ಪರಿಷತ್ ನಾಮನಿರ್ದೇಶಿತರ ಪಟ್ಟಿ ಅಂತಿಮ
ಬೆಂಗಳೂರು, ಜೂ. 16 : ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ಅಂತಿಮಗೊಳಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ರಾಜ್ಯಪಾಲರಿಗೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಯಾವುದೇ ಒತ್ತಡಗಳಿಗೆ ಮಣಿಯದ ಸಿಎಂ ಹಿಂದೆ ತಯಾರಿಸಿದ್ದ ಪಟ್ಟಿಯನ್ನು ರಾಜಭವನಕ್ಕೆ ತಲುಪಿಸಿದ್ದಾರೆ.
ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹಮ್ಮದ್ ಸರಡಗಿ, ಇಂಟೆಕ್ ಮುಖಂಡ ಶಾಂತಕುಮಾರ್ ಮತ್ತು ಚಿತ್ರನಟಿ ಡಾ.ಜಯಮಾಲಾ ಅವರ ಹೆಸರು ಅಂತಿಮಗೊಂಡಿದ್ದು, ಪಟ್ಟಿ ಅಂತಿಮ ಒಪ್ಪಿಗೆಗಾಗಿ ರಾಜ್ಯಪಾಲರ ಕೈ ಸೇರಿದೆ. ರಾಜ್ಯಪಾಲರು ಸಂಜೆ ದೆಹಲಿಗೆ ತೆರಳಲಿದ್ದು, ಜೂ.21ರಂದು ಬೆಂಗಳೂರಿಗೆ ಮರಳಿದ ಬಳಿಕ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಒತ್ತಡಕ್ಕೆ ಮಣಿಯದ ಸಿಎಂ : ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಲಿಂಗಾಯತರಿಗೆ ಅವಕಾಶ ನೀಡಿಲ್ಲ. ಆದ್ದರಿಂದ ನಾಮಕರಣದಲ್ಲಿ ಅವಕಾಶ ನೀಡಬೇಕು ಎಂದು ಲಿಂಗಾಯತ ಮುಖಂಡರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದರು. ಈಗಾಗಲೇ ಅಖಿಲ ಭಾರತೀಯ ವೀರಶೈವ ಮಹಾಸಭಾ ಈ ಕುರಿತು ಬಹಿರಂಗವಾಗಿ ಬೇಡಿಕೆ ಮುಂದಿಟ್ಟಿತ್ತು. [ವೀರಶೈವ ಮಹಾಸಭಾ ಅಸಮಾಧಾನ]
ರಾಣಿ ಸತೀಶ್, ಮೋಹನ್ ಕೊಂಡಜ್ಜಿ ಅವರು ಪರಿಷತ್ ಸದಸ್ಯತ್ವಕ್ಕಾಗಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದರು. ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಅವರು ತಮಗೆ ಮತ್ತೊಂದು ಅವಧಿ ನೀಡುವಂತೆ ಪಕ್ಷದ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದರು. [ಪರಿಷತ್ ಪ್ರವೇಶಿಸಿದ ಪರಮೇಶ್ವರ್, ಈಶ್ವರಪ್ಪ]
ದೆಹಲಿಗೆ ಹೊರಟ ರಾಜ್ಯಪಾಲರು : ಸೋಮವಾರ ಸಂಜೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ನವದೆಹಲಿಗೆ ತೆರಳಲಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿಗಳು ಪರಿಷತ್ ಸದಸ್ಯರ ನಾಮಕರಣಕ್ಕೆ ಸಂಬಂಧಿಸಿದ ಕಡತವನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.
ರಾಜ್ಯಪಾಲರು ಜೂನ್ 21ಕ್ಕೆ ಬೆಂಗಳೂರಿಗೆ ಮರಳಲಿದ್ದು, ಬಳಿಕ ಪರಿಷತ್ ಸದಸ್ಯರ ನಾಮಕರಣ ಪ್ರಸ್ತಾವಕ್ಕೆ ಅಂಕಿತ ಹಾಕುವ ಸಂಭವವಿದೆ. ಅಂದಹಾಗೆ ರಾಜ್ಯಪಾಲರ ಅವಧಿ ಜೂ.29ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಅವರು ಅಂಕಿತ ಹಾಕಬೇಕಾಗಿದೆ. ಇಲ್ಲವಾದಲ್ಲಿ ಹೊಸ ರಾಜ್ಯಪಾಲರ ಬಂದ ನಂತರ ಈ ಪ್ರಕ್ರಿಯೆ ನಡೆಯಲಿದೆ.