ರಾಜ್ಯದಲ್ಲಿ ಲಸಿಕೆ ವಿತರಣೆ: ಎರಡರಲ್ಲಿ ಒಂದನ್ನಾದರೂ ಸರಿಯಾಗಿ ಮುಗಿಸಿ!
ಆಕ್ಸಿಜನ್, ಬೆಡ್, ಅಂಬುಲೆನ್ಸ್ ಮುಂತಾದ ಸಮಸ್ಯೆಗಳು ಸ್ವಲ್ಪಮಟ್ಟಿಗೆ ತಹದಾರಿಗೆ ಬಂತು ಎಂದಾಗ ಈಗ ಲಸಿಕೆಯ ಹಾಹಾಕಾರ ಎದ್ದಿದೆ. ಗೊತ್ತು ಗುರಿಯಿಲ್ಲದೇ ಮೇ ಒಂದರಿಂದ ಹದಿನೆಂಟು ವರ್ಷದ ಮೇಲ್ಪಟ್ಟವರಿಗೂ ಲಸಿಕೆ ವಿತರಣೆ ಆರಂಭವಾಗುತ್ತದೆ ಎನ್ನುವ ಕೇಂದ್ರದ ಘೋಷಣೆ ಇದಕ್ಕೆಲ್ಲಾ ಕಾರಣ ಎಂದರೆ ತಪ್ಪಾಗಲಾರದು.
ಲಸಿಕೆ ತಯಾರಿಸುವ ಕಂಪೆನಿಗಳ ಜೊತೆ ಮಾತುಕತೆ ನಡೆಸಿ ಪ್ರಧಾನಿ ಮೋದಿ ಈ ಘೋಷಣೆಯನ್ನು ಮಾಡಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ, ಮೊದಲೇ ಕೊರೊನಾ ನಿರ್ವಹಣೆಗೆ ಒದ್ದಾಡುತ್ತಿರುವ ರಾಜ್ಯ ಸರಕಾರಗಳು, ಅವರ ಹೇಳಿಕೆಯಿಂದಾಗಿ ಈಗ ಲಸಿಕೆ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಬಿಎಸ್ವೈ ಆ ಒಂದು ನಿರ್ಧಾರ: ಹಳಿ ತಪ್ಪಿದ್ದ ಕೊರೊನಾ ನಿರ್ವಹಣೆ ನಿಧಾನವಾಗಿ ಟ್ರ್ಯಾಕಿಗೆ
ಇನ್ನು, ಕರ್ನಾಟಕದಲ್ಲಂತೂ ಮುಖ್ಯಮಂತ್ರಿ ಯಡಿಯೂರಪ್ಪನವರು, ಪ್ರಧಾನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮೇ ಒಂದರಂದು ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನವನ್ನು ಆರಂಭಿಸಿಯೇ ಬಿಟ್ಟರು.
ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್
ಇದಾದ ನಂತರ, ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮೇ ಹತ್ತರಿಂದ ಲಸಿಕೆ ನೀಡಲು ಆರಂಭಿಸಲಾಗುತ್ತಿದೆ ಎಂದು ಹೇಳಿದರು. ಇದರಿಂದ, ಸ್ವಾಭಾವಿಕವಾಗಿ ಯುವ ಸಮುದಾಯ ಲಸಿಕೆ ಹಾಕಿಸಿಕೊಳ್ಳಲು ದಾಂಗುಡಿ ಇಟ್ಟಿತು. ಆದರೆ, ಲಸಿಕೆ ಯಾವಾಗ ಬರುತ್ತೆ ಎನ್ನುವ ವಿಚಾರದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ (ಸಿಎಸ್) ವಸ್ತುನಿಷ್ಠವಾಗಿ ಮಾತನಾಡಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ (ಸಿಎಸ್) ರವಿಕುಮಾರ್ ವಸ್ತುನಿಷ್ಠ
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಎಸ್ ರವಿಕುಮಾರ್, "ಲಸಿಕೆ ಯಾವಾಗ ಬರುತ್ತದೆ, ಇದೇ ದಿನ ನಮ್ಮ ಕೈಸೇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಕಂಪೆನಿಯವರು ನಮಗೆ ಕೊಡಬೇಕು. ಲಸಿಕೆ ಬರಲು ದಿನ ಅಲ್ಲ. ತಿಂಗಳು ಗಟ್ಟಲೆ ಆಗಬಹುದು. ನಾವು ಕಾಯುತ್ತಿದ್ದೇವೆ. ಮೂರು ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ"ಎಂದು ರವಿಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಲೆಕ್ಕಾಚಾರದ ಪ್ರಕಾರ ಇಲ್ಲೇ ಸುಮಾರು ಅರವತ್ತು ಲಕ್ಷ ಲಸಿಕೆ ಎರಡನೇ ಡೋಸ್ ಕೊಡಲು ಬೇಕು
ಈಗಾಗಲೇ ರಾಜ್ಯದ ಸುಮಾರು 85ಲಕ್ಷ ಜನ ಮೊದಲನೇ ಡೋಸ್ ತೆಗೆದುಕೊಂಡಿದ್ದಾರೆ. ಇದರಲ್ಲಿ ಎರಡನೇ ಡೋಸ್ ತೆಗೆದುಕೊಂಡವರು ಸುಮಾರು 25 ಲಕ್ಷ. ಸಿಂಪಲ್ ಲೆಕ್ಕಾಚಾರದ ಪ್ರಕಾರ ಇಲ್ಲೇ ಸುಮಾರು ಅರವತ್ತು ಲಕ್ಷ ಲಸಿಕೆ ಎರಡನೇ ಡೋಸ್ ಕೊಡಲು ಬೇಕಾಗುತ್ತದೆ. ನಿಗದಿತ ಸಮಯದಲ್ಲಿ ಎರಡನೇ ಡೋಸ್ ನೀಡದಿದ್ದರೆ ಅಭಿಯಾನದ ಉದ್ದೇಶ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾಗಿ, ಸರಕಾರ ಇದನ್ನೇ ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು.
45ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೇಂದ್ರದಿಂದ ಬರಬೇಕು ಎನ್ನುವ ಉತ್ತರ
45ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೇಂದ್ರದಿಂದ ಬರಬೇಕು ಎನ್ನುವ ಉತ್ತರ ರಾಜ್ಯ ಸರಕಾರದಿಂದ ಬರುತ್ತಿದೆ. ಅಲ್ಲಿಂದ ಯಾವಾಗ ಬರುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಸಕಾಲದಲ್ಲಿ ಲಸಿಕೆ ಬರುತ್ತದೆ ಎನ್ನುವ ಗ್ಯಾರಂಟಿ ರಾಜ್ಯ ಸರಕಾರಕ್ಕೂ ಇಲ್ಲ. ಒಟ್ಟಿನಲ್ಲಿ ಎಲ್ಲವೂ ಗೊಂದಲದ ಗೂಡಾಗಿ ಕೂತಿದೆ.
ಔಷಧಿ ಕಂಪೆನಿಗಳಿಗೆ ಆರ್ಡರ್ ಮಾಡಲಾಗಿರುವ ಲಸಿಕೆ
ಇಂತಹ ಸಮಯದಲ್ಲಿ ಮೊದಲು ಎರಡನೇ ಡೋಸ್ ಕೆಲಸವನ್ನು ಆದ್ಯತೆಯಿಂದ ಮುಗಿಸುವುದು ಸೂಕ್ತ. 45ವರ್ಷ ಮೇಲ್ಪಟ್ಟವರಿಗೆ ಕೇಂದ್ರ, 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಎನ್ನುವ ಲೆಕ್ಕಾಚಾರವನ್ನು ಬಿಟ್ಟು, ನೇರವಾಗಿ ಔಷಧಿ ಕಂಪೆನಿಗಳಿಗೆ ಆರ್ಡರ್ ಮಾಡಲಾಗಿರುವ ಲಸಿಕೆಯನ್ನು ಎರಡನೇ ಡೋಸಿಗೆ ಬಳಸಿದರೆ ಆ ಕೆಲಸವಾದರೂ, ಅಚ್ಚುಕಟ್ಟಾಗಿ ಮುಗಿಯುತ್ತದೆ.
Recommended Video
|
ಲಸಿಕೆ ವಿತರಣೆ: ಎರಡರಲ್ಲಿ ಒಂದನ್ನಾದರೂ ಸರಿಯಾಗಿ ಮುಗಿಸಿ
ಇದೆಲ್ಲಾ, ಮುಗಿದ ಮೇಲೆ, ಹದಿನೆಂಟು ವರ್ಷದವರಿಗೆ ಲಸಿಕೆ ಕೊಡಲು ಆರಂಭಿಸುವುದು ಸೂಕ್ತ. ಒಟ್ಟಿನಲ್ಲಿ, ಎರಡರಲ್ಲಿ ಒಂದನ್ನಾದರೂ ಸರಿಯಾಗಿ ರಾಜ್ಯ ಸರಕಾರ ನಿಭಾಯಿಸಲಿ ಎನ್ನುವುದು ಸಾರ್ವಜನಿಕರ ಆಶಯ. ದೆಹಲಿ ಮತ್ತು ಮಹಾರಾಷ್ಟ್ರ ಸರಕಾರ ಹದಿನೆಂಟು ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮವನ್ನು ಸದ್ಯಕ್ಕೆ ತಡೆಹಿಡಿದಿದೆ. ಮುಂದೆ ನೋಡೋಣ ಎಂದಿದೆ.