ಕೊರೊನಾ ಲಾಕ್ ಡೌನ್ ಮಾನಸಿಕ ಸಮಸ್ಯೆಗಳು; ವೈದ್ಯರು ಹೇಳೋದೇನು?
ಬೆಂಗಳೂರು, ಮಾರ್ಚ್ 25: ಕೊರೊನಾ ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವೇ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. ಅಗತ್ಯ ಸೇವೆಗಳು ದೊರೆಯುತ್ತವೆ. ಉಳಿದಂತೆ ಮನೆ ಬಿಟ್ಟು ಹೊರಗೆ ಕೂಡ ಬರುವಂತಿಲ್ಲ ಎಂಬುದು ಕಟ್ಟಪ್ಪಣೆ. ಆ ಹಿನ್ನೆಲೆಯಲ್ಲಿ, "ಒಂದು ವಾರ ವರ್ಕ್ ಫ್ರಮ್ ಹೋಮ್ ಮಾಡುವಷ್ಟರಲ್ಲಿ ತಲೆ ಕೆಟ್ಟು ಹೋಯಿತು. ಇನ್ನೂ 21 ದಿನ ಹೇಗಿರೋದು" ಎಂದು ಆತ ಮಾತನಾಡುತ್ತಿದ್ದರು.
ದೀರ್ಘ ಕಾಲ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ, ಕೊರೊನಾದ ಭೀತಿಯಿಂದಾಗಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾ ಎಂಬ ಪ್ರಶ್ನೆಯೊಂದಿಗೆ ತುಮಕೂರಿನಲ್ಲಿ ಇರುವ ಮಾನಸಿಕ ತಜ್ಞ ಹಾಗೂ ವೃತ್ತಿಯಿಂದ ವೈದ್ಯರಾದ ಸಂಜಯ್ ರಾಜ್ ಅವರನ್ನು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಲಾಗಿದೆ.
ಕೊರೊನಾ ತಗುಲಿರುವವರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಕಾಣಬೇಕು?
ಅಚ್ಚರಿ ಎಂಬಂತೆ, ಸಂಜಯ್ ರಾಜ್ ಮತ್ತು ಅವರ ವೈದ್ಯ ಸ್ನೇಹಿತರು ಒಂದಾಗಿ, ಫೋನ್ ಮೂಲಕ ಕೌನ್ಸೆಲಿಂಗ್ ಆರಂಭಿಸಿಯಾಗಿದೆ. "ಹೌದು, ಈ ರೀತಿ ದಿನಗಟ್ಟಲೆ ಮನೆಯಲ್ಲೇ ಇರಬೇಕು, ಅದರಲ್ಲೂ ಕೊರೊನಾ ಕಾಯಿಲೆ ಹಬ್ಬದಂತೆ ಮುಂಜಾಗ್ರತೆ ವಹಿಸಲು ಸ್ವಯಂ ದಿಗ್ಬಂಧನ ಹೇರಿಕೊಳ್ಳಬೇಕು ಅಂದಾಗಲೇ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ" ಅಂತಲೇ ಅವರು ಮಾತು ಶುರು ಮಾಡಿದರು.
ಕೌಟುಂಬಿಕ, ಹಣಕಾಸು ಸಮಸ್ಯೆ ಇರುವವರಿಗೆ ಅಪಾಯ ಹೆಚ್ಚು
ಏನು ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಪರಿಹಾರ ಹೇಗೆ ಕಂಡುಕೊಳ್ಳುವುದು ಇತ್ಯಾದಿ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು ಹೀಗೆ: ಕೆಲವರಿಗೆ ಈ ಹಿಂದೆಯೇ ಉದ್ಯೋಗದಲ್ಲಿ ಒತ್ತಡ ಇರುತ್ತದೆ. ಅಷ್ಟೇ ಅಲ್ಲ, ಕೌಟುಂಬಿಕ ಸಮಸ್ಯೆ, ಹಣಕಾಸು ಸಮಸ್ಯೆ ಹೀಗೆ ಯಾವುದಾದರೂ ಸಮಸ್ಯೆಗಳು ಇದ್ದಲ್ಲಿ ಅಂತಹವರು ಈಗಿನ ಸನ್ನಿವೇಶದಲ್ಲಿ ಇನ್ನಷ್ಟು ಆತಂಕಕ್ಕೆ ಗುರಿ ಆಗುತ್ತಾರೆ. ಎಲ್ಲಿ ನಮಗೂ ಕಾಯಿಲೆ ಬಂದುಬಿಡಬಹುದೋ ಎಂಬ ಗಾಬರಿ ಅವರನ್ನು ನಿಧಾನಕ್ಕೆ ಖಿನ್ನತೆಗೆ ದೂಡಬಹುದು. ಮೊದಲೇ ಮಾನಸಿಕವಾಗಿ ದುರ್ಬಲರಾದವರು ಇನ್ನಷ್ಟು ಕ್ಷೀಣಿಸುತ್ತಾರೆ. ಕೊರೊನಾ ಎಂಬುದು ಕಾಯಿಲೆ. ಈ ಸಂದರ್ಭದಲ್ಲಿ ಅದನ್ನು ತಡೆಯುವುದಕ್ಕೆ ಮನೆಯಿಂದ ಹೊರಗೆ ಬಾರದಂತೆ ಇರುವುದು ಪರಿಹಾರ ಮಾರ್ಗದಲ್ಲಿ ಒಂದು ಎಂಬುದನ್ನು ಅವರ ಮನಸ್ಸು ಸ್ವೀಕರಿಸಬೇಕು. ಅದನ್ನು ಅವರು ಒಪ್ಪಿಕೊಳ್ಳಬೇಕು. ಕೊರೊನಾದ ಪರಿಣಾಮ ಕಡಿಮೆ ಏನಿಲ್ಲ. ಆದರೆ ಈ ಅವಧಿಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ.
ಮಾನಸಿಕ ಸಮಸ್ಯೆ ಲಕ್ಷಣಗಳೇನು?
ಸರಿ, ಮಾನಸಿಕ ