ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್
ಬೆಂಗಳೂರು, ಮಾರ್ಚ್ 14: ಕೊರೊನಾ ವೈರಸ್ ಸೋಂಕಿಗೆ ಸಂಬಂಧಪಟ್ಟಂತೆ ಕರ್ನಾಟಕ ಆರೋಗ್ಯ ಇಲಾಖೆ ತನ್ನ ದೈನಂದಿನ 'ಹೆಲ್ತ್ ಬುಲಿಟಿನ್' ಬಿಡುಗಡೆ ಮಾಡಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಪತ್ರಿಕಾಗೋಷ್ಠಿ ನಡೆಸಿ, ಶನಿವಾರ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.
ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ, ಕೊರೊನಾಕ್ಕೆ ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನೂ ಸೇರಿದಂತೆ ಕರ್ನಾಟಕದಲ್ಲಿ ಆರು ಜನರಿಗೆ ಸೋಂಕು ಇರುವುದು ದೃಢವಾಗಿದೆ. ಶನಿವಾರ ಕೊರೊನಾ ಶಂಕೆಯ ಮೇಲೆ ಹೊಸದಾಗಿ 91 ಜನರನ್ನು ತಪಾಸಣೆ ಮಾಡಲಾಗಿದೆ ಎಂದರು.
ಕೊರೊನಾ ಶಂಕೆಯ ಬಗ್ಗೆ ತಪಾಸಣೆ ಮಾಡುವ ಬಗ್ಗೆ ಎ ಬಿ ಸಿ ಎಂದು ವರ್ಗೀಕರಣ ಮಾಡಿದ್ದೇವೆ. ಎ-ಸೋಂಕಿನ ಶಂಕೆ ಕಂಡು ಬಂದವರು, ಬಿ-ಅಸ್ತಮಾ ಇರುವವರು, ಸಿ-ರೋಗ ಲಕ್ಷಣಗಳಿಲ್ಲದವರು ಎಂದು ವರ್ಗೀಕರಿಸಲಾಗಿದೆ ಎಂದರು.
ಇಲ್ಲಿವರೆಗೆ ಒಟ್ಟು 1431 ಜನರನ್ನು ಕೊರೊನಾ ಶಂಕೆಯ ಮೇಲೆ ತಪಾಸಣೆ ಮಾಡಲಾಗಿದೆ. 302 ಜನರು 28 ದಿನದ ತಪಾಸಣೆ ಬಳಿಕ ಮನೆಗೆ ಮರಳಿದ್ದಾರೆ. 1012 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಯೇ ಇರಿಸಲಾಗಿದೆ. ಆಸ್ಪತ್ರೆಯಲ್ಲಿ 32 ಜನರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 4 ಜನ ಚೀನಾಕ್ಕೆ ಹಿಂದುರಿಗಿದ್ದಾರೆ. 639 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. 639 ರಲ್ಲಿ 340 ಜನಕ್ಕೆ ಕೊರೊನಾ ನೆಗಟಿವ್ ಎಂದು ಪರಿಗಣಿಸಲ್ಪಟ್ಟಿದೆ. ಐವರಿಗೆ ಮಾತ್ರ ಕೋವಿಡ್ 19 ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ ಎಂದರು.
ಬೆಂಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಮಗಳೂರು, ಕಲಬುರುಗಿ, ಕೊಡಗು, ಉಡುಪಿಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ಘಟಕದಲ್ಲಿ ಒಟ್ಟು 32 ಜನರು ಕೊರೊನಾ ಶಂಕೆಯ ಆಧಾರದ ಮೇಲೆ ದಾಖಲಾಗಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
ಕರ್ನಾಟಕದಲ್ಲಿ ಇದುವರೆಗೆ 1,09,131 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಕೊರೊನಾಕ್ಕೆ ಆರಂಭಿಸಿರುವ 104 ಸಹಾಯವಾಣಿಗೆ 22,330 ಕರೆಗಳಿಗೆ ಉತ್ತರಿಸಲಾಗಿದೆ ಎಂದು ತಿಳಿಸಿದೆ.