12 ಕೋಟಿ ರೂ. ಲಂಚ ಪಡೆದ ಆರೋಪ: ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್
ಬೆಂಗಳೂರು, ಜು. 08: ಖಾಸಗಿ ಕಂಪನಿಯಿಂದ 12 ಕೋಟಿ ರೂ. ಲಂಚ ಪಡೆದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ರದ್ದು ಮಾಡಿದೆ.ಮುಖ್ಯಮಂತ್ರಿ ಯಡಿಯೂರಪ್ಪರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ರದ್ದು ಮಾಡಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಭ್ರಷ್ಟಾಚಾರ ಆರೋಪದಿಂದ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡಿದ್ದ ಯಡಿಯೂರಪ್ಪರಿಗೆ ಈ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.
ಖಾಸಗಿ ದೂರು ತೀರ್ಪು ಪ್ರಕಟ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಅಳಿಯ ಸಂಜಯ್ ಶ್ರೀ ಮತ್ತಿತರ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರಿನ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಜಯಕುಮಾರ್ ತೀರ್ಪು ಪ್ರಕಟಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿಯೋಜನೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನೀಡಬೇಕು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಿ ದೂರುದಾರ ಟಿ.ಜೆ. ಅಬ್ರಹಾಂ ರಾಜ್ಯ ಪಾಲರಿಗೆ ದೂರು ಸಲ್ಲಿಸಿದ್ದರು. ಆದರೆ, ದೂರುದಾರರಿಗೆ ಮಾಹಿತಿ ನೀಡದೇ ರಾಜಭವನ ಖಾಸಗಿ ದೂರಿನ ವಿಚಾರಣೆ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಅಭಿಯೋಜನೆ ನಡೆಸಲು ಅನುಮತಿ ನಿರಾಕರಿಸಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಜನ ಪ್ರತಿನಿಧಿ ವಿರುದ್ಧ ಭ್ರಷ್ಟಾಚಾರ ಆರೋಪ ಕುರಿತು ತನಿಖೆ ನಡಸಲು ಸಕ್ಷಮ ಪ್ರಾಧಿಕಾರ ಅನುಮತಿ ನೀಡಬೇಕು. ರಾಜ್ಯಪಾಲರು ಅನುಮತ ನಿರಾಕರಿಸಿರುವ ಅಂಶವನ್ನು ಉಲ್ಲೇಖಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ರದ್ದು ಮಾಡಿದೆ. ಇದರಿಂದ ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಟಿಜೆ ಅಬ್ರಹಾಂ ಸುದ್ದಿಗೋಷ್ಠಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಮಾಡಿರುವುದಕ್ಕೆ ಸಾಕ್ಷಾಧಾರಗಳ ಸಮೇತ ಖಾಸಗಿ ದೂರು ಸಲ್ಲಿಸಿದ್ದೆ. ಹಿಂದಿನ ರಾಜ್ಯಪಾಲ ವಜುಬಾಯಿ ವಾಲಾ ಅವರು ಅಭಿಯೋಜನಾ ಮಂಜೂರಾತಿ ನಿರಾಕರಣೆ ಮಾಡಿರುವ ಅಂಶವನ್ನೇ ಆಧಾರವಾಗಿಟ್ಟುಕೊಂಡು ನನ್ನ ದೂರನ್ನು ರದ್ದು ಮಾಡಲಾಗಿದೆ. ಯಡಿಯೂರಪ್ಪ ಕುಟುಂಬ ಈ ಪ್ರಕರಣದಲ್ಲಿ ಬೀರಿರುವ ಪ್ರಭಾವ, ರಾಜ್ಯಪಾಲರ ಕಚೇರಿಯ ಭ್ರಷ್ಟಾಚಾರ ಕುರಿತು ನಾನು ಶೀಘ್ರದಲ್ಲಿಯೇ ಸುದ್ದಿಗೊಷ್ಠಿ ನಡೆಸಿ ಕೆಲವು ಮಹತ್ವದ ಅಂಶಗಳನ್ನು ಸಮಾಜದ ಮುಂದಿಡುತ್ತೇನೆ ಎಂದು ದೂರುದಾರ ಟಿ.ಜೆ. ಅಬ್ರಹಾಂ "ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಏನಿದು ಅಕ್ರಮ
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬದ ಸದಸ್ಯರು ಭ್ರಷ್ಟಚಾರದ ಮೂಲಕ ಪಡೆದಿರುವ ಕೋಟ್ಯಂತರ ರೂಪಾಯಿ ಹಣ ವಹಿವಾಟು ನಡೆದಿದೆ. ಕೋಲ್ಕತಾ ಮೂಲದ ಶೆಲ್ ಕಂಪನಿ ಹಾಗೂ ಯಡಿಯೂರಪ್ಪ ಕುಟುಂಬ ಒಡೆತನಕ್ಕೆ ಸೇರಿದ ಹಲವು ಕಂಪನಿ ನಡುವೆ ಹಣಕಾಸಿನ ವಹಿವಾಟು ನಡೆದಿದ್ದು, ಇದೆಲ್ಲವೂ ಕಾನೂನುಬಾಹಿರ ಬೇನಾಮಿ ವ್ಯವಹಾರ ನಡೆಸಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಪ್ರಕಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲನೇ ಆರೋಪಿ. ಬಿ.ವೈ. ವಿಜಯೇಂದ್ರ ಎರಡನೇ ಆರೋಪಿ. ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ, ವಿರುಪಾಕ್ಷಪ್ಪ ಯಮಕನಮರಡಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ವಿರುಪಾಕ್ಷಪ್ಪ ಯಮಕನಮಾರಡಿ ವಿರುದ್ಧ ದೂರು ಸಲ್ಲಿಕೆಯಾಗಿದೆ. ಬೇನಾಮಿ ವಹಿವಾಟಿನ ಕುರಿತು ಸಾಕ್ಷ್ಯಾಧಾರ ಆಧರಿಸಿ ದೂರು ನೀಡಿದ್ದಾರೆ.
