ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಕೊರೊನಾ ವಾರಿಯರ್ಸ್ ಕಾಟ!
ಬೆಂಗಳೂರು, ಏ. 14: ಮಾರಕ ಕೊರೊನಾ ವೈರಸ್ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಎರಡನೇ ಹಂತದ ಲಾಕ್ಡೌನ್ ಘೋಷಣೆ ಆಗಿದೆ. ಮೇ 3ರ ವರೆಗೆ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಾಜ್ಯದಲ್ಲಿಯೂ ಕೂಡ ಲಾಕ್ಡೌನ್ ವಿಸ್ತರಣೆ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯಕವಾಗುವಂತೆ ಸಾರ್ವಜನಿಕರ ಸಹಾಯವನ್ನು ರಾಜ್ಯ ವಾರ್ತಾ ಇಲಾಖೆ ಪಡೆದುಕೊಂಡಿದೆ. ರೆಡ್ಕ್ರಾಸ್ ಸಂಸ್ಥೆಯೊಂದಿಗೆ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಅವರನ್ನು ಕೊರೊವಾ ವಾರಿಯರ್ ಅಥವಾ ಕೊರೊನಾ ಸೈನಿಕ ಎಂದು ಕರೆಯಲಾಗುತ್ತಿದೆ. ಸೂಕ್ತ ತರಬೇತಿ ಕೊಡದೆ ಭದ್ರತಾ ಕೆಲಸಕ್ಕೆ ಕೊರೊನಾ ಸೈನಿಕರನ್ನು ಬಿಟ್ಟಿರುವುದು ಬೆಂಗಳೂರಿನಲ್ಲಿ ಮತ್ತೊಂದು ಸಮಸ್ಯೆಗೆ ಮುನ್ನುಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಭಯ ಮೂಡಿಸುತ್ತಿರುವ ಕೊರೊನಾ ಸೈನಿಕರು
ಕೊರೊನಾ ವೈರಸ್ ಬಗ್ಗೆ ಜನರಲ್ಲಿನ ಭಯವನ್ನು ಹೋಗಲಾಡಿಸಿ, ಸರಿಯಾದ ಮಾಹಿತಿ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುವಂತೆ ರಾಜ್ಯಾದ್ಯಂತ ಕೊರೊನಾ ಸೈನಿಕರನ್ನು ನೇಮಕ ಮಾಡಲಾಗಿದೆ. ಇದು ಸಂಪೂರ್ಣವಾಗಿ ಸ್ವಯಂ ಸೇವೆ ಆಗಿದ್ದು, ಬೇರೆ ಯಾವುದೇ ರೀತಿಯ ಸೌಲಭ್ಯಗಳು ಕೊರೊನಾ ಸೈನಿಕರಿಗೆ ಕೊಡುತ್ತಿಲ್ಲ. ಮೊದಲಿಗೆ ಕೊರನಾ ವಾರಿಯರ್ ಅಥವಾ ಕೊರೊನಾ ಸೈನಿಕ ಎಂದು ನೇಮಕ ಮಾಡಿಕೊಂಡಿದ್ದವರಿಗೆ ವಾರ್ತಾ ಇಲಾಖೆಯಿಂದ ಮಾಹಿತಿ ಮತ್ತು ಮಾರ್ಗದರ್ಶನದ ತರಬೇತಿ ಕೊಡಲಾಗಿತ್ತು. ಕಳೆದ ಮಾರ್ಚ್ 21 ರಂದು ಮೊದಲ ಬಾರಿ ಕೊರೊನಾ ವಾರಿಯರ್ಸ್ಗೆ ಬೆಂಗಳೂರಿನ ವಾರ್ತಾಸೌಧದಲ್ಲಿ ತರಬೇತಿ ಕೊಡಲಾಗಿತ್ತು. ಆದರೆ ಈಗ ಅದೇ ಸೈನಿಕರ ಸಂಖ್ಯೆ ಹೆಚ್ಚಾಗಿದ್ದು ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿದ್ದಾರೆ 3 ಸಾವಿರ ಕೊರೊನಾ ಸೈನಿಕರು
