ಪೇಶೆಂಟ್ ನಂ.13: ಕರ್ನಾಟಕಕ್ಕೆ ಸೋಂಕಿತರ ಕೊಡುಗೆ ಕೊಡುತ್ತಾರಾ ಮಹಿಳೆ?
ಬೆಂಗಳೂರು, ಮಾರ್ಚ್.18: ರಾಜ್ಯದಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಬುಧವಾರ ರಾಜ್ಯದಲ್ಲಿ ಮತ್ತೆ ಮೂವರಿಗೆ ಮಾರಕ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
ಕಳೆದ ಮಾರ್ಚ್.16ರಂದು ಅಮೆರಿಕಾದಿಂದ ಆಗಮಿಸಿದ 35 ವರ್ಷದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಸ್ಪಷ್ಟವಾಗಿದೆ. ಇದರಿಂದ ರಾಜ್ಯದಲ್ಲಿ ಡೆಡ್ಲಿ ಸೋಂಕಿಗೆ ಸಿಲುಕಿರುವವರ ಸಂಖ್ಯೆಯು 14ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
US ನಿಂದ ಬಂದಿದ್ದ ಟೆಕ್ಕಿ ಬೆಂಗಳೂರಲ್ಲಿ ಎಲ್ಲೆಲ್ಲಿ ಓಡಾಡಿದ್ದ? ಕೊರೊನಾ ಗಂಡಾಂತರ ಯಾರ್ಯಾರಿಗೆ ಕಾದಿದೆ?
ಇನ್ನು, ತುರ್ತು ಅಗತ್ಯವಿದ್ದಲ್ಲಿ ಮಾತ್ರ ರೋಗಿಗಳು ಜಿಲ್ಲಾ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಒಳರೋಗಿ ಮತ್ತು ಹೊರ ರೋಗಿಗಳಲ್ಲಿ ಇರುವ ಕೆಲವು ಆಯ್ದ ರೋಗಿಗಳನ್ನು ಹೊರತುಪಡಿಸಿ ಬೇರೆ ಯಾರೂ ಆಸ್ಪತ್ರೆಗೆ ಆಗಮಿಸದಂತೆ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ಸೋಂಕಿತೆ
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುವುದಕ್ಕೆ ಪೇಶೆಂಟ್ ನಂ.13 ಪ್ರಮುಖ ಕಾರಣವಾಗುತ್ತಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ಕಳೆದ ಮಾರ್ಚ್.06ರಂದು ಅಮೆರಿಕಾದಿಂದ ಆಗಮಿಸಿದ 56 ವರ್ಷದ ಮಹಿಳೆಯು ಪ್ರಾಥಮಿಕವಾಗಿ 50ಕ್ಕೂ ಹೆಚ್ಚು ಜನರ ಜೊತೆಗೆ ಸಂಪರ್ಕ ಹೊಂದಿದ್ದರು. ಅವರೆಲ್ಲರನ್ನೂ ಪ್ರತ್ಯೇಕವಾಗಿ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಪೇನ್ ನಿಂದ ಆಗಮಿಸಿದ ವ್ಯಕ್ತಿಯಲ್ಲಿ ಕೊರೊನಾ ಸೋಂಕು
ಬೆಂಗಳೂರಿನಲ್ಲಿ 25 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಸೋಂಕಿತನು ಕಳೆದ ಮಾರ್ಚ್.13ರಂದು ಸ್ಪೇನ್ ನಿಂದ ಆಗಮಿಸಿದ್ದನು ಎಂದು ತಿಳಿದು ಬಂದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ 7 ಜನ ಇರುವುದು ಪತ್ತೆಯಾಗಿದ್ದು, ಈ ಪೈಕಿ ಯಾರಿಗೂ ಸೋಂಕು ತಗಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಎಲ್ಲರನ್ನೂ ಪ್ರತ್ಯೇಕವಾಗಿ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ.
ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಕೇಸ್?
ಕರ್ನಾಟಕದಲ್ಲಿ ಒಟ್ಟಾರೆಯಾಗಿ 14 ಜನರಿಗೆ ಮಾರಕ ಸೋಂಕು ತಗಲಿರುವುದು ದೃಢಪಟ್ಟಿದೆ. ಯಾವ ಜಿಲ್ಲೆಗಳಲ್ಲಿ ಅದೆಷ್ಟು ಹೊಸ ಶಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂಬುದನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 2 ಹೊಸ ಶಂಕಿತ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 23, ದಕ್ಷಿಣ ಕನ್ನಡ 2, ಬಳ್ಳಾರಿ 1, ಚಿಕ್ಕಮಗಳೂರು 1, ಕಲಬುರಗಿ 3, ಕೊಡಗು 2, ಉತ್ತರ ಕನ್ನಡದಲ್ಲಿ 3 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 37 ಜನರಿಗೆ ಸೋಂಕು ತಗಲಿದ್ದು ಪ್ರತ್ಯೇಕ ವಾರ್ಡ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಐಸೋಲೇಟೆಡ್ ವಾರ್ಡ್ ಗಳಲ್ಲಿ ಶಂಕಿತರಿಗೆ ಚಿಕಿತ್ಸೆ
ಇನ್ನು, ಕರ್ನಾಟಕದಲ್ಲಿ ಬುಧವಾರದ ಅಂಕಿ-ಅಂಶಗಳ ಪ್ರಕಾರ 365 ಜನರನ್ನು ಅಬ್ಸರ್ ವೇಷನ್ ನಲ್ಲಿ ಇರಿಸಲಾಗಿದೆ. 93 ಜನರು 28 ದಿನಗಳ ಕಾಲ ಅಬ್ಸರ್ ವೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 328 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿ ದಿಗ್ಬಂಧನದಲ್ಲಿ ಇರಿಸಲಾಗಿದ್ದು, 37 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 125 ಜನರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಲಾಗಿದ್ದು, 103 ಜನರಿಗೆ ಕೊರೊನಾ ವೈರಸ್ ತಗಲಿಲ್ಲ ಎಂದು ವರದಿ ಬಂದಿದೆ.
ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!
2 ವಾರ ಅಥವಾ ಮುಂದಿನ ಅಧಿಸೂಚನೆವರೆಗೆ ನಿರ್ಬಂಧ
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿದ್ದಲ್ಲಿ ಮಾತ್ರ ರೋಗಿಗಳು ಆಸ್ಪತ್ರೆಗೆ ತೆರಳಬೇಕು. ಇಲ್ಲದಿದ್ದಲ್ಲಿ ಮುಂದಿನ ಎರಡು ವಾರ ಅಥವಾ ಮುಂದಿನ ಆದೇಶ ಹೊರಬೀಳುವವರೆಗೂ ಸಾರ್ವಜನಿಕರು ಜಿಲ್ಲಾಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಖಾಸಗಿ ಆಸ್ಪತ್ರೆಗಳಲ್ಲೂ ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.