ಕಹಿಸುದ್ದಿ: ಕರ್ನಾಟಕದಲ್ಲಿ ಇನ್ಮುಂದೆ ಪ್ರತಿನಿತ್ಯ 10000 ಮಂದಿಗೆ ಕೊರೊನಾವೈರಸ್!
ಬೆಂಗಳೂರು, ಡಿಸೆಂಬರ್.02: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ನಿರಾಳರಾಗುವಂತಿಲ್ಲ. ಮುಂಬರುವ ಜನವರಿ ಮತ್ತು ಫೆಬ್ರವರಿಯ ಎರಡು ತಿಂಗಳಿನಲ್ಲಿ ಕೊವಿಡ್-19 ಎರಡನೇ ಅಲೆಗೆ ಕರ್ನಾಟಕ ಸಾಕ್ಷಿಯಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿಯು ಎಚ್ಚರಿಸಿದೆ.
ಜನವರಿ ಮೊದಲ ವಾರದಲ್ಲಿ ಅಕ್ಟೋಬರ್ ನಲ್ಲಿ ಎದುರಾದ ಪರಿಸ್ಥಿತಿ ಮರುಕಳಿಸಲಿದೆ. ಪ್ರತಿನಿತ್ಯ 10,000ಕ್ಕಿಂತ ಹೆಚ್ಚು ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಲಿವೆ. ಈ ಹಿನ್ನೆಲೆ ಸೋಂಕಿತರ ಚಿಕಿತ್ಸೆಗೆ ಹಾಸಿಗೆ, ವೆಂಟಿಲೇಟರ್, ಐಸಿಯು ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸಜ್ಜು ಮಾಡಿಟ್ಟುಕೊಳ್ಳಬೇಕಾಗಿದೆ ಎಂದು ಸಮಿತಿಯು ಸೂಚಿಸಿದೆ.
2020ರೊಳಗೆ ಯುರೋಪಿನಲ್ಲಿ ಕೊರೊನಾವೈರಸ್ ಲಸಿಕೆ ಬಿಡುಗಡೆ?
ಡಿಸೆಂಬರ್ ಕೊನೆಯ ವಾರದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕಡಿವಾಣ ಹಾಕಬೇಕಿದೆ. ಡಿಸೆಂಬರ್.26 ರಿಂದ ಜನವರಿ.01ರವರೆಗೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಸಮಿತಿಯು ಶಿಫಾರಸ್ಸು ಮಾಡಿದೆ.
ಕೊರೊನಾವೈರಸ್ 2ನೇ ಅಲೆ ಪತ್ತೆ ಮಾಡುವುದು ಹೇಗೆ?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಸೃಷ್ಟಿಯಾಗಿರುವುದನ್ನು ಪತ್ತೆ ಮಾಡುವುದಕ್ಕೆ ತಾಂತ್ರಿಕ ಸಲಹಾ ಸಮಿತಿಯು ತಿಳಿಸಿಕೊಟ್ಟಿದೆ. ಮುಂಬರುವ ದಿನಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದ್ದು, 7 ದಿನಗಳಲ್ಲಿ ದೃಢಪಡುವ ಸರಾಸರಿ ಪ್ರಕರಣಗಳ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡನೇ ಅಲೆ ಸೃಷ್ಟಿಯಾಗಿರುವುದು ಗಮನಕ್ಕೆ ಬರುತ್ತದೆ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ರಾಜ್ಯದಲ್ಲಿ ಸೃಷ್ಟಿಯಾಗಲಿರುವ ಕೊವಿಡ್-19 ಎರಡನೇ ಅಲೆ ಬಗ್ಗೆ ಖಾತ್ರಿಪಡಿಸುವ ಕಾರ್ಯದಲ್ಲಿ ಸಾಂಕ್ರಾಮಿಕ ರೋಗ ತನಿಖಾ ತಂಡ ಕೂಡಾ ಸಹಕಾರ ನೀಡಲಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಪ್ರಮಾಣ ಇಳಿಮುಖ
ಸರ್ಕಾರದ ಮಟ್ಟದಲ್ಲಿ ತಾಂತ್ರಿಕ ಸಲಹಾ ಸಮಿತಿಯು ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ನೀಡಿರುವ ಶಿಫಾರಸ್ಸಿನ ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪ್ರಮಾಣವು ಶೇ.1.20ರಷ್ಟಿದೆ. ಹೊಸ ವರ್ಷಾಚರಣೆ ಹೊಸ್ತಿಲಿನಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸ್ಸು ಮಾಡಿದೆಯಾದರೂ, ಈ ಕುರಿತು ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ದೇಶ-ವಿದೇಶಗಳಲ್ಲಿ ಕೊರೊನಾವೈರಸ್ 2ನೇ ಅಲೆ ಸೃಷ್ಟಿ
