ವೀರಪ್ಪನ್ ವೆಬ್ ಸರಣಿ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದ ಕೋರ್ಟ್
ಬೆಂಗಳೂರು, ಜನವರಿ 12: ನರಹಂತಕ ವೀರಪ್ಪನ್ ಜೀವನಾಧಾರಿತ" ಹಂಗರ್ ಫರ್ ಕಿಲ್ಲಿಂಗ್ " ವೆಬ್ ಸೀರೀಸ್ ಬಿಡಗಡೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಎ.ಎಂ ಸುರೇಶ್ ವೀರಪ್ಪನ್ ಜೀವನಾಧಾರಿತ ವೆಬ್ ಸೀರೀಸ್ " ಹಂಗರ್ ಫರ್ ಕಿಲ್ಲಿಂಗ್ " ನಿರ್ಮಾಣ ಮಾಡಿದ್ದರು. ಈ ವೆಬ್ ಸೀರೀಸ್ ಬಿಡುಗಡೆಯಾದರೆ ನಮ್ಮ ಬದುಕಿಗೆ ಧಕ್ಕೆಯಾಗಲಿದೆ. ಪದೇ ಪದೇ ನನ್ನ ಪತಿಯ ಹೆಸರಿನಲ್ಲಿ ಸಿನಿಮಾ ಮಾಡಿ ಗೌರವಯುತ ಜೀವನಕ್ಕೆ ತೊಂದರೆಯಾಗುತ್ತಿದೆ. ವೆಬ್ ಸೀರೀಸ್ ಬಿಡುಗಡೆಯಾಗಬಾರದು ಎಂದು ಕೋರಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ನ್ಯಾಯಾಲಯದ ಮೊರೆ ಹೋಗಿದ್ದರು. ಮುತ್ತುಲಕ್ಷ್ಮೀ ಅವರ ಅರ್ಜಿ ಅಂಗೀಕರಿಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ, ಹಂಗರ್ ಫರ್ ಕಿಲ್ಲಿಂಗ್ ವೆಬ್ ಸೀರೀಸ್ ಬಿಡುಗಡೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಮಂಗಳವಾರ ಈ ಕುರಿತು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ತಿಳಿಸಿದರು.
ವೀರಪ್ಪನ್ ಪತ್ನಿ ಗರಂ:
ನಿರ್ದೇಶಕ ಎ.ಎಂ. ಸುರೇಶ್ ಯಾಕೆ ವೀರಪ್ಪನ್ ಹೆಸರು ಹೇಳಿಕೊಂಡು ಹಣ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ತನ್ನ ಗಂಡನ ಹೆಸರಿನಲ್ಲಿ ಸಿನಿಮಾ, ವೆಬ್ ಸೀರೀಸ್ ಮಾಡಬಾರದು. ಎ.ಎಂ. ಸುರೇಶ್ ಈ ಹಿಂದೆ ಅಟ್ಟಹಾಸ ಸಿನಿಮಾ ಮಾಡಿದ್ದರು. ವೆಬ್ ಸೀರೀಸ್ ಮೂಲಕ ಪೊಲೀಸರ ಸಾಹಸದ ಬಗ್ಗೆ ಹೇಳಲು ಹೊರಟಿದ್ದಾರೆ. ವೆಬ್ ಸೀರೀಸ್ ಅವಧಿ 10. 45 ಗಂಟೆ ವರೆಗೂ ಇದೆ ಎಂಬ ಮಾಹಿತಿ ಸಿಕ್ಕಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ವೆಬ್ ಸೀರೀಸ್ ನಿಂದ ನನ್ನ ಗಂಡನನ್ನು ಕೆಟ್ಟ ವ್ಯಕ್ತಿಯನ್ನಾಗಿ ಬಿಂಬಿಸಲಿದ್ದು, ನಮ್ಮನ್ನು ಸಮಾಜ ಕೆಟ್ಟದಾಗಿ ಕಾಣಲಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದಾಗಿ ಮುತ್ತುಲಕ್ಷ್ಮೀ ಹೇಳಿದರು.
