ಟೆಕ್ಕಿಗೆ ಕೊರೊನಾ; ಮಹತ್ವದ ಸಭೆ ಕರೆದ ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು, ಮಾರ್ಚ್ 03 : ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ತುರ್ತಾಗಿ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.
ತೆಲಂಗಾಣ ಮೂಲದ 24 ವರ್ಷದ ಟೆಕ್ಕಿ ಫೆಬ್ರವರಿ 17ರಂದು ದುಬೈಗೆ ತೆರಳಿದ್ದರು. ಅಲ್ಲಿ ಹಾಂಗ್ಕಾಂಗ್ನಿಂದ ಬಂದಿದ್ದ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದರು. ಫೆಬ್ರವರಿ 20ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು.
ಹೈ ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್
ಫೆಬ್ರವರಿ 22ರಂದು ಟೆಕ್ಕಿ ಹೈದರಾಬಾದ್ಗೆ ಪ್ರಯಾಣಿಸಿದ್ದರು. ಮೊದಲಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಟೆಕ್ಕಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕೊರೊನಾ ಪರಿಣಾಮ; ಬಾಸ್ಮತಿ ಅಕ್ಕಿ ರಫ್ತು ಇಳಿಕೆ
ಟೆಕ್ಕಿ ಬೆಂಗಳೂರಲ್ಲಿ ಇದ್ದ ಕಾರಣ ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ತುರ್ತು ಸಭೆ ಕರೆದಿದ್ದಾರೆ. ಮಾರ್ಚ್ 5ರಂದು ಶ್ರೀರಾಮುಲು ಪುತ್ರಿಯ ವಿವಾಹವಿದೆ. ಮದುವೆ ಕೆಲಸದ ಬ್ಯುಸಿ ನಡುವೆಯೂ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಿದ್ದಾರೆ.
ಕೊರೊನಾ; 3000ರ ಗಡಿದಾಟಿದ ಸಾವಿನ ಸಂಖ್ಯೆ
ಸಚಿವ ಬಿ. ಶ್ರೀರಾಮುಲು ಟ್ವೀಟ್
ಆರೋಗ್ಯ ಸಚಿವ ಬಿ. ಶ್ರೀರಾಮುಲು, "ಹೈದರಾಬಾದಿನ #CoronaVirus ಸೋಂಕು ಪೀಡಿತ ವ್ಯಕ್ತಿಯು ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದುಬಂದಿದೆ. ಆದ್ದರಿಂದ, ಈ ವ್ಯಕ್ತಿಯ ಸ್ಥಳೀಯ ವಿಳಾಸದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರನ್ನು ಈಗಾಗಲೇ ಗುರುತಿಸಿ, ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳ ಸಭೆ
ಸಚಿವ ಬಿ. ಶ್ರೀರಾಮುಲು, "ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಗ್ಗೆ ನನ್ನ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ತಿಳಿಸಿದಂತೆ ನಮ್ಮ ಸರ್ಕಾರವು ಸೋಂಕು ಹರಡದಂತೆ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ" ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ
"ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು #coronavirus ಹರಡುವುದರ ಬಗ್ಗೆ ನಿಗಾ ವಹಿಸಿದೆ ಹಾಗೂ ಎಲ್ಲಾ ತರಹದ ಸಿದ್ದತೆಗಳನ್ನು ಕೈಗೊಂಡಿದೆ. ನಾಗರಿಕರು ಏನಾದರೂ ಸಮಸ್ಯೆ ಇಲ್ಲವೇ ಸಂದೇಹಗಳಿದ್ದಲ್ಲಿ ಆತಂಕಕ್ಕೆ ಒಳಗಾಗದೆ, 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ" ಎಂದು ಸಚಿವರು ಮನವಿ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಪಾಸಣೆ
ಬಿ. ಶ್ರೀರಾಮುಲು, "ಇಂದಿನವರೆಗೆ #COVID2019 ಬಾಧಿತ ದೇಶಗಳಿಂದ ಬಂದಂತಹ 468 ಪ್ರಯಾಣಿಕರಲ್ಲಿ 284 ಜನರನ್ನು ಅವರ ಮನೆಗಳಲ್ಲಿ ಹಾಗೂ ಒಬ್ಬರನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಸೇರಿಸಿ, ನಿಗಾವಹಿಸಲಾಗಿದೆ. ಇದುವರೆಗೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 39391 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.