ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿದ ವೈದ್ಯಕೀಯ ಸಲಕರಣೆಗಳ ಹಗರಣ
ಬೆಂಗಳೂರು ಸೆ. 21: ಕೊರೊನಾ ವೈರಸ್ ನೆಪದಲ್ಲಿ ವಿಧಾನ ಮಂಡಲ ಅಧಿವೇಶನವನ್ನು ಹತ್ತು ದಿನಗಳ ಬದಲಿಗೆ ಐದು ದಿನಗಳಿಗೆ ಮೊಟಕುಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಮತ್ತೊಂದೆಡೆ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆ ಖರೀದಿಸಲಾಗಿದ್ದ ವೈದ್ಯಕೀಯ ಸಲಕರಣೆಗಳಿಗೆ ಹೆಚ್ಚಿನ ಹಣ ಪಾವತಿಸಲಾಗಿದೆ ಎಂಬ ವಿಚಾರ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿದೆ. ಹೀಗಾಗಿ ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಖರೀದಿಸಲಾಗಿರುವ ವೈದ್ಯಕೀಯ ಪರಿಕರಗಳ ಕುರಿತು ಅರ್ಧ ಗಂಟೆ ಚರ್ಚೆ ನಡೆಸಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಆದೇಶ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕೊರೊನಾ ಸಂಬಂಧವಾಗಿ ಖರೀದಿಸಲಾದ ವಿವಿಧ ಸಾಮಗ್ರಿಗಳ ಬಗ್ಗೆ ಸದಸ್ಯ ಎಂ. ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ತಜ್ಞರ ಸಮಿತಿಯಲ್ಲಿ ಚರ್ಚಿಸಿಯೇ ಸರ್ಕಾರ ವೈದ್ಯಕೀಯ ಪರಿಕರ ಖರೀದಿ ಮಾಡಿದೆ,ಕೋವಿಡ್ ಆರಂಭದಲ್ಲಿ ನಮ್ಮ ದೇಶದಲ್ಲಿ ಪರಿಕರಗಳ ಕೊರತೆ ಇತ್ತು, ಪೂರೈಕೆದಾರರೇ ಇಲ್ಲದ ಸಮಯದಲ್ಲಿ ನಾವು ಹೊರದೇಶಗಳಿಂದ ತರಿಸಿಕೊಳ್ಳಬೇಕಾಯಿತು, ಈ ವೇಳೆ ಕಳಪೆ ಕಿಟ್ ವಾಪಸ್ ಕಳಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!
ಖರೀದಿಸಿದ ಪರಿಕರಗಳ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ, ನೀಡ್ ಅಸೆಸ್ ಮೆಂಟ್ ಸಮಿತಿ ಪರಿಶೀಲನೆ ನಡೆಸಲಿದೆ ನಂತರ ಟೆಕ್ನಿಕಲ್ ಸ್ಪೆಸಿಫಿಕೇಷನ್ ಕಮಿಟಿ, ಪ್ರಕ್ಯೂರ್ ಮೆಂಟ್ ಕಮಿಟಿ, ಪ್ರೈಸ್ ಫಿಕ್ಸೇಷನ್ ಕಮಿಟಿ ಇದೆ. ಎಲ್ಲವನ್ನೂ ಪರಿಶೀಲನೆ ಮಾಡಿಯೇ ಖರೀದಿ ಮಾಡಲಾಗಿದೆ ಅಲ್ಲದೇ ನಾವಾಗಿಯೇ ಯಾವುದೇ ಕಂಪನಿ ಆಯ್ದುಕೊಂಡಿಲ್ಲ ಕೇಂದ್ರ ಕಳಿಸಿದ ಪಟ್ಟಿಯಲ್ಲಿನ ಕಂಪನಿಗಳಿಂದಲೇ ತರಿಸಿಕೊಳ್ಳಲಾಗಿದೆ ಎಂದು ಶ್ರೀರಾಮುಲು ಉತ್ತರಿಸಿದರು.
ಅಧಿಕ ಹಣಕೊಟ್ಟು ಖರೀದಿ
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸದಸ್ಯ ನಾರಾಯಣಸ್ವಾಮಿ ಹಾಗು ಪಿ.ಆರ್. ರಮೇಶ್, ದುಬಾರಿ ಬೆಲೆ ನೀಡಿ ಪರಿಕರ ಖರೀದಿ ಮಾಡಲಾಗಿದೆ. ಪಿಎಂ ಕೇರ್ ನಿಂದ 4 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿ ಇಡೀ ದೇಶಕ್ಕೆ ವಿತರಣೆ ಮಾಡಲಾಗಿದೆ ಆದರೆ ನಮ್ಮ ರಾಜ್ಯ ಸರ್ಕಾರ 5-18 ಲಕ್ಷದವರೆಗೆ ಖರೀದಿಸಿದೆ ಹಾಗಾದರೆ ಪಿಎಂ ಕೇರ್ ಖರೀದಿ ಮಾಡಿರುವ ವೆಂಟಿಲೇಟರ್ ಕಳಪೆನಾ ಎಂದು ಪ್ರಶ್ನಿಸಿದರು. ಕಳಪೆ ಎಂದು ವೈದ್ಯರು ಪಿಪಿಇ ಕಿಟ್ನ್ನು ಬೀದಿಗೆಸೆದು ಪ್ರತಿಭಟನೆ ಮಾಡಿದ್ದಾರೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು, ಪ್ರಶ್ನೋತ್ತರದಲ್ಲಿ ಚರ್ಚೆಗೆ ಅವಕಾಶವಿಲ್ಲ. ಚರ್ಚೆಗೆ ಬಂದರೆ ನಾವೂ ಸಿದ್ದರಿದ್ದೇವೆ. ವ್ಯಾಪಕ ಚರ್ಚೆ ಮಾಡೋಣ ಎಂದರು. ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರೂ ದನಿಗೂಡಿಸಿದರು. ಬೇರೆ ರೂಪದಲ್ಲಿ ಚರ್ಚೆಗೆ ತನ್ನಿ ಎಂದರು.
ರೂಲಿಂಗ ಕೊಟ್ಟ ಸಭಾಪತಿ
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಚರ್ಚೆಗೆ ನಾವೂ ಸಿದ್ದರಿದ್ದೇವೆ ಅವಕಾಶ ನೀಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ನಂತರ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು.
ನಂತರ ಸದಸ್ಯ ಮರಿತಿಬ್ಭೇಗೌಡ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಭತ್ಯ ಮಂಜೂರಾತಿ ಬಗ್ಗೆ ಪ್ರಶ್ನಿಸಿದರು. ಸರ್ಕಾರ ಜಾಣ ಕಿವುಡು ಪ್ರದರ್ಶಿಸಿದೆ, ನನ್ನ ಪ್ರಶ್ನೆ ಅರ್ಥ ಮಾಡಿಕೊಂಡು ಜಾಣ ಉತ್ತರ ಕೊಟ್ಟಿದ್ದಾರೆ. ಮುಖ್ಯ ಶಿಕ್ಷಕರಿಗೆ ವಿಶೇಷ ಭತ್ಯೆ ಕೊಟ್ಟಿಲ್ಲ, ಸಹಶಿಕ್ಷಕರಿಗಿಂತ ವೇತನ ಕಡಿಮೆ ಇದೆ ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.
ಜಾಣ ಕಿವುಡು ಇಲ್ಲ
ಅದಕ್ಕೆ ಉತ್ತರಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ನಮ್ಮ ಸರ್ಕಾರಕ್ಕೆ ಜಾಣ ಕಿವುಡು ಇಲ್ಲ, ಕುರುಡೂ ಇರಬಾರದು, ಸವಿಸ್ತಾರವಾಗಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಲಾಗಿದೆ ಈ ಸಂಬಂಧ ಅವರಿಗೆ ಅನುಮಾನ ಇದ್ದಲ್ಲಿ ಸದಸ್ಯರಿಂದಿಗೆ ಚರ್ಚಿಸಿ ಏನು ಮಾಡಬಹುದು ಎಂದು ನಿರ್ಧರಿಸಲಾಗುತ್ತದೆ ಎಂದರು.