ತಡೆಯಾಜ್ಞೆ ಆದೇಶ:
ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ತಡೆಯಾಜ್ಞೆ ಆದೇಶದ ಪ್ರಕಾರ ವೀರಪ್ಪನ್ ಕುರಿತ ವೆಬ್ ಸೀರೀಸ್ ಸೋಸಿಯಲ್ ಮಿಡಿಯಾದಲ್ಲಿ ಹಾಕುವಂತಿಲ್ಲ. ಒಟಿಟಿ ಪ್ಲಾಟ್ ಫಾರಂನಲ್ಲೂ ಬಿಡುಗಡೆ ಮಾಡುವಂತಿಲ್ಲ. ಯಾವುದೇ ಭಾಷೆಯಲ್ಲೂ ರಿಲೀಸ್ ಮಾಡುವಂತಿಲ್ಲ. ಮಾಡಿದಲ್ಲಿ ಸಂವಿಧಾನದ ವಿಧಿ 21ರ ಉಲ್ಲಂಘನೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಡೆಯಾಜ್ಞೆ ತೆರವು:
ವೀರಪ್ಪನ್ ಅವರ ಅಟ್ಟಹಾಸದ ಜೀವನದ ಬಗ್ಗೆ ತೆಗೆದಿರುವ ಹಂಗರ್ ಆಫ್ ಕಿಲ್ಲಿಂಗ್ ವೆಬ್ ಸೀರಿಸ್ ಬಿಡುಗಡೆಯಾಗಲು ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು. ಮುತ್ತುಲಕ್ಷ್ಮೀ ಅವರು ತಂದಿರುವ ತಡೆಯಾಜ್ಞೆ ತೆರವು ಕೋರಿ ನಿರ್ದೇಶಕ ಎ.ಎಂ. ಸುರೇಶ್ ನ್ಯಾಯಾಲಯದ ಮೊರೆ ಹೋಗಬೇಕು. ಅಲ್ಲಿ ವಾದ ವಿವಾದ ನಡೆದ ಬಳಿಕ, ವೆಬ್ ಸೀರೀಸ್ ನಲ್ಲಿ ವೀರಪ್ಪನ್ ಕುರಿತ ಯಾವ ವಿಷಯ ಚಿತ್ರೀಕರಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಮುಂದೆ ಏನಾದರೂ ಬದಲಾವಣೆಯಾಗಿ, ಮುತ್ತು ಲಕ್ಷ್ಮೀ ಅವರೇ ಸ್ವತಃ ಬಿಗುಗಡೆಗೆ ನನ್ನ ತಕರಾರಿಲ್ಲ ಎಂದು ಪ್ರಮಾಣ ಪತ್ರ ಹಾಕುವ ಮೂಲಕ ಬಿಡುಗಡೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇಲ್ಲದಿದ್ದರೆ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎ.ಎಂ. ಸುರೇಶ್ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ.
Recommended Video
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಅಳಲು:
ನಮ್ಮ ನೋವಿಗೆ ಈವರೆಗೂ ಯಾವ ಸರ್ಕಾರವೂ ಸ್ಪಂದಿಸಿಲ್ಲ. ಕನಿಷ್ಠ ಪಕ್ಷ ರೇಷನ್ ಕಾರ್ಡ್ ಕೂಡ ಕೊಟ್ಟಿಲ್ಲ ! ಮೂರು ರಾಜ್ಯಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ನರ ಹಂತಕ, ದಂತಚೋರ ವೀರಪ್ಪನ್ ಅವರ ಪತ್ನಿಯ ಮನದಾಳದ ಮಾತು. ಹಂಗರ್ ಆಫ್ ಕಿಲ್ಲಿಂಗ್ ವೆಬ್ ಸೀರೀಸ್ ಬಿಡುಗಡೆ ಮಾಡದಂತೆ ತಂದಿರುವ ತಡೆಯಾಜ್ಞೆ ಕುರಿತ ಪ್ರಸ್ತಾಪಿಸುವ ವೇಳೆ ತಮ್ಮ ಬದುಕಿನ ಬಗ್ಗೆಯೂ ವಿವರಿಸಿದರು.
ವೀರಪ್ಪನ್ ಇವತ್ತಿಗೆ ಇಲ್ಲ. ಅವರ ಹತ್ಯೆಯ ಬಳಿಕ ತಮಿಳುನಾಡು ಸರ್ಕಾರವಾಗಲೀ, ಕರ್ನಾಟಕ ಸರ್ಕಾರವಾಗಲಿ ಯಾವುದೇ ನೆರವು ನೀಡಿಲ್ಲ. ನಮ್ಮ ಮನವಿಗೂ ಸ್ಪಂದಿಸಿಲ್ಲ. ಇಲ್ಲಿಯ ವರೆಗೂ ಒಂದು ರೇಷನ್ ಕಾರ್ಡ್ ಸಿಕ್ಕಿಲ್ಲ ಎಂದು ಮುತ್ತುಲಕ್ಷ್ಮೀ ತನ್ನ ಬದುಕಿನ ವಿವರ ನೀಡಿದರು. ವೀರಪ್ಪನ್ ಬಗ್ಗೆ ಕೆಟ್ಟದಾಗಿ ತೋರಿಸುತ್ತಾರೆ. ಈ ಮೂಲಕ ಕೆಲವರು ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ, ವೀರಪ್ಪನ್ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ತೋರಿಸಲಿ ಎಂದು ಮನವಿ ಮಾಡಿದರು.