ಕರ್ನಾಟಕದ ಹೊರತಾಗಿ ಬೇರೆ ರಾಜ್ಯ ಮತ್ತು ವಿದೇಶಗಳಲ್ಲಿ ಕೊರೊನಾವೈರಸ್ 2ನೇ ಅಲೆ ಸೃಷ್ಟಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿ ಕೊವಿಡ್-19 ಎರಡನೇ ಅಲೆ ಸೃಷ್ಟಿಯಾಗಿದೆ. ಈಗಾಗಲೇ ಸೃಷ್ಟಿಯಾಗಿರುವ ಕೊರೊನಾವೈರಸ್ ಎರಡನೇ ಅಲೆಗೆ ಭಾರತದ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ನವದೆಹಲಿ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇರಳದಲ್ಲಿ ಕೊವಿಡ್-19 ಎರಡನೇ ಅಲೆ ಸೃಷ್ಟಿಯಾಗಿದೆ.
ಫೆಬ್ರವರಿವರೆಗೂ ಕೊವಿಡ್-19 ಪರೀಕ್ಷೆ ಪ್ರಮಾಣ ಸ್ಥಿರ
ರಾಜ್ಯದಲ್ಲಿ ಪ್ರತಿನಿತ್ಯ 1 ರಿಂದ 1.25 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗುತ್ತಿದೆ. 2021ರ ಫೆಬ್ರವರಿ ಅಂತ್ಯದವರೆಗೂ ಶಿಷ್ಟಾಚಾರದ ಪ್ರಕಾರ ಆರ್ ಟಿ- ಪಿಸಿಆರ್ ತಪಾಸಣೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸ್ಸು ಮಾಡಿದೆ. ಶಿಕ್ಷಕರು, ಶೈಕ್ಷಣಿಕ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಮತ್ತು ಇತರೆ ಅಗತ್ಯ ಕಾರ್ಯಕರ್ತರಿಗೆ ಕೊವಿಡ್-19 ಪರೀಕ್ಷೆ ನಡೆಸಲು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.
Recommended Video
ತಾಂತ್ರಿಕ ಸಲಹಾ ಸಮಿತಿಯಲ್ಲಿರುವ ಶಿಫಾರಸ್ಸುಗಳು
- ರಾಜ್ಯದಲ್ಲಿ ಕೊವಿಡ್ ಕೇರ್ ಸೆಂಟರ್ ಗಳನ್ನು ವಿಸ್ತರಿಸಬೇಕು
- ಹಬ್ಬ-ಹರಿದಿನ, ಧಾರ್ಮಿಕರ ಆಚರಣೆ, ಸಾಂಸ್ಕೃತಿ ಕಾರ್ಯಕ್ರಗಳಲ್ಲಿ ಹೆಚ್ಚಿನ ಜನರು ಸೇರದಂತೆ ಎಚ್ಚರಿಕೆ ವಹಿಸುವುದು
- ಚಳಿಗಾಲ ಅವಧಿ ಆಗಿರುವುದರಿಂದ ಡಿಸೆಂಬರ್ ಮತ್ತು ಜನವರಿಯಲ್ಲಿ ಅತಿಹೆಚ್ಚಾಗಿ ಸೋಂಕು ಹರಡುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಅತಿಹೆಚ್ಚು ಜನರು ಸೇರುವ ಮದುವೆಯಂತಾ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಶಿಫಾರಸ್ಸು
- ಮದುವೆ ಕಾರ್ಯಕ್ರಮದಲ್ಲಿ 100, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ 200, ಸಾವಿನ ಮನೆಯಲ್ಲಿ 50 ಹಾಗೂ ಅಂತ್ಯಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಲು ಅನುಮತಿ ನೀಡುವುದು
- ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ನಿರ್ಲಕ್ಷಿಸುವ, ಕೊವಿಡ್-19 ಶಿಷ್ಟಾಚಾರ ಪಾಲಿಸದ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಶಿಫಾರಸ್ಸು.