ಕೊರೊನಾ ವೈರಸ್ ಎಫೆಕ್ಟ್: ಬೆಳೆದು ನಿಂತ ಫಸಲು ನಾಶ ಮಾಡಿದ ರೈತ!
ಬೆಂಗಳೂರು, ಮಾ. 20: ಕೊರೊನಾ ವೈರಸ್ನ ಕರಾಳ ದೃಷ್ಠಿ ಇದೀಗ ರೈತರ ಮೇಲೆ ಬಿದ್ದಿದೆ. ಕೊರೊನಾ ವೈರಸ್ ಪರಿಣಾಮದಿಂದ ರೈತರು ಬೆಳೆದಿದ್ದ ಮೆಕ್ಕಜೋಳದ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಇದರಿಂದಾಗಿ ತೆನೆಗಳಿರುವ ಮೆಕ್ಕೆಜೋಳದ ಫಸಲನ್ನು ರೋಟೋವೇಟರ್ನಿಂದ ಹೊಡೆದು ರೈತನೊಬ್ಬರು ನಾಶ ಮಾಡಿರುವ ಪ್ರಕರಣ ಸ್ವತಃ ಕೃಷಿ ಸಚಿವರ ತವರು ಜಿಲ್ಲೆಯಲ್ಲಿ ನಡೆದಿದೆ. ಕೊರೊನಾ ವೈರಸ್ನಿಂದಾಗಿಯೆ ಮೆಕ್ಕೆಜೋಳದ ಬೆಲೆ ಕುಸಿದಿದೆ ಎಂದು ರೈತರು ಹೇಳುತ್ತಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ತವರು ಜಿಲ್ಲೆ ಹಾವೇರಿಯ ಬ್ಯಾಡಗಿ ತಾಲ್ಲೂಕಿನ ಹೊಸಶಿಡೇನೂರು ಗ್ರಾಮದ ರೈತ ಮಾದೇವಪ್ಪ ಒಡೇನಪುರ ತಮ್ಮ ಒಂದು ಎಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ನಾಶ ಮಾಡಿದ್ದಾರೆ. ಕೊರೊನಾ ವೈರಸ್ಗೂ ಮೆಕ್ಕೆಜೋಳದ ಬೆಲೆ ಕುಸಿತಕ್ಕೂ ಕಾರಣ ಹೇಗೆ ಎಂಬುದನ್ನು ಮುಂದೆ ಓದಿ...
ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ
ಕಳೆದ ಮೂರು ತಿಂಗಳುಗಳ ಹಿಂದೆ ದೇಶಾದ್ಯಂತ ಹರಡಿದ್ದ ವದಂತಿ ಇದು. ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ. ಚೀನಾದಲ್ಲಿ ಮಾಂಸ ತಿಂದಿದ್ದರಿಂದಲೇ ಕೊರೊನಾ ವೈರಸ್ ಬಂದು ಜನರು ಸಾಯುತ್ತಿದ್ದಾರಂತೆ ಎಂಬ ವದಂತಿ ಕಳೆದ ಜನವರಿ ತಿಂಗಳಲ್ಲಿ ದೇಶಾದ್ಯಂತ ಹರಡಿತ್ತು. ಇದೇ ನೆಪವನ್ನು ಇಟ್ಟುಕೊಂಡಿದ್ದ ವ್ಯಾಪಾರಸ್ಥರು ಮೆಕ್ಕೆಜೋಳ ಖರೀದಿಗೆ ಮೀನಾಮೇಷ ಎಣಿಸತೊಡಗಿದ್ದರು. ಮೆಕ್ಕೆಜೋಳವನ್ನು ಹೆಚ್ಚಾಗಿ ಕೋಳಿಗಳ ಆಹಾರ ತಯಾರಿಕೆಗೆ ಬಳಸುತ್ತಾರೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಬೆಳೆಯುವ ಮೆಕ್ಕೆಜೋಳಕ್ಕೆ ಪ್ರತಿವರ್ಷ ಸೂಕ್ತ ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಕೊರೊನಾ ನೆಪದಿಂದ ಶೇಕಡಾ 50ರಷ್ಟು ಬೆಲೆ ಕುಸಿತ ಉಂಟಾಗಿದೆ.
ಕೃಷಿ ಮೇಲೂ ಕೊರೊನಾ ಎಫೆಕ್ಟ್: ಕಲ್ಲಂಗಡಿ ಬೆಲೆ ಪಾತಾಳಕ್ಕೆ
8 ನೂರು ರೂ.ಗಳಿಗೆ ಬೆಲೆ ಕುಸಿತ ಕಂಡ ಮೆಕ್ಕೆಜೋಳ
ಫೆಬ್ರವರಿ ಅಂತ್ಯದ ವರೆಗೂ ಪ್ರತಿ ಕ್ವಿಂಟಾಲ್ಗೆ ಸುಮಾರು 1800-1900 ರೂಪಾಯಿಗಳಿದ್ದ ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿತವಾಗಿದೆ. ಈ ಬಾರಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೂ ಸರ್ಕಾರ ಮುಂದಾಗಿಲ್ಲ. ಹೀಗಾಗಿ ವ್ಯಾಪಾರಸ್ಥರು ಖರೀದಿಸಿದ್ರೆ ಮಾತ್ರ ರೈತರು ಮೆಕ್ಕೆಜೋಳ ಮಾರಾಟ ಮಾಡಬಹುದಾಗಿದೆ. ಇಲ್ಲದಿದ್ದರೆ ಇಲ್ಲ. ಮಾರ್ಚ್ ಎರಡನೇ ವಾರದಲ್ಲಿ ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿತ ಕಂಡು ಪ್ರತಿ ಕ್ವಿಂಟಾಲ್ಗೆ ಕೇವಲ 800 ರಿಂದ 850 ರೂ.ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಮೆಕ್ಕೆಜೋಳ ಕಟಾವು ಮಾಡಿ ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮತ್ತಷ್ಟು ನಷ್ಠವಾಗುತ್ತದೆ ಎನ್ನುತ್ತಾರೆ ಹಾವೇರಿ ಜಿಲ್ಲೆಯ ರೈತರು.
