ಕರ್ನಾಟಕದಲ್ಲಿ ಕೊರೊನಾ ವೈರಸ್ ತಪಾಸಣೆಗೆ ಹೊಸ ಲ್ಯಾಬ್
ಬೆಂಗಳೂರು, ಮಾರ್ಚ್.18: ಕೊರೊನಾ ವೈರಸ್.. ದೇಶವಷ್ಟೇ ಅಲ್ಲ ಕರ್ನಾಟಕದಲ್ಲೂ ಈ ಮಾರಕ ಸೋಂಕಿನದ್ದೇ ಮಾತು. ಬುಧವಾರ ರಾಜ್ಯ ವಿಧಾನಸಭೆಯಲ್ಲೂ ಕೊರೊನಾ ವೈರಸ್ ವಿಚಾರ ಚರ್ಚೆಗೆ ಬಂದಿದೆ. ಶಾಸಕ ಕರುಣಾಕರ ರೆಡ್ಡಿ ಈ ಬಗ್ಗೆ ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.
ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ವೆಂಟಿಲೇಟರ್ ಕೊರತೆಯಿದ್ದು, ಕೊರೊನಾ ಸೋಂಕಿತರನ್ನು ವೆಂಟಿಲೇಟರ್ ನಲ್ಲಿ ಇಡಬೇಕಾಗುತ್ತದೆ. ಆದಷ್ಟು ಬೇಗ ಸರ್ಕಾರ ವೆಂಟಿಲೇಟರ್ ಗಳನ್ನು ಖರೀದಿಸಲಿ. ಡೊಮೆಸ್ಟಿಕ್ ಫ್ಲೈಟ್ ನಲ್ಲಿ ಬರುವವರಿಗೂ ಥರ್ಮಲ್ ಸ್ಕೆನಿಂಗ್ ಮಾಡುವ ಬಗ್ಗೆ ಸಲಹೆ ಬಂದಿದೆ ಎಂದರು.
ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!
ಕೊರೊನಾ ಬಂದ ತಕ್ಷಣ ಸಾಯುತ್ತೇವೆ ಅನ್ನುವ ಭಯದಿಂದ ಜನರು ಮೊದಲು ದೂರ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಮೊದಲ ಕೊರೊನಾ ಪ್ರಕರಣದ ಟೆಕ್ಕಿ ಮತ್ತು ಅವರ ಕುಟುಂಬ ಗುಣಮುಖವಾಗಿದೆ. ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ರಾಜ್ಯದ ವೈದ್ಯರು ಸೈನಿಕರಂತೆ ಸಿದ್ಧರಾಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಉತ್ತರಿಸಿದರು.
ವಿಕಾಸಸೌಧ ಮತ್ತು ವಿಧಾನಸೌಧದಲ್ಲಿ ಥರ್ಮಲ್ ಸ್ಕ್ರೀನಿಂಗ್
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಶಾಸಕರ ಭವನಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಿದ್ದೇವೆ. ಮತ್ತಷ್ಟು ಪರೀಕ್ಷಾ ಲ್ಯಾಬ್ ಗಳನ್ನು ತೆರೆಯಲು ಮುಂದಾಗಿದ್ದೇವೆ ಎಂದು ಶ್ರೀರಾಮುಲು ತಿಳಿಸಿದರು.
ಕರ್ನಾಟಕದ ಹಲವೆಡೆ ಲ್ಯಾಬ್ ಆರಂಭ
ಕೊರೊನಾ ವೈರಸ್ ಪತ್ತೆಗಾಗಿ ರಕ್ತದ ಮಾದರಿ ಮತ್ತು ಗಂಟಲು ದ್ರವ್ಯದ ಮಾದರಿ ಪರೀಕ್ಷೆಗೆ ಅನುಕೂಲವಾಗಲು ಸರ್ಕಾರವು ಹೊಸದಾಗಿ ಲ್ಯಾಬ್ ಗಳನ್ನು ಆರಂಭಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ 2, ಶಿವಮೊಗ್ಗ, ಹಾಸನ ಮತ್ತು ಮೈಸೂರಿನಲ್ಲಿ ತಲಾ 1 ಲ್ಯಾಬ್ ಗಳಿವೆ. ರಾಜ್ಯದಲ್ಲಿ ಒಟ್ಟು 5 ಪರೀಕ್ಷಾ ಲ್ಯಾಬ್ ಗಳಿದ್ದು, ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರಿನಲ್ಲೂ ಶೀಘ್ರ ಲ್ಯಾಬ್ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 11 ಮಂದಿಗೆ ಕೊರೊನಾ ವೈರಸ್
ಇನ್ನು, ಕರ್ನಾಟಕದಲ್ಲಿ ಬುಧವಾರದ ಅಂಕಿ-ಅಂಶಗಳ ಪ್ರಕಾರ 11 ಜನರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಕಲಬುರಗಿಯಲ್ಲಿ ಮಹ್ಮದ್ ಹುಸೇನ್ ಸಿದ್ದಿಕ್ ಸಾವಿನ ಬಳಿಕ ಜನರಲ್ಲಿ ಭೀತಿಯು ಹೆಚ್ಚಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ
ಕರ್ನಾಟಕದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.