ದೆಹಲಿ ಮನೆಯಲ್ಲಿ ಹಣ ಪತ್ತೆ: ಇಂದು ಸಚಿವ ಡಿಕೆ ಶಿವಕುಮಾರ್ ಭವಿಷ್ಯ ನಿರ್ಧಾರ
ಬೆಂಗಳೂರು, ಜೂನ್ 25: ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲಿನ ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಲಿದೆ.
ಡಿ.ಕೆ. ಶಿವಕುಮಾರ್ ಅವರ ಮೇಲೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಕೈಬಿಡುವಂತೆ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತೀರ್ಪನ್ನು ನ್ಯಾಯಾಲಯ ಒಂದು ಹೊರಡಿಸಲಿದೆ. ಇದರಿಂದ ರಾಜ್ಯ ಕಾಂಗ್ರೆಸ್ನ 'ಟ್ರಬಲ್ ಶೂಟರ್' ಸ್ವತಃ 'ಟ್ರಬಲ್'ನಲ್ಲಿ ಸಿಲುಕಲಿದ್ದರೆಯೇ ಅಥವಾ ಬಚಾವಾಗಲಿದ್ದಾರೆಯೇ ಎಂಬುದು ಸ್ಪಷ್ಟವಾಗಲಿದೆ.
ನಾನು ಸುಮ್ಮನಿರುವುದು ಇದೇ ಕಾರಣಕ್ಕಾಗಿ : ಡಿ ಕೆ ಶಿವಕುಮಾರ್
2017ರ ಆಗಸ್ಟ್ನಲ್ಲಿ ಅದಾಯ ತೆರಿಗೆ ಇಲಾಖೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಇತರೆ ಸ್ಥಳಗಳ ಮೇಲೆಯೂ ದಾಳಿ ನಡೆಸಲಾಗಿತ್ತು. ದೆಹಲಿಯಲ್ಲಿರುವ ಅವರ ಫ್ಲ್ಯಾಟ್ನಲ್ಲಿ ನಾಲ್ಕು ಕೋಟಿ ರೂಪಾಯಿ ಪತ್ತೆಯಾಗಿತ್ತು. ಇದಕ್ಕೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಅದನ್ನು ಮುಟ್ಟುಗೋಲು ಹಾಕಿಕೊಂಡು ಅವರ ವಿರುದ್ಧ ಹವಾಲ ಹಣ, ಕಪ್ಪ, ತೆರಿಗೆ ಸೇರಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈಗಾಗಲೇ ಮೂರು ಪ್ರಕರಣಗಳಿಂದ ಡಿಕೆ ಶಿವಕುಮಾರ್ ಅವರು ಮುಕ್ತರಾಗಿದ್ದಾರೆ. ಇನ್ನು ಒಂದು ಪ್ರಕರಣ ಅವರ ಮೇಲಿದ್ದು, ಅದನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಇಂದು ಪ್ರಕಟವಾಗುವ ನಿರೀಕ್ಷೆಯಿದೆ. ನ್ಯಾಯಾಧೀಶ ರಾಮಚಂದ್ರ ಹುದ್ದಾರ್ ತೀರ್ಪು ಪ್ರಕಟಿಸಲಿದ್ದಾರೆ.