ಕೊರೊನಾ ಕಾರ್ಮೋಡ: ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 2: ಕೊರೊನಾ ಸಂಕಷ್ಟಕ್ಕೆ ತುತ್ತಾಗಿರುವ ಹಣ್ಣು ಬೆಳೆಗಾರರಿಂದ ನೇರವಾಗಿ ಹಣ್ಣುಗಳ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತೀರ್ಮಾನ ಕೈಗೊಂಡಿದ್ದಾರೆ.
ಕೊರೊನಾದಿಂದ ರೈತ ಸಂಕುಲ ಸಂಕಷ್ಟಕ್ಕೆ; ನೆರವಿಗೆ ದಾವಿಸಿದ ಯಡಿಯೂರಪ್ಪ
ರೈತರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪಾಯ, ಅನಾನಸ್ ಹಣ್ಣುಗಳನ್ನು ಖರೀದಿಸುವುದು. ಅವುಗಳಿಗೆ ಸರ್ಕಾರದ ಮಟ್ಟದಲ್ಲೇ ಬೆಲೆ ನಿಗದಿ ಮಾಡುವುದು. ಹಣ್ಣುಗಳನ್ನು ಖರೀದಿಸಿ, ನಿರ್ವಹಣಾ ವೆಚ್ಚವನ್ನೊಳಗೊಂಡು ಮಾರಾಟ ದರ ನಿಗದಿ ಮಾಡುವುದು. ಬಳಿಕ ಬೆಂಗಳೂರಿನ ವಸತಿ ಸಮುಚ್ಚಯಗಳಿಗೆ ನೇರವಾಗಿ ಸರಬರಾಜು ಮಾಡುವುದು. ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನ ತೋಟಗಾರಿಕೆ, ಬಿಬಿಎಂಪಿ, ಕೃಷಿ ಉತ್ಪನ್ನ ಮಾರಾಟ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಂದ ಪಡೆಯುವುದು ಎಂಬ ತೀರ್ಮಾನವನ್ನು ಸಿಎಂ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು.