ಲಾಕ್ಡೌನ್: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು, ಏ. 28: ಕೊರೊನಾ ವೈರಸ್ ಸೋಂಕಿನ ದಾಳಿಗೆ ಸಿಕ್ಕು ನಲಗುತ್ತಿರುವ ದೇಶಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ಪರಿಸ್ಥಿತಿ ಅಷ್ಟೊಂದು ಭಯಾನಕವಾಗಿಲ್ಲ. ಬೇಗನೆ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ದು ವೈರಸ್ ಹರಡುವಿಕೆ ತಡೆಗಟ್ಟಲು ಬಹಳಷ್ಟು ಸಹಕಾರಿಯಾಗಿದೆ. ಆದರೆ ಕೊರೊನಾ ವೈರಸ್ ಕಾಣಿಸಿಕೊಂಡಿಲ್ಲ ಎಂದು ರಾಜ್ಯ ಸರ್ಕಾರ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದೆ. ರಾಜ್ಯಾದ್ಯಂತ ಕೆಂಪು, ಕಿತ್ತಳೆ, ಹಳದಿ ಹಾಗೂ ಹಸಿರು ವಲಯಗಳೆಂದು ಗುರುತಿಸಿ, ಸೋಂಕಿತರು ಪತ್ತೆಯಾಗಿರುವ ಸಂಖ್ಯೆಯ ಆಧಾರದ ಮೇಲೆ ರಿಯಾಯತಿಗಳನ್ನು ಕೊಡಲಾಗಿದೆ.
ಕಳೆದ ಏಪ್ರಿಲ್ 15 ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗದರ್ಶಿ ಅನ್ವಯ ನಾಲ್ಕು ವಲಯಗಳನ್ನಾಗಿ ವಿಂಗಡಿಸಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಹಾಟ್ಸ್ಪಾಟ್ಗಳಿಗೆ ಯಾವುದೇ ರಿಯಾಯತಿ ಕೊಡಲಾಗಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರೆಡ್ಝೋನ್ ಪ್ರದೇಶಗಳಲ್ಲಿ ಲಾಕ್ಡೌನ್ ಮುಂದುವರೆಯಲಿದೆ.
ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಯಾವುದೆ ಸಡಿಲಿಕೆ ಇಲ್ಲ
ಕೊರೊನಾ ಹಾಟ್ಸ್ಪಾಟ್ಗಳನ್ನು ಕೆಂಪು ವಲಯದಲ್ಲಿ ಗುರುತಿಸಲಾಗಿದೆ. ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ, ಆಗುತ್ತಿರುವ ಕೆಂಪು ವಲಯದಲ್ಲಿ ಗುರುತಿಸಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಲಾಕ್ಡೌನ್ ಸಡಿಲಿಕೆ: ಗ್ರೀನ್ ಝೋನ್ಗಳಿಗೆ ಮತ್ತಷ್ಟು ವಿನಾಯಿತಿ
ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲಾಕ್ಡೌನ್ಗೆ ಯಾವುದೇ ರಿಯಾಯತಿ ಕೊಟ್ಟಿಲ್ಲ. ಸಧ್ಯ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಇರುವ ಜಿಲ್ಲೆಗಳನ್ನು ಕೆಂಪು ವಲಯಗಳಲ್ಲಿ ಗುರುತಿಸಲಾಗಿದೆ.
ಆರೆಂಜ್ ಝೋನ್ಗಳಲ್ಲಿ ಜಿಲ್ಲಾಮಂತ್ರಿಗಳಿಂದ ತೀರ್ಮಾನ
ಸಧ್ಯ 2 ರಿಂದ 5 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಇರುವ ಪ್ರದೇಶಗಳನ್ನು ಕಿತ್ತಳೆ (ಆರೆಂಜ್) ವಲಯದಲ್ಲಿ ಗುರುತಿಸಲಾಗಿದೆ. ಈ ವಲಯಗಳಲ್ಲಿ ಲಾಕ್ಡೌನ್ ಸಡಿಲಿಕೆ ಕುರಿತು ನಿರ್ಧಾರ ಕೈಗೊಳ್ಳಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಕೊಡಲಾಗಿದೆ. ಈವರೆಗೆ ಸೋಂಕು ಪತ್ತೆಯಾಗಿರದ ತಾಲೂಕುಗಳಲ್ಲಿ ಲಾಕ್ಡೌನ್ ಸಡಿಲಿಸುವ ಅಧಿಕಾರವನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊಡಲಾಗಿದೆ.
ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಈವರೆಗೆ ಸೋಂಕು ಪತ್ತೆಯಾಗದ ತಾಲೂಕುಗಳಲ್ಲಿ ಲಾಕ್ಡೌನ್ ಸಡಿಲಿಕೆ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬದಲಿಗೆ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಹಸಿರು ವಲಯಗಳಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆ
ಸಕ್ರಿಯ ಸೋಂಕಿತ ಪ್ರಕರಣಗಳು ಇಲ್ಲದ ಜಿಲ್ಲೆಗಳನ್ನು ಹಸಿರು ವಲಯಗಳೆಂದು ಗುರುತಿಸಿ ಲಾಕ್ಡೌನ್ ಸಡಿಲಿಸಲಾಗಿದೆ. ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಆದೇಶ ಮಾಡಿದ್ದಾರೆ.
ಲಾಕ್ಡೌನ್: ಆರೆಂಜ್ ಝೋನ್ಗಳಲ್ಲಿ ಏನೇನು ರಿಯಾಯತಿ?
ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆರಂಭದಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಕಳೆದ ಹಲವು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿ-ಮುಂಗಟ್ಟು, ಗ್ರಾಮೀಣ ಪ್ರದೇಶದಲ್ಲಿನ ಕೈಗಾರಿಕೆಗಳು ಹಾಗೂ ಇನ್ನಿತರ ಚಟುವಟಿಕೆಗಳ ಆರಂಭಕ್ಕೆ ಹಸಿರು ನಿಶಾನೆ ಕೊಡಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡನೆ
ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೆಂಪು, ಹಸಿರು, ಕಿತ್ತಳೆ ಹಾಗೂ ಹಳದಿ ವಲಯಗಳನ್ನು ಗುರುತಿಸಲಾಗಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಆಧಾರದ ಮೇಲೆ ವಲಯಗಳ ವಿಂಗಡನೆ ಮಾಡಲಾಗಿದೆ.
ಕೊರೊನಾ ವೈರಸ್ ಸಕ್ರಿಯ ಸೋಂಕಿತರು ಇಲ್ಲದ ರಾಜ್ಯದ 13 ಜಿಲ್ಲೆಗಳನ್ನು ಹಸಿರು ವಲಯಗಳಲ್ಲಿ ಗುರುತಿಸಲಾಗಿದೆ. 5 ಕ್ಕಿಂತ ಜಿಲ್ಲೆಗಳನ್ನು ಹಳದಿ ವಲಯದಲ್ಲಿ ಗುರುತಿಸಲಾಗಿದ್ದು, ಒಟ್ಟು 6 ಜಿಲ್ಲೆಗಳು ಹಳದಿ ವಲಯದಲ್ಲಿವೆ. 6 ರಿಂದ 14 ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳನ್ನು ಕಿತ್ತಳೆ ವಲಯದಲ್ಲಿ ಗುರುತಿಸಲಾಗಿದ್ದು, ಒಟ್ಟು 5 ಜಿಲ್ಲೆಗಳು ಕಿತ್ತಳೆ ವಲಯದಲ್ಲಿವೆ. 15 ಕ್ಕಿಂತ ಸೋಂಕಿತ ಪ್ರಕರಣಗಳಿರುವ ಉಳಿದ 6 ಜಿಲ್ಲೆಗಳು ಕೆಂಪು ವಲಯದಲ್ಲಿವೆ.