 24 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 37627 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2968543ಕ್ಕೆ ಏರಿಕೆಯಾಗಿದೆ. ಒಟ್ಟು 2916530 ಸೋಂಕಿತರು ಗುಣಮುಖರಾಗಿದ್ದು. 14358 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video
ಜಿಲ್ಲಾವಾರು ಕೊರೊನಾವೈರಸ್ ಸಾವಿನ ಪ್ರಕರಣ
ರಾಜ್ಯದಲ್ಲಿ ಒಟ್ಟು 37627 ಮಂದಿಗೆ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ಬಾಗಲಕೋಟೆ 330, ಬಳ್ಳಾರಿ 1689, ಬೆಳಗಾವಿ 915, ಬೆಂಗಳೂರು ಗ್ರಾಮಾಂತರ 879 ಬೆಂಗಳೂರು 16096, ಬೀದರ್ 398, ಚಾಮರಾಜನಗರ 499, ಚಿಕ್ಕಬಳ್ಳಾಪುರ 424, ಚಿಕ್ಕಮಗಳೂರು 391, ಚಿತ್ರದುರ್ಗ 204, ದಕ್ಷಿಣ ಕನ್ನಡ 1626, ದಾವಣಗೆರೆ 601, ಧಾರವಾಡ 1303, ಗದಗ 316, ಹಾಸನ 1241, ಹಾವೇರಿ 640, ಕಲಬುರಗಿ 819, ಕೊಡಗು 324, ಕೋಲಾರ 629, ಕೊಪ್ಪಳ 518, ಮಂಡ್ಯ 647, ಮೈಸೂರು 2377, ರಾಯಚೂರು 330, ರಾಮನಗರ 314, ಶಿವಮೊಗ್ಗ 1081, ತುಮಕೂರು 1105, ಉಡುಪಿ 475, ಉತ್ತರ ಕನ್ನಡ 752, ವಿಜಯಪುರ 494, ಯಾದಗಿರಿ 207 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.