ಬೆಂಗಳೂರಿನಲ್ಲಿ ಸುಮಾರು 3 ಸಾವಿರ ಕೊರೊನಾ ಸೈನಿಕರಿಗೆ ವಾರ್ತಾ ಇಲಾಖೆಯಿಂದ ಗುರುತಿನ ಪತ್ರ ಕೊಡಲಾಗಿದೆ. ಬಹಳಷ್ಟು ಸ್ವಯಂ ವಾರ್ರೂಂನಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರ್ರೂಂನಲ್ಲಿರುವ ಕೊರೊನಾ ಸೈನಿಕರ ಕೆಲಸ ಸರ್ಕಾರ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಬೆಂಗಳೂರಿನ ರಸ್ತೆಗಳಲ್ಲಿ ಭದ್ರತಾ ಕೆಲಸ ಮಾಡುತ್ತಿರುವ ಕೊರೊನಾ ಸೈನಿಕರು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಪೊಲೀಸರಿಗಿಂತ ಮುಂದೆ ವಾಹನ ತಪಾಸಣೆ, ಸಾರ್ವಜನಿಕರ ವಾಹನ ತಪಾಸಣೆಗೆ ಮುಂದಾಗುತ್ತಿದ್ದಾರೆ. ಜೊತೆಗೆ ಸಾರ್ವಜನಿಕರಲ್ಲಿ ಅನಗತ್ಯವಾಗಿ ಭಯವನ್ನುಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ.
ಬೆಂಗಳೂರಿನಲ್ಲಿರುವ ಸುಮಾರು 3 ಸಾವಿರ ಕೊರೊನಾ ಸೈನಿಕರ ಪೈಕಿ ಅರ್ಧದಷ್ಟು ಸೈನಿಕರು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಮಾಹಿತಿಯಿದೆ.
ಪಾಸ್ ಇದ್ದರೂ ವಾರಿಯರ್ಸ್ಗಳಿಂದ ಅನಗತ್ಯ ಕಿರುಕುಳ
ಇನ್ನು ತರಕಾರಿ ಮಾರುವವರು, ಮಾಧ್ಯಮ ಪ್ರತಿನಿಧಿಗಳು, ಕಿಮೊಥೆರಪಿ, ಡಯಾಲಿಸಿಸ್ಗೆ ಹೋಗುವ ಜನರಿಗೂ ಈ ಕೊರೊನಾ ವಾರಿಯರ್ಸ್ ಅನಗತ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪೊಲೀಸ್ ಇಲಾಖೆಯೆ ಆರೋಗ್ಯ ಪರಿಸ್ಥಿತಿ, ತರಕಾರಿ ಮಾರಾಟ ಮಾಡುವವರು ಸೇರಿದಂತೆ ಇನ್ನಿತರ ಅಗತ್ಯ ಸೇವೆ, ಸಹಾಯಕ್ಕೆ ಕೊಟ್ಟಿರುವ ಪಾಸ್ಗಳನ್ನು ನೋಡಿಯೂ ಹೋಗಲು ಅವಕಾಶ ಮಾಡಿಕೊತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದ ದೂರುಗಳು ಕೇಳಿ ಬಂದಿವೆ.
ಕೈಯಲ್ಲಿ ಲಾಠಿ ಕೊಟ್ಟರೆ ಸಾಲದು, ಸೂಕ್ತ ತರಬೇತಿಯೂ ಅಗತ್ಯ
ಆರಂಭದಲ್ಲಿ ರಾಜ್ಯ ವಾರ್ತಾ ಇಲಾಖೆ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಗಳು ಕೊರೊನಾ ಸೈನಿಕರಿಗೆ ತರಬೇತಿಯನ್ನು ಕೊಟ್ಟು ಸೇರಿಸಿಕೊಂಡಿದ್ದರು. ಯಾವಾಗ ಪಾಸ್ ಸಿಗುತ್ತದೆ ಎಂಬುದು ಗೊತ್ತಾಯಿತೊ ಆಗ ಸ್ವಯಂ ಸೇವಕರ ಸಂಖ್ಯೆ ದ್ವಿಗುಣ ವಾಯಿತು. ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವವರು ಬೇಕಾಗಿದ್ದರಿಂದ ರೆಡ್ಕ್ರಾಸ್ ಹಾಗೂ ವಾರ್ತಾ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವಾರಿಯರ್ಸ್ ನೇಮಕ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಕೊರೊನಾ ಸೈನಿಕರೊಬ್ಬರು.
ರಾಜ್ಯಾದ್ಯಂತ ಸುಮಾರು 7 ಸಾವಿರ ಕೊರೊನಾ ವಾರಿಯರ್ಸ್
ಇಡೀ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 150 ಕೊರೋನಾ ಸೈನಿಕರಿಗೆ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗಳಲ್ಲಿ ಆರಂಭದಲ್ಲಿ ತರಬೇತಿ ನೀಡಲಾಗಿತ್ತು. ಇದೀಗ ಬೆಂಗಳೂರಿನಲ್ಲಿ 3 ಸಾವಿರ ಸೇರಿದಂತೆ ಇಡೀ ರಾಜ್ಯಾದ್ಯಂತ ಸುಮಾರು 7 ಸಾವಿರ ಕೊರೊನಾ ವಾರಿಯರ್ಸ್ ಇದ್ದಾರೆ ಎಂಬ ಮಾಹಿತಿಯಿದೆ. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಇರುವಂತಹ ಅಪಪ್ರಚಾರಗಳು, ವದಂತಿಗಳ ಮಾಹಿತಿ ಸಂಗ್ರಹಣೆಯಲ್ಲಿ ನೈಜತೆ ಅತಿಮುಖ್ಯ. ಈ ನಿಟ್ಟಿನಲ್ಲಿ ಸ್ವಯಂಸೇವಕರ ನಿಸ್ವಾರ್ಥ ಸೇವೆ ಪ್ರಶಂಸನಾರ್ಹ. ಆದರೆ ಬೆಂಗಳೂರಿನಲ್ಲಿ ಮಾತ್ರ ಕೊರೊನಾ ವಾರಿಯರ್ಸ್ ಕೈಗೆ ಲಾಠಿ ಕೊಟ್ಟು ರಸ್ತೆಗೆ ಇಳಿಸಿರುವುದು ಸಮಸ್ಯೆಗೆ ಕಾರಣವಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ
ಈ ಎಲ್ಲದರ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಪೊಲೀಸರಿಗೆ ಸೂಕ್ತ ಸೂಚನೆಗಳನ್ನು ರವಾನಿಸಿದ್ದಾರೆ. ವಾಕಿ ಮೂಲಕ ಎಚ್ಚರಿಕೆ ಕೊಟ್ಟಿರುವ ಭಾಸ್ಕರ್ ರಾವ್ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯನ್ನು ಬೆಂಗಳೂರು ಪೋಲಿಸರು ಕೊಡಬಾರದು. ಪಾಸ್ ಇಲ್ಲದೆ ಇದ್ದರೂ ಡಯಾಲಿಸಿಸ್, ಗರ್ಭಿಣಿಯರಿಗೆ, ಕಿಮೊಥೆರಪಿಗೆ ಹೋಗುವವರಿಗೆ ಪಾಸ್ ಇಲ್ಲದೆ ಇದ್ದರೂ ಅವಮಾನ ಮಾಡದೇ ಕಳಿಸಿ ಕೊಡಬೇಕು, ಅವಾಚ್ಯ ಶಬ್ದಗಳನ್ನು ಬಳಕೆ ಮಾಡಬಾರದು. ಏನೇ ಸಮಸ್ಯೆ ಇದ್ದರೂ ಮಾನವೀಯತೆಯಿಂದ ಕೆಲಸ ಮಾಡಬೇಕು. ಎಪಿಎಂಸಿಗೆ ಬರುವ ಹಮಾಲಿಗಳಿಗೆ, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬಾರದು. ಪ್ರಮುಖವಾಗಿ ಅಗತ್ಯ ಕೆಲಸದ ಮೇಲೆ ಇರುವವರಿಗೆ ವಿನಾಕಾರಣ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದೊಳ್ಳೆ
ಉದ್ದೇಶಕ್ಕಾಗಿ
ನೇಮಿಸಲಾಗಿರುವ
ಕೊರೊನಾ
ವಾರಿಯರ್ಸ್
ದಾರಿತಪ್ಪದಂತೆ
ನೋಡಿಕೊಳ್ಳುವ
ಜವಾಬ್ದಾರಿ
ಸಂಬಂಧಿಸಿದವರ
ಮೇಲಿದೆ.