ಕರ್ನಾಟಕದಲ್ಲಿ ಲಸಿಕೆ ಕೊರತೆ; ಮುಖ್ಯ ಕಾರ್ಯದರ್ಶಿಗಳು ಹೇಳಿದ್ದೇನು?
ಬೆಂಗಳೂರು, ಮೇ 12; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಕೊರತೆ ಉಂಟಾಗಿದೆ. ಸಾಲುಗಟ್ಟಿ ಜನರು ನಿಂತರೂ ಲಸಿಕೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾತನಾಡಿದ್ದಾರೆ.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಪಿ. ರವಿ ಕುಮಾರ್, "ಕೆಲವು ದಿನಗಳು ಅಲ್ಲ ತಿಂಗಳುಗಳೇ ಆಗಬಹುದು" ಎಂದು ಲಸಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಲಸಿಕೆ ವಿತರಣೆ: ಎರಡರಲ್ಲಿ ಒಂದನ್ನಾದರೂ ಸರಿಯಾಗಿ ಮುಗಿಸಿ!
"ನಾವು ಸಹ ಕಾಯುತ್ತಿದ್ದೇವೆ. ಎಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ತಿಂಗಳು ಸಹ ಆಗಬಹುದು. ರಾಜ್ಯ 3 ಕೋಟಿ ಡೋಸ್ ಲಸಿಕೆಗಾಗಿ ಬೇಡಿಕೆ ಇಟ್ಟಿದೆ. ಇದರಲ್ಲಿ 2 ಕೋಟಿ ಕೋವಿಶೀಲ್ಡ್, 1 ಕೋಟಿ ಕೊವ್ಯಾಕ್ಸಿನ್ ಸೇರಿದೆ" ಎಂದು ರವಿ ಕುಮಾರ್ ಹೇಳಿದ್ದಾರೆ.
ಲಸಿಕೆ ಕೊರತೆ; ಸರ್ಕಾರದ ಗಮನ ಸೆಳೆದ ಕೃಷ್ಣ ಬೈರೇಗೌಡ
"45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಿಂಗಳಿಗೆ 13 ಲಕ್ಷ ಕೋವಿಶೀಲ್ಡ್, 1 ಲಕ್ಷ ಕೊವ್ಯಾಕ್ಸಿನ್ ಅಗತ್ಯವಿದೆ. 7 ಲಕ್ಷ ಕೋವಿಶೀಲ್ಡ್, 80 ಸಾವಿರ ಕೊವ್ಯಾಕ್ಸಿನ್ ಇದುವರೆಗೆ ಪಡೆದಿದ್ದೇವೆ" ಎಂದು ಮುಖ್ಯ ಕಾರ್ಯದರ್ಶಿಗಳು ವಿವರಿಸಿದರು.
ಲಸಿಕೆ ಕೊರತೆ; ಜಾಗತಿಕ ಟೆಂಡರ್ ಮೊರೆ ಹೋದ ರಾಜ್ಯಗಳು
"ಈಗ ಬರುವ ಲಸಿಕೆಯನ್ನು 2ನೇ ಡೋಸ್ ಪಡೆಯುವವರಿಗೆ ನೀಡುತ್ತೇವೆ. ಆನ್ ಸೈಟ್ ನೋಂದಣಿಯನ್ನು ನಾವು ಸ್ಥಗಿತಗೊಳಿಸಿದ್ದೇವೆ. ಕಂಪನಿಗಳು ಲಸಿಕೆ ಪೂರೈಕೆ ಮಾಡುವ ಆಧಾರದ ಮೇಲೆ ನಾವು ಹಂಚಿಕೆಯನ್ನು ತೀರ್ಮಾನಿಸುತ್ತೇವೆ" ಎಂದರು.
"ಲಸಿಕೆ ಖರೀದಿಗಾಗಿ ನಾವು ಜಾಗತಿಕ ಟೆಂಡರ್ ಆಹ್ವಾನಿಸುತ್ತಿದ್ದೇವೆ. ಈಗ ಎರಡು ಕಂಪನಿಗಳ ಲಸಿಕೆಗೆ ಮಾತ್ರ ಅನುಮತಿ ಸಿಕ್ಕಿದೆ. ಬೇರೆ ಕಂಪನಿಗಳಿಗೆ ಅನುಮತಿ ಸಿಕ್ಕರೆ ಹೆಚ್ಚಿನ ಲಸಿಕೆ ಪಡೆಯಬಹುದಾಗಿದೆ" ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಲಸಿಕೆ ಹಂಚಿಕೆ ಬಗ್ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತ್ತು. 2ನೇ ಡೋಸ್ ಲಸಿಕೆ ನೀಡಲು ಸರ್ಕಾರ ಆದ್ಯತೆ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.
Recommended Video