ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆ ನಿರ್ಧಾರ ಯಾಕೆ?
ಬೆಂಗಳೂರು, ಏ. 23: ರಾಜ್ಯಾದ್ಯಂತ ಈವರೆಗೆ 17 ಜನರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ವೈದ್ಯರು ಸೈನಿಕರಂತೆ ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸೋಂಕಿತ ವ್ಯಕ್ತಿಗಳ ಸೇವೆಯನ್ನು ರಾಜ್ಯಾದ್ಯಂತ ವೈದ್ಯರು ಮಾಡುತ್ತಿದ್ದಾರೆ. ತಮ್ಮ ಮನೆಗೂ ಹೋಗಲು ಆಗದೇ, ಮಕ್ಕಳೊಂದಿಗೆ ಬೆರೆಯಲು ಆಗದಂತಹ ಸ್ಥಿತಿ ವೈದ್ಯರದ್ದು.
Recommended Video
ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರೊಬ್ಬರು ತಮ್ಮಿಂದ ಮನೆಯವರಿಗೆ ತೊಂದರೆ ಆಗಬಾರದು ಎಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಮನೆಗೆ ಹೋಗದೆ ತಮ್ಮ ಕಾರಿನಲ್ಲಿಯೆ ವಾಸ್ತವ್ಯ ಮಾಡಿದ್ದನ್ನು ಗಮನಿಸಬಹುದು. ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೊರೊನಾ ವಾರ್ಡ್ನಲ್ಲಿ ಸತತ 15 ದಿನ ಮನೆಗೆ ಹೋಗದೆ, ಮಗುವನ್ನು ನೋಡದೆ ಕಾರ್ಯನಿರ್ವಹಿಸಿದ್ದ ಸುನಂದಾ ಅವರಿಗೆ ಧೈರ್ಯ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ಕೊರೊನಾ ಸೋಂಕು: ಬೆಂಗಳೂರಿನ ಪಶ್ಚಿಮ ವಲಯದ ಜನರೇ ಹುಷಾರ್...!
ಹೀಗೆ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ 300ಕ್ಕೂ ಹೆಚ್ಚು ಸರ್ಕಾರಿ ವೈದ್ಯರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರೂ ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸುವ ಭರವಸೆಯನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಸರ್ಕಾರಿ ವೈದ್ಯರು ರಾಜೀನಾಮೆಗೆ ಮುಂದಾಗಿರುವುದು ಯಾಕೆ ಗೊತ್ತಾ?
ಕೊರೊನಾ ಸಂಕಷ್ಟದಲ್ಲಿ ಹೊರಗುತ್ತಿಗೆ ವೈದ್ಯರ ನೇಮಕ
ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದಂತೆಯೆ ಹೊರ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅರ್ಜಿ ಕರೆದಿತ್ತು. ಪ್ರತಿ ಜಿಲ್ಲಾ ಆಸ್ಪತ್ರೆಗೆ 10 ವೈದ್ಯರು, 20 ಶುಶ್ರೂಷಕರು, 5 ಪ್ರಯೋಗಶಾಲಾ ತಂತ್ರಜ್ಞರು ಹಾಗೂ 10 ಡಿ ಗ್ರೂಪ್ನೌಕರರು ಸೇರಿದಂತೆ ಪ್ರತಿ ಜಿಲ್ಲಾಸ್ಪತ್ರೆಗೆ ಒಟ್ಟು 45 ಸಿಬ್ಬಂದಿ ನೇಮಕಕಕ್ಕೆ ಸರ್ಕಾರ ಮುಂದಾಗಿದೆ. ಒಟ್ಟು 18 ಆಸ್ಪತ್ರೆಗಳಿಗೆ 810 ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿತ್ತು.
ಶೇಕಡಾ 30ರಷ್ಟು ವೈದ್ಯರ ಹುದ್ದೆಗಳು ಖಾಲಿ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 30 ರಷ್ಟು ವೈದ್ಯರ ಹುದ್ದೆಗಳು ಖಾಲಿಯಿವೆ. ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆಸ್ಪತ್ರಗಳ ಐಸಿಯು, ಐಸೊಲೇಶನ್ ವಾರ್ಡ್ಗಳಲ್ಲಿ ದಿನ 24 ಗಂಟೆಗಳು ಕೋವಿಡ್ ಶಂಕಿತರ ಹಾಗೂ ಸೋಂಕಿತರ ನಿಗಾವಣೆಗೆ ನೇಮಕ ಮಾಡಿಕೊಳ್ಳಲು ಸೂಚಿಸಿಲಾಗಿತ್ತು.
ಕೊರೊನಾ ವೈರಸ್: ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಸದಾಗಿ ನೇಮಕ ಮಾಡಿಕೊಳ್ಳುವ ವೈದ್ಯರಿಗೆ ಮಾಸಿಕ 60 ಸಾವಿರ ರೂ.ಗಳ ವೇತನ ನಿಗದಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ಇದಕ್ಕೆ ಕಾರಣವೂ ಇದೆ.
ಕೊರೊನಾ ಹೋರಾಟದಲ್ಲಿರುವ ಗುತ್ತಿಗೆ ವೈದ್ಯರ ಕಡೆಗಣನೆ
ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಸುಮಾರು 300ಕ್ಕೂ ಹೆಚ್ಚಿನ ಗುತ್ತಿದೆ ವೈದ್ಯರು ಆರೋಪಿಸಿದ್ದಾರೆ. ಕೊರೊನಾ ಹೋರಾಟದಲ್ಲಿ ಹಗಲು ರಾತ್ರಿ ಎನ್ನದೆ ದುಡಿಯತ್ತಿದ್ದೇವೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 300 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿಲ್ಲ. ವೇತನದಲ್ಲಿಯೂ ಸಾಕಷ್ಟು ತಾರತಮ್ಯವಿದೆ. ಇದೀಗ ನೇಮಕ ಮಾಡಿಕೊಳ್ಳುತ್ತಿರುವ ವೈದ್ಯರಿಗೆ 60 ಸಾವಿರ ರೂಪಾಯಿ ವೇತನ ನಿಗದಿ ಮಾಡಲಾಗಿದೆ. ಆದರೆ ಈ ಹಿಂದಿನಿಂದಲೂ ಕೆಲಸ ಮಾಡುತ್ತಿರುವ ವೈದ್ಯರಿಗೆ ಮಾತ್ರ ಪ್ರತಿ ತಿಂಗಳು 45 ಸಾವಿರ ರೂ. ಸಂಬಳ ಕೊಡಲಾಗುತ್ತಿದ್ದು, ಇದು ತಾರತಮ್ಯವಾಗಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ಕೊಡ್ತೀವಿ, ರಾಜೀನಾಮೆ ಕೊಟ್ಟ ಬಳಿಕವೂ ಕೊರೊನಾ ವಿರುದ್ಧವೂ ಹೋರಾಡುತ್ತೇವೆ ಎಂದು ಗಾಂಧಿಗಿರಿ ಆರಂಭಿಸಿದ್ದಾರೆ.
ಗುತ್ತಿಗೆ ವೈದ್ಯರ ವೈದ್ಯರ ಬೇಡಿಕೆಗಳು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು 3 ವರ್ಷಗಳಿಗೊಮ್ಮೆ ಖಾಯಂ ಮಾಡುವ ಸಂಪ್ರದಾಯವಿದೆ. ಆದರೆ ಕಳೆದ 7 ವರ್ಷಗಳಿಂದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿಲ್ಲ. ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿ ಎಂದು ಹೇಳುವ ಸರ್ಕಾರದಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡುತ್ತಿಲ್ಲ. ಖಾಯಂಗೊಂಡಿರುವ ಸರ್ಕಾರಿ ವೈದ್ಯರಿಗೆ ಮಾಸಿಕ 80 ಸಾವಿರ ರೂ. ವೇತನವಿದೆ.
ಹೀಗಾಗಿ ವೇತನ ತಾರತಮ್ಯವನ್ನು ಸರಿಮಾಡಿ ಎಲ್ಲರಿಗೂ ಸಮಾನ ವೇತನ ನಿಗದಿ ಮಾಡಬೇಕು. ಜೊತೆಗೆ ಕಳೆದ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಖಾಯಂ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ.
ಮೊದಲ ಹಂತದಲ್ಲಿ ಸಿಎಂ ಮತ್ತು ಆರೋಗ್ಯ ಸಚಿವರಿಗೆ ಗುತ್ತಿಗೆ ವೈದ್ಯರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಎರಡನೇ ಹಂತದಲ್ಲಿ ಎಲ್ಲಾ ವೈದ್ಯರಿಂದ ಸಾಮೂಹಿಕ ರಾಜೀನಾಮೆ ಕೊಡುವ ಮಾಹಿತಿಯಿದೆ. ಅಷ್ಟರೊಳಗೆ ಸರ್ಕಾರ ವೇತನ ತಾರತಮ್ಯ ನೀಗಿಸಿ ಎಲ್ಲರಿಗೂ ಸಮಾನ ವೇತನ ನಿಗದಿ ಮಾಡಬೇಕಿದೆ. ಜೊತೆಗೆ ನಿಯಮದಂತೆ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಬೇಕಿದೆ.