ಮಂಗಳವಾರ ಮತ್ತೆ ಪರಿಷತ್ ಕಲಾಪ: ಏನಿದು ಹಠಾತ್ ಬೆಳವಣಿಗೆ?
ಬೆಂಗಳೂರು, ಡಿ. 13: ಏಕಾಏಕಿ ವಿಧಾನ ಪರಿಷತ್ ಕಲಾಪವನ್ನು ಮುಂದೂಡಿದ್ದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಶ್ನೆ ಮಾಡಿದೆ. ಸಭಾಪತಿಗಳು ದಿಢೀರ್ ಪರಿಷತ್ ಕಲಾಪವನ್ನು ಮೂಂದೂಡಿದ್ದು, ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗೆ ಅವಕಾಶ ಕೊಡದೇ ಕಲಾಪವನ್ನು ಮುಂದೂಡಿದ್ದಾರೆಂದು ವಿಧಾನ ಪರಿಷತ್ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಜೊತೆಗೆ ಸಭಾಪತಿಗಳ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯರು ರಾಜಭವನದ ಕದವನ್ನೂ ತಟ್ಟಿದ್ದರು.
ರಾಜ್ಯಪಾಲರನ್ನು ಭೇಟಿ ಮಾಡಿದ್ದ ಪರಿಷತ್ ಬಿಜೆಪಿ ಸದಸ್ಯರು, ಸದಸ್ಯರ ಭಾವನೆಗಳಿಗೆ ವಿರುದ್ಧವಾಗಿ ಕಲಾಪ ಮುಂದೂಡಿದ್ದಾರೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಅವಿಶ್ವಾಸ ಗೊತ್ತುವಳಿಯನ್ನು ಚರ್ಚಿಸ ಬೇಕಾಗಿರುವದರಿಂದ ವಿಧಾನ ಪರಿಷತ್ ನಡೆಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಮಂಗಳವಾರ (ಡಿ.15) ಕಲಾಪ ಕರೆಯಲು ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಸದನ ಮುಂದೂಡಿದ್ದ ಸಭಾಪತಿ
ವಿಧಾನ ಪರಿಷತ್ ಕಲಾಪವನ್ನು ಏಕಾಏಕಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮುಂದೂಡಿದ್ದರು. ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ, ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಕುರಿತು ಚರ್ಚೆಗೆ ಸಭಾಪತಿಗಳು ಅವಕಾಶ ನೀಡಿರಲಿಲ್ಲ. ಏಕಾಏಕಿ ಕಲಾಪ ಮುಂದೂಡಿದ್ದಕ್ಕೆ ರಾಜ್ಯಪಾಲರಿಗೂ ದೂರು ನೀಡಿದ್ದ ಬಿಜೆಪಿ ಸದಸ್ಯರು, ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದ್ದರು.
ಪರಿಷತ್ ಕಾರ್ಯದರ್ಶಿಗೆ ಸೂಚನೆ
ವಿಧಾನ ಪರಿಷತ್ ಬಿಜೆಪಿ ಸದಸ್ಯರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದ ಬೆನ್ನಲ್ಲಿಯೇ ವಿಧಾನ ಪರಿಷತ್ ಕಲಾಪವನ್ನು ಮುಂದುವರಿಸುವಂತೆ ಪತ್ರ ಬರೆದು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅವರು ವಿಧಾನ ಪರಿಷತ್ ಕಾರ್ಯದರ್ಶಿಗೆ ಸೂಚಿಸಿದ್ದರು. ಡಿಸೆಂಬರ್ 15ರಂದು ಮಂಗಳವಾರ ಪರಿಷತ್ ಸಭೆ ಕರೆಯುವಂತೆ ಪತ್ರದಲ್ಲಿ ನಿರ್ದೇಶನ ನೀಡಿದ್ದರು. ಜೊತೆಗೆ ನಿಯಾಮವಳಿಗಳಂತೆ ಅವಿಶ್ವಾಸ ನಿರ್ಣಯ ಕುರಿತು ಚರ್ಚಿಸಲು ಅನುವು ಮಾಡಿಕೊಡಬೇಕೆಂದು ಸೂಚಿಸಿದ್ದರು.
ಮಂಗಳವಾರ ಮತ್ತೆ ಪರಿಷತ್ ಕಲಾಪ
ಶನಿವಾರ ಅನಿರ್ಧಿಷ್ಟಾವಧಿವರೆಗೆ ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್ ಕಲಾಪವನ್ನು ಮಂಗಳವಾರ (ಡಿ.15) ಮತ್ತೆ ಕರೆಯಲಾಗಿದೆ. ಈ ಕುರಿತು ಪರಿಷತ್ ಸದಸ್ಯರಿಗೆ ಮಾಹಿತಿ ಕೊಟ್ಟಿರುವ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು, ಸರ್ಖಾರದ ಸೂಚನೆಯಂತೆ ಪರಿಷತ್ ಮತ್ತೆ ಸಬೆ ಕರೆಯಲಾಗಿದ್ದು, ಮಂಗಳವಾದ ಬೆಳಗ್ಗೆ 11 ಗಂಟೆಗೆ ಪರಿಷತ್ ಕಲಾಪ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಪರಿಷತ್ನಲ್ಲಿ ಪಕ್ಷಗಳ ಬಲಾಬಲ
ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಹುಮತವಿಲ್ಲ. ಹೀಗಾಗಿ ಬಿಜೆಪಿ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕಿದರು ನಿಲುವಳಿಗೆ ಹಿನ್ನಡೆ ಆಗಲಿದೆ. ವಿಧಾನ ಪರಿಷತ್ನಲ್ಲಿ ಬಿಜೆಪಿಯ 31 ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 28, ಜೆಡಿಎಸ್ 14 ಹಾಗು ಒಬ್ಬ ಸ್ವತಂತ್ರ ಸದಸ್ಯರೂ ಹಾಗು ಸಭಾಪತಿ ಸೇರಿದಂತೆ ಒಟ್ಟು 75 ಸಂಖ್ಯಾ ಬಲವಿದೆ. ಅವಿಶ್ವಾಸ ನಿರ್ಣಯ ಗೆಲ್ಲಲು 38 ಸದಸ್ಯರ ಬೆಂಬಲ ಬೇಕು. ಜೆಡಿಎಸ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸದ ಭವಿಷ್ಯ ನಿಂತಿದೆ ಎನ್ನಬಹುದು.