ಪ್ರತಿ ಎಕರೆ ಮೆಕ್ಕೆಜೋಳ ಬೆಳೆಯಲು 20 ಸಾವಿರ ರೂ.ಗಳು ಬೇಕು
ಪ್ರತಿ ಎಕರೆ ಮೆಕ್ಕೆಜೋಳ ಬೆಳೆಯಲು ಸುಮಾರು 20 ಸಾವಿರ ರೂ.ಗಳು ಬೇಕಾಗುತ್ತದೆ. ಮೆಕ್ಕೆಜೋಳದ ಬೀಜ, ಗೊಬ್ಬರ, ಕಳೆ, ಕ್ರಮಿನಾಶಕಕ್ಕೆ ಸುಮಾರು 12 ಸಾವಿರ ರೂ.ಗಳು ಬೇಕಾಗುತ್ತವೆ. ನಂತರ ಬೆಳೆ ಕಟಾವು ಮಾಡಿ ಅದನ್ನು ಮಾರುಕಟ್ಟೆಗೆ ಸಾಗಿಸಲು ಸುಮಾರು 8 ಸಾವಿರ ರೂ.ಗಳು ಬೇಕಾಗುತ್ತವೆ. ಹೀಗಾಗಿ ಒಟ್ಟು ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ಸುಮಾರು 20 ಸಾವಿರ ರೂ.ಗಳು ಖರ್ಚಾಗುತ್ತವೆ. ಸರಿಯಾಗಿ ಬೆಳೆದರೆ ಪ್ರತಿ ಎಕರೆಗೆ ಸುಮಾರು 20 ರಿಂದ 22 ಕ್ವಿಂಟಾಲ್ ಬೆಳೆ ಬರುತ್ತದೆ. ಹೀಗಾಗಿ ಸರ್ಕಾರ ಪ್ರತಿ ಕ್ವಿಂಟಾಲ್ಗೆ 1760 ರೂ.ಗಳ ಬೆಲೆ ನಿಗದಿ ಮಾಡಿದೆ. ಆದರೆ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆದಿಲ್ಲ. ಹೀಗಾಗಿ ವ್ಯಾಪಾರಸ್ಥರು ಹೇಳಿದ ಬೆಲೆಗೆ ರೈತರು ಮೆಕ್ಕೆಜೋಳ ಮಾರಾಟ ಮಾಡಬೇಕಾದ ಅನಿವಾರ್ಯತೆಯಿದೆ.
ರಾಜ್ಯದಲ್ಲಿ ಸುಮಾರು 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದೆ ಮೆಕ್ಕೆಜೋಳ
ಹಾವೇರಿ ಜಿಲ್ಲೆಯಲ್ಲಿ ಮಳೆ ಆಶ್ರಿತ ಬೆಳೆಯಾಗಿ ಸರಿಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈಗ ಬೇಸಿಗೆಯಲ್ಲಿ ನೀರಾವರಿ ಆಶ್ರಯದಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇನ್ನು ರಾಜ್ಯದಲ್ಲಿ ಪ್ರತಿವರ್ಷ ಮಳೆ ಆಶ್ರಿತ ಬೆಳೆಯಾಗಿ 20 ರಿಂದ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಬೇಸಿಗೆಯಲ್ಲಿಯೂ ಕೂಡ ಕಬ್ಬು ಬಿಟ್ಟರೆ ಹೆಚ್ಚಾಗಿ ಮೆಕ್ಕೆಜೋಳವನ್ನೆ ರೈತರು ಬೆಳೆಯುತ್ತಿದ್ದಾರೆ.
ಪ್ರತಿ ಸಲವೂ ಒಂದಿಲ್ಲೊಂದು ಕಾರಣ ಕೊಟ್ಟು ಬೆಲೆ ಕುಸಿತವನ್ನುಂಟು ಮಾಡುವ ವ್ಯಾಪಾರಿಗಳಿಗೆ ಈ ವರ್ಷ ಕೊರೊನಾ ವೈರಸ್ ನೆಪ ಸಿಕ್ಕಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಬೆಲೆ ಕುಸಿತದಿಂದ ಮೆಕ್ಕೆಜೋಳ ನಾಶ ಮಾಡಿದ ಪ್ರಕರಣ ನಡೆದಿದೆ. ಉಳಿದಂತೆ ರಾಜ್ಯದ ಇತರ ಕಡೆಗಳಲ್ಲಿಯೂ ಬೇಸಿಗೆ ಬೆಳೆಯನ್ನು ನಾಶ ಮಾಡುವ ಸಾಧ್ಯತೆಗಳಿವೆ. ತಕ್ಷಣವೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಗಮನ ಹರಿಸಿ ತಮ್ಮದೆ ಆದ ತವರು ಜಿಲ್ಲೆ ಹಾವೇರಿಯ ರೈತರ ಸಂಕಷ್ಟವನ್ನು ಪರಿಹರಿಸಬೇಕಿದೆ.