ನಂತರ ಎನ್ಎಬಿಹೆಚ್ ಸಂಸ್ಥೆಯಿಂದ ಸರ್ಕಾರಿ ಆಸ್ಪತ್ರೆಗಳಿಗರ ಮಾನ್ಯತೆ ಕಲ್ಪಿಸುವ ಕುರಿತು ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಈ ಸಂಬಂಧ ತಜ್ಞರ ಸಮಿತಿ ರಚಿಸಿ ಆಸ್ಪತ್ರೆ ಸುಧಾಕರಣೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಾಗುತ್ತದೆ, ಎನ್ಎಬಿಹೆಚ್ ಗುಣಮಟ್ಟಕ್ಕೆ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಕೇಂದ್ರದ ಅನುದಾನ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
Recommended Video
ಡ್ರಗ್ಸ್ ವಿಚಾರ ಪ್ರಸ್ತಾಪ
ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯ ವೇಳೆಯನ್ನು ಕೈಗೆತ್ತಿಕೊಳ್ಳಲಾಯಿತು. ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಡ್ರಗ್ಸ್ ಮತ್ತು ಗಾಂಜಾ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು ಸಿಲುಕುತ್ತಿದ್ದಾರೆ, ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಯಾವ ಭಯವಿಲ್ಲದೇ ಶಾಲಾ ಆವರಣದಲ್ಲೇ ಡ್ರಗ್ಸ್ ಗಾಂಜಾ ಸೇವೆನೆ ಮಾಡಿದ್ದಾರೆ. ಇದು ಭಯೋತ್ಪಾದನಗಿಂತ ಕೆಟ್ಟ ಪ್ರಭಾವ ಬೀರಲಿದೆ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಶ್ರೀಮಂತರ ಮಕ್ಕಳು ಡ್ರಗ್ಸ್, ಬಡವರ ಮಕ್ಕಳು ಗಾಂಜಾ ಜಾಲದಲ್ಲಿ ಸಿಲುಕಿದ್ದಾರೆ. ಸಣ್ಣ ಮಕ್ಕಳ ಕೈಗೆ ಇದು ಹೇಗೆ ಸಿಕ್ಕುತ್ತಿದೆ, ಅವರ ಮುಂದಿನ ಭವಿಷ್ಯವೇನು? ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಖ ಸಚಿವ ಜೆ.ಸಿ ಮಾಧುಸ್ವಾಮಿ, ಡ್ರಗ್ಸ್ ಮೇಲೆ ಗಮನ ಸೆಳೆಯುವ ಸೂಚನೆ ಇದೆ ಅದರ ನಡುವೆ ಶೂನ್ಯವೇಳೆಯಲ್ಲಿಯೂ ಕೇಳಲಾಗಿದೆ.ಇದನ್ನು ಒಟ್ಟಿಗೆ ತರಬಹುದಿತ್ತು,ಪರಿಷತ್ ಕಾರ್ಯಾಲಯ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.ಈ ಆರೋಪವನ್ನು ನಯವಾಗಿ ತಳ್ಳಿಹಾಕಿದ ಸಭಾಪತಿಗಳು ಎರಡೂ ಬೇರೆ ಬೇರೆ ಇದು, ಹೊರಟ್ಟಿ ಅವರದ್ದು ಸೀಮಿತವಾದ ಪ್ರಶ್ನೆ ಇದೆ ಎಂದರು.
ನಂತರ ಸರ್ಕಾರದ ಪರವಾಗಿ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ,ಎರಡು ದಿನದಲ್ಲಿ ಉತ್ತರವನ್ನು ಸದನಕ್ಕೆ ಮಂಡಿಸಲಿದ್ದೇವೆ, ಆದರೆ ಡ್ರಗ್ಸ್ ಮತ್ತು ಗಾಂಜಾ ವಿಚಾರದಲ್ಲಿ ಸರ್ಕಾರ ನಿರ್ದಯ ಕ್ರಮ ಕೈಗೊಳ್ಳಲಿದೆ ಯಾವ ಒತ್ತಡಕ್ಕೂ ಮಣಿಯುವಿದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.