KSRTC ಸೇವೆ: ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ 'ಈ' ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು, ಮೇ 19: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದೆ. 55 ದಿನಗಳ ಬಳಿಕ ಕರ್ನಾಟಕ ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಪ್ರಾರಂಭವಾಗಿದ್ದು, ಇವತ್ತು 25% ರಷ್ಟು ಬಸ್ ಗಳು ಮಾತ್ರ ರಸ್ತೆಗಿಳಿದಿವೆ.
ಮಾರಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರದ ಕುರಿತು ಸಿಬ್ಬಂದಿಗಳಿಗೆ ನಿಗದಿತ ಕಾರ್ಯಾಚರಣೆ ವಿಧಾನಗಳನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಿದೆ.
KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ
ನಿಗದಿತ ಕಾರ್ಯಾಚರಣೆ ವಿಧಾನಗಳ ಅನುಸಾರ ಕೆ.ಎಸ್.ಆರ್.ಟಿ.ಸಿ ಕಾರ್ಯಾಚರಣೆ ನಡೆಸಲಿದ್ದು, ಸಿಬ್ಬಂದಿ ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಇಂತಿವೆ:
ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಬೇಕು
* ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಇತರೆ ಸ್ಥಳಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಮಾರ್ಗ ಮಧ್ಯೆ ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಇಳಿಸಬಹುದಾಗಿದೆ.
* ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರಯಾಣಿಕರು ಬಸ್ ಗಳನ್ನು ಹತ್ತುವಾಗ ಮತ್ತು ಟಿಕೆಟ್/ಪಾಸ್ ಗಳನ್ನು ಪಡೆಯುವಾಗ ಕ್ಯೂ ನಲ್ಲಿ ನಿಲ್ಲಬೇಕು.
* ಮಾಸ್ಕ್ ಧರಿಸಿರುವವರಿಗೆ ಮಾತ್ರ ಬಸ್ ಒಳಗೆ ಪ್ರವೇಶ.
* ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯ.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
* ನಿಗದಿತ ಸಂಖ್ಯೆಯ ಪ್ರಯಾಣಿಕರು ಲಭ್ಯತೆ ಇರುವಂತೆ ಎಚ್ಚರವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ ಕಡಿಮೆ ಸಂಖ್ಯೆಯ ಪ್ರಯಾಣಿಕರೊಂದಿಗೆ ಸಾರಿಗೆ ಕಾರ್ಯಾಚರಣೆ ಮಾಡುವಂತಿಲ್ಲ.
* ಟಿಕೆಟ್ ವಿತರಿಸುವ ಸಮಯದಲ್ಲೇ ಪ್ರಯಾಣಿಕರ ವಿವರ ಸಂಗ್ರಹ ಮಾಡಬೇಕು. ಜೊತೆಗೆ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು.
* ನಿಗದಿತ ಮಟ್ಟಕ್ಕಿಂತ ಹೆಚ್ಚಿನ ತಾಪಮಾನ ಹೊಂದಿರುವ ಪ್ರಯಾಣಿಕರಿಗೆ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಇಲ್ಲ. ಹೆಚ್ಚಿನ ತಾಪಮಾನ ಹೊಂದಿರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಡಬೇಕು.
KSRTC ಮತ್ತು BMTC ಬಸ್ ಸಂಚಾರಕ್ಕೆ ಕರ್ನಾಟಕದಲ್ಲಿ ಗ್ರೀನ್ ಸಿಗ್ನಲ್.!
ಭಾನುವಾರ ಸಾರಿಗೆ ಸೇವೆ ಇಲ್ಲ
* ಇಂದಿನಿಂದ ಸಾರಿಗೆ ಸೇವೆಗಳ ಕಾರ್ಯಚರಣೆ ಹಂತ ಹಂತವಾಗಿ ಪ್ರಾರಂಭ
* ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ಮಾರ್ಗಗಳಲ್ಲಿ ಸಾರಿಗೆ ಸೇವೆ (ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ)
* ಅಂತರ ರಾಜ್ಯ ಮಾರ್ಗಗಳಿಗೆ ಸಾರಿಗೆ ಸೇವೆ ಲಭ್ಯವಿಲ್ಲ.
* ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ, ಅಂದು ಸಾರಿಗೆ ಸೇವೆ ಲಭ್ಯವಿಲ್ಲ.
* ಹವಾನಿಯಂತ್ರಿತ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವಂತಿಲ್ಲ.
ರಾತ್ರಿ ಸಂಚಾರ ಇಲ್ಲ
* ಪ್ರಾರಂಭಿಕ ಹಂತದಲ್ಲಿ ಜನದಟ್ಟಣೆ ಇರುವ ವೇಳೆಯಲ್ಲಿ ಹಾಗೂ ಪೀಕ್ ಟೈಮ್/ಹೆಚ್ಚಿನ ಜನದಟ್ಟಣೆ ಇರುವ ಮುಖ್ಯವಾದ ಹೋಬಳಿಗಳಿಂದ ತಾಲ್ಲೂಕು, ತಾಲ್ಲೂಕು-ತಾಲ್ಲೂಕು, ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಗಳು, ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಾರಿಗೆ ಕಾರ್ಯಚರಣೆ.
* ಸದ್ಯಕ್ಕೆ ಅತೀ ದೂರದ ಮಾರ್ಗಗಳ ಸಾರಿಗೆ ಕಾರ್ಯಾಚರಣೆ ಇಲ್ಲ.
* ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ಸಾರಿಗೆ ಸೇವೆ ಇಲ್ಲ.
* ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಆದ್ಯತೆ.
* ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನೇರ ಸಾರಿಗೆ ಕಾರ್ಯಚರಣೆ.
* ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅಳವಡಿಸಲು ಸಾಧ್ಯವಾಗದ ಮಾರ್ಗಗಳಲ್ಲಿ.. ಆಯಾ ಬಸ್ ನಿಲ್ದಾಣಗಳಲ್ಲಿ ಕರೆಂಟ್ ಬುಕ್ಕಿಂಗ್/ಗ್ರೌಂಡ್ ಬುಕ್ಕಿಂಗ್ ವ್ಯವಸ್ಥೆ ಜಾರಿ.