14 ಕ್ಷೇತ್ರದಲ್ಲಿ ಮತದಾನಕ್ಕೆ ಕ್ಷಣಗಣನೆ, ಒಂದಷ್ಟು ಮಾಹಿತಿ
ಬೆಂಗಳೂರು, ಏಪ್ರಿಲ್ 17 : ಆರೋಪ-ಪ್ರತ್ಯಾರೋಪ, ಮಾತಿನ ತಿವಿತ, ಭರ್ಜರಿ ಪ್ರಚಾರದ ಬಳಿಕ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ 2,67,51,893 ಮತದಾರರು ಗುರುವಾರ ಹಕ್ಕು ಚಲಾವಣೆ ಮಾಡುವ ಅರ್ಹತೆ ಹೊಂದಿದ್ದಾರೆ. 2009ರ ಚುನಾವಣೆಗಿಂತ 2014ರ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಿತ್ತು. 2019ರಲ್ಲಿ ಎಷ್ಟು ಮತದಾನವಾಗಲಿದೆ ಎಂದು ಕಾದು ನೋಡಬೇಕು.
14 ಕ್ಷೇತ್ರದ ಚುನಾವಣೆಗೆ ವೇದಿಕೆ ಸಿದ್ಧ, ತಪ್ಪದೇ ಮತ ಹಾಕಿ
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 241 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹೆಚ್ಚು ಅಂದರೆ 31, ಹಾಸನ ಕ್ಷೇತ್ರದಲ್ಲಿ ಕಡಿಮೆ ಎಂದರೆ 6 ಅಭ್ಯರ್ಥಿಗಳಿದ್ದಾರೆ. ಗುರುವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಬಹುದಾಗಿದೆ.
28,48,705 ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರ ಬೆಂಗಳೂರು ದಕ್ಷಿಣ, 15,13,333 ಮತದಾರರನ್ನು ಹೊಂದಿರುವ ಚಿಕ್ಕ ಕ್ಷೇತ್ರ ಉಡುಪಿ-ಚಿಕ್ಕಮಗಳೂರಿನಲ್ಲಿಯೂ ಗುರುವಾರ ಮತದಾನ ನಡೆಯಲಿದೆ. ಬೆಂಗಳೂರು ನಗರದಲ್ಲಿ ಎಷ್ಟು ಮತದಾನವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ
ಪ್ರಮುಖ ಅಭ್ಯರ್ಥಿಗಳು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (ತುಮಕೂರು), ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ), ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಮಂಡ್ಯ), ರಾಜ್ಯ ಸಚಿವ ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ), ಸುಮಲತಾ ಅಂಬರೀಶ್ (ಮಂಡ್ಯ), ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ (ಕೋಲಾರ), ಎಂ.ವೀರಪ್ಪ ಮೊಯ್ಲಿ (ಚಿಕ್ಕಬಳ್ಳಾಪುರ), ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (ಹಾಸನ), ನಟ ಪ್ರಕಾಶ್ ರಾಜ್ (ಬೆಂಗಳೂರು ಕೇಂದ್ರ).
ದೇಶದ ಕಣ್ಣು ರಾಜ್ಯದ ಮೇಲೆ : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಆದ್ದರಿಂದ, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನಗಳಿಸಲಿದೆ ಎಂದು ದೇಶ ಕುತೂಹಲದಿಂದ ಕಾದು ನೋಡುತ್ತಿದೆ. ಹೆಚ್ಚಿನ ಸ್ಥಾನ ಗೆದ್ದು ಮೈತ್ರಿ ಸರ್ಕಾರ ಭದ್ರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಮೈತ್ರಿಕೂಟಕ್ಕಿದೆ.
ಆರೋಪ ಪ್ರತ್ಯಾರೋಪ : ಮಂಡ್ಯ ಕ್ಷೇತ್ರದಲ್ಲಿ ಕೇಳಿಬಂದ ಗೌಡರಲ್ಲ, ನಾಯ್ಡುಗಳು, ಸಿನಿಮಾದವರನ್ನು ನಂಬಬೇಡಿ ಆರೋಪ. ತುಮಕೂರಿನಲ್ಲಿ ಕೇಳಿಬಂದ ಹೇಮಾವತಿ ನೀರು ಹರಿಸದ ಆರೋಪ. ಬೆಂಗಳೂರು ಉತ್ತರದಲ್ಲಿ ಹೇಳಿಬಂದ ಕೆಲಸ ಮಾಡದ ಆರೋಪ. ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ವಿವಾದ. ಹಾಸನದ ಕುಟುಂಬ ರಾಜಕಾರಣ, ಕಣ್ಣೀರಿನ ರಾಜಕೀಯಗಳಿಗೆ ಗುರುವಾರ ಮತದಾರ ಉತ್ತರ ಕೊಡಲಿದ್ದಾನೆ.
ಮಂಡ್ಯದ ಕುತೂಹಲ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣದಲ್ಲಿದ್ದಾರೆ. ಬಿಜೆಪಿ ಅವರಿಗೆ ಬೆಂಬಲ ನೀಡಿದೆ.
ದೇವೇಗೌಡರ ಕುಟುಂಬದಿಂದ ಮೂವರು : 14 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸದಸ್ಯರೇ ಕಣದಲ್ಲಿದ್ದಾರೆ. ತುಮಕೂರಿನಿಂದ ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ ಅಭ್ಯರ್ಥಿಗಳು.
ಪ್ರಜಾಕೀಯದ ಅಭ್ಯರ್ಥಿಗಳು : ನಟ, ನಿರ್ದೇಶಕ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದೆ. 14 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಕಣದಲ್ಲಿದ್ದು, ಉಪೇಂದ್ರ ಅವರು ಪ್ರಚಾರವನ್ನು ನಡೆಸಿದ್ದಾರೆ.ಬಿಜೆಪಿಯೇ ಎದುರಾಳಿ : ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿತ್ತು. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮೈತ್ರಿಕೂಟಕ್ಕೆ ಬಿಜೆಪಿಯೇ ನೇರ ಎದುರಾಳಿಯಾಗಿದೆ. ಆದರೆ, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯೇ ಕಣದಲ್ಲಿಲ್ಲ. ಅಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಕಾಂಗ್ರೆಸ್-ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಎದುರಾಳಿಗಳು.
ಚುನಾವಣೆ ನಡೆಯಲಿರುವ ಕ್ಷೇತ್ರಗಳು : ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ.
ಮತಗಟ್ಟೆಗಳ ಮಾಹಿತಿ : 14 ಕ್ಷೇತ್ರಗಳಲ್ಲಿ 30,164 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಚುನಾವಣೆಗೆ 1,54, 262 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 40 ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿದೆ.
ನರೇಂದ್ರ ಮೋದಿ ಭೇಟಿ : ಗುರುವಾರ ದಕ್ಷಿಣ ಕರ್ನಾಟಕದಲ್ಲಿ ಮತದಾನ ನಡೆಯುತ್ತಿದ್ದರೆ ಉತ್ತರ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಏಪ್ರಿಲ್ 23ರಂದು ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಆದ್ದರಿಂದ, ರಾಜ್ಯ ನಾಯಕರುಗಳು ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಪ್ರಚಾರವನ್ನು ನಡೆಸಬಹುದಾಗಿದೆ ಎಂದು ಆಯೋಗ ಹೇಳಿದೆ.