12 ಕೋಟಿ ರೂ. ವಹಿವಾಟಿನ ಅಸಲಿ ಸಂಗತಿ
ರಾಮಲಿಂಗಂ ಕನ್ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ರಾಮಲಿಂಗಂ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ಮೂಲಕ ಪ್ರಭಾವ ಬೀರಿ ಹಲವು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಡತಗಳ್ನು ತ್ವರಿತ ವಿಲೇವಾರಿ, ಬಿಲ್ ಪಾವತಿ ಹೀಗೆ ನಾನಾ ಕಾರ್ಯಗಳನ್ನು ಮಾಡಿಸಿಕೊಂಡು ಅದಕ್ಕೆ ಪ್ರತಿಯಾಗಿ ಲಂಚನ್ನು ನೀಡಲಾಗಿದೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರ ಶಶಿಧರ್ ಮರಡಿ ಮೂಲಕ ಪ್ರಭಾವ ಬೀರಿಸಿ ಚಂದ್ರಕಾಂತ್ ರಾಮಲಿಂಗಂ ಕೋಟ್ಯಂತರ ರೂಪಾಯಿ ಅಕ್ರಮ ಹಣ ಪಾವತಿ ಮಾಡಿದ್ದಾರೆ. ಈ ಸಂಬಂಧ ಶಶಿಧರ್ ಮರಡಿ ಹಾಗೂ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವೆ ವಾಟ್ಸಪ್ ಸಂದೇಶ ವಿನಿಮಯವಾಗಿ ಅದರ ಪ್ರಕಾರ, ಮುಖ್ಯಮಂತ್ರಿಗಳ ಪ್ರಭಾವ ಬಳಿಸಿ ಹಲವು ಗುತ್ತಿಗೆಗಳನ್ನು ರಾಮಲಿಂಗಂ ಕಂಪನಿಗೆ ಕೊಡಿಸಿರುವ ಬಗ್ಗೆ ವಾಟ್ಸಪ್ನಲ್ಲಿ ಸಂದೇಶಗಳಿವೆ.
ಶಶಿಧರ್ ಮರಡಿ ಐದು ಕೋಟಿ ರೂ. ಹಣವನ್ನು ನೀಡಲು ಸೂಚನೆ ಮಾಡಿ ವಾಟ್ಸಪ್ ಸಂದೇಶ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಚಂದ್ರಕಾಂತ್ ರಾಮಲಿಂಗಂ ಐದು ದಿನದಲ್ಲಿ ಅಷ್ಟು ಹಣ ಅರೇಂಜ್ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ. 2019 ಅಕ್ಟೋಬರ್ನಲ್ಲಿ ನಡೆದಿರುವ ಈ ವಾಟ್ಸಪ್ ಸಂದೇಶದಲ್ಲಿ ಯಡಿಯೂರಪ್ಪ ಕುಟುಂಬ ಸದಸ್ಯರು ರಾಮಲಿಂಗಂ ಕಂಪನಿಗೆ ಗುತ್ತಿಗೆ ಕೊಡಿಸಲು ಕೋಟಿ ಕೋಟಿ ಕಪ್ಪು ಹಣ ಕೊಟ್ಟಿರುವ ಬಗ್ಗೆ ವಾಟ್ಸಪ್ ಚಾಟ್ ಸಾಕ್ಷಿ ಆಧಾರಗಳನ್ನು ಅಬ್ರಹಾಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಕುಟುಂಬ 12.5 ಕೋಟಿ ರೂ. ಕಪ್ಪ ಸಂಗ್ರಹ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಸಂಬಂಧಿಸಿದ ವಾಟ್ಸಪ್ ಸಂದೇಶ, ಸಾಕ್ಷ್ಯಾಧಾರಗಳನ್ನು ನೀಡಲಾಗಿದೆ. ಇನ್ನು ಶಶಿಧರ್ ಮರಡಿ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವಿನ 12.5 ಕೋಟಿ ರೂ. ಹಣಕಾಸಿನ ವಹಿವಾಟು ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
Recommended Video
ಟಿ.ಜೆ ಅಬ್ರಹಾಂ ಮುಂದಿನ ನಡೆ ಏನು?
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಲಂಚಾವತಾರದ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಪ್ರಕರಣದ ವಾಸ್ತವಾಂಶ ಅರಿತು ಅಭಿಯೋಜನಾ ಮಂಜೂರಾತಿಗೆ ಅನುಮತಿ ನೀಡಬೇಕಿತ್ತು. ಆದರೆ ಈ ಪ್ರಕರಣವನ್ನು ಇಷ್ಟಕ್ಕೆ ಬಿಡುವುದಿಲ್ಲ. ಕಾನೂನು ಸಮರ ಸಾರುತ್ತೇನೆ. ಈ ಖಾಸಗಿ ದೂರಿನ ವಿಚಾರದಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಎಂಬ ಕೆಲವ ಸತ್ಯಾಂಶಗಳನ್ನು ಸಮಾಜದ ಮುಂದೆ ಇಡುತ್ತೇನೆ ಎಂದು ಟಿ.ಜೆ. ಅಬ್ರಹಾಂ ತಿಳಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಾಧಾರಗಳಿದ್ದರೂ ದುರುದ್ದೇಶ ಪೂರ್ವಕವಾಗಿ ಅಭಿಯೋಜನಾ ಮಂಜೂರಾತಿ ನೀಡಲು ನಿರಾಕರಣೆ ಮಾಡಿದ್ದಾರೆ.