ವೃತ್ತಿಪರ ಕೋರ್ಸ್ಗಳಿಗೆ ಜೂನ್ 25ರಿಂದ ಸೀಟು ಹಂಚಿಕೆ ಆರಂಭ!
ಬೆಂಗಳೂರು. ಜೂನ್ 2: ಕರ್ನಾಟಕ ಸಿಇಟಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ವಿಜಯಪುರದ ಶ್ರೀಧರ್ ದೊಡ್ಮನಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಂಜಿನಿಯರಿಂಗ್ ಹಾಗೂ ಇನ್ನಿತರೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ದಾಖಲೆಗಳನ್ನು ಜೂ.5ರಿಂದ ಪರಿಶೀಲನೆ ಮಾಡಲಾಗುತ್ತದೆ.
ರಾಜ್ಯದ 16 ಕೇಂದ್ರಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಂತರ ಜೂ.25ರಿಂದ ಕೌನ್ಸೆಲಿಂಗ್ ಪ್ರಾರಂಭಿಸಲು ಚಿಂತಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಖತ್ರಿ ತಿಳಿಸಿದ್ದಾರೆ.
ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ್ಯಾಂಕ್
ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಆನ್ಲೈನ್ ಮೂಲಕ ಮತ್ತು ಅಂಕಪಟ್ಟಿ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಮತ್ತು ಅಂಕಪಟ್ಟಿ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೆಇಎ ಅಧಿಕಾರಿ ವಿನೋದ್ ಪ್ರಿಯಾ ತಿಳಿಸಿದ್ದಾರೆ.
ಟಾಪ್-5 ಸ್ಥಾನ ಪಡೆದವರಿಗೆ ಉಚಿತ ಶಿಕ್ಷಣ: ಸಿಇಟಿ ಪರೀಕ್ಷೆ ನಾಲ್ಕು ವಿಭಾಗಗಳಲ್ಲಿ ಟಾಪ್ -5 ಸ್ಥಾನ ಪಡೆದವರಿಗೆ ಸರ್ಕಾರ ಉಚಿತ ಶಿಕ್ಷಣ ನೀಡಲು ಕ್ರಮ ಕೈಗೊಂಡಿದೆ. ಈ ವಿದ್ಯಾರ್ಥಿಗಳು ತಮ್ಮ ಪದವಿ ಪೂರೈಸುವವರೆಗೂ ಎಲ್ಲಾ ರೀತಿಯ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.
ಶುಲ್ಕ ಹೆಚ್ಚಳ ಬಗ್ಗೆ ತೀರ್ಮಾನ ಇಲ್ಲ: ಈ ಬಾರಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಶುಲ್ಕ ಹೆಚ್ಚಳ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೂ.6ರಂದು ಸಭೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವೇ ದಿನಗಳಲ್ಲಿ ನೀಟ್ ಫಲಿತಾಂಶ ಪ್ರಕಟವಾಗಲಿದ್ದು, ವೈದ್ಯ, ದಂತವೈದ್ಯ, ಭಾರತೀಯ ವೈದ್ಯಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ ಗಳಿಗೆ ಜೂ.25 ರಿಂದ ಜು.5ರ ಒಳಗೆ ಮೊದಲ ಹಂತದ ಕೌನ್ಸೆಲಿಂಗ್ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆಗಸ್ಟ್ 18ರ ಒಳಗೆ ಎಲ್ಲ ಹಂತದ ಕೌನ್ಸೆಲಿಂಗ್ ಪೂರ್ಣಗೊಳ್ಳುವಂತೆ ಆದೇಶಿಸಿದೆ.