ಲಾಕ್ ಡೌನ್ ಎಫೆಕ್ಟ್: ಇಂದಿರಾ ಕ್ಯಾಂಟೀನ್ ಬಂದ್
ಬೆಂಗಳೂರು, ಮಾರ್ಚ್ 24: ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ಕರ್ನಾಟಕ ರಾಜ್ಯವನ್ನು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ನಿಂದಾಗಿ ಇಡೀ ರಾಜ್ಯವೇ ಸ್ತಬ್ಧವಾಗುವುದರಿಂದ ದಿನಗೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಹೀಗಾಗಿ, ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಆಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಆದ್ರೆ, ಇಂದು ''ಇಂದಿರಾ ಕ್ಯಾಂಟೀನ್ ಮುಚ್ಚುತ್ತೇವೆ'' ಎಂದು ಹೇಳಿಬಿಟ್ಟಿದ್ದಾರೆ ಸಿ.ಎಂ ಯಡಿಯೂರಪ್ಪ.
ಲಾಕ್ ಡೌನ್: ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆ
ಹೌದು, ಲಾಕ್ ಡೌನ್ ಆರಂಭದ ದಿನವೇ ಬಡವರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಉಚಿತ ಆಹಾರ ವಿತರಣೆಯಿಂದ ಹೆಚ್ಚು ಜನ ಸೇರುತ್ತಿದ್ದಾರೆ. ಹೀಗಾಗಿ, ಇಂದಿರಾ ಕ್ಯಾಂಟೀನ್ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ತೆಗೆಯುವುದಿಲ್ಲ
''ಇಂದಿರಾ ಕ್ಯಾಂಟೀನ್ ತೆಗೆಯುವುದಿಲ್ಲ. ನೂರಾರು ಜನ ಸೇರಿಕೊಂಡು ನೂಕುನುಗ್ಗಲು ಆಗುತ್ತದೆ ಎಂಬ ಕಾರಣದಿಂದ ಇಂದಿರಾ ಕ್ಯಾಂಟೀನ್ ಮುಚ್ಚಲು ತೀರ್ಮಾನ ಮಾಡಿದ್ದೇವೆ'' ಎಂದು ಇವತ್ತು ಬೆಳಗ್ಗೆ ಡಾಲರ್ಸ್ ಕಾಲೊನಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.
ಯುಗಾದಿ ಹಬ್ಬ ಹೇಗೆ ಆಚರಿಸಬೇಕು?
''ಯುಗಾದಿ ಹಬ್ಬವನ್ನು ಮನೆಯಲ್ಲಿ ದೇವರ ಪೂಜೆ ಮಾಡುವ ಮೂಲಕ ಆಚರಿಸಬೇಕೇ ಹೊರತು ತುಂಬಾ ಆಡಂಬರದ ಅಗತ್ಯ ಇಲ್ಲ. ನಾವು ಕೂಡ ಅದನ್ನೇ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಯುಗಾದಿ ಹಬ್ಬಕ್ಕಾಗಿ ಮಾರ್ಕೆಟ್ ಗೆ ಹೋಗುವುದನ್ನು ಜನ ನಿಲ್ಲಿಸಬೇಕು'' ಎಂದು ಸಿಎಂ ಸೂಚಿಸಿದ್ದಾರೆ.
ಹೋಟೆಲ್ ನಿಂದ ಪಾರ್ಸೆಲ್ ತರಿಸಿಕೊಳ್ಳಿ
''ಹೋಟೆಲ್ ನಿಂದ ಮನೆಗೆ ಊಟ-ತಿಂಡಿ ಪಾರ್ಸೆಲ್ ತರಿಸಿಕೊಳ್ಳಬಹುದು. ಆ ರೀತಿ ಹೋಟೆಲ್ ನವರಿಗೆ ಸೂಚನೆ ನೀಡಿದ್ದೇವೆ. ಮಾರ್ಚ್ 31 ರವರೆಗೂ ಯಾರೂ ಮನೆಯಿಂದ ಹೊರಗೆ ಬರಬೇಡಿ ಅಂತ ನಾನು ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ'' ಎಂದರು ಬಿ.ಎಸ್.ಯಡಿಯೂರಪ್ಪ.
ಆಮೇಲೆ ನನ್ನನ್ನು ದೂಷಿಸಬೇಡಿ
''ರಾಜ್ಯದಲ್ಲಿ ಕರ್ಪ್ಯೂ ವಾತವರಣ ಇದೆ. ಆದರೂ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ. ಕಾರು, ಬೈಕ್ ಗಳಲ್ಲಿ ಓಡಾಡುತ್ತಿದ್ದಾರೆ. ಸುಮ್ಮನೆ ರಸ್ತೆಯಲ್ಲಿ ಓಡಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಜನಸಂದಣಿ ನಿಲ್ಲಬೇಕು, ಇಲ್ಲಾಂದ್ರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗುತ್ತದೆ. ಆಮೇಲೆ ನನ್ನನ್ನು ದೋಷಿಷಬೇಡಿ'' ಎಂದು ಯಡಿಯೂರಪ್ಪ ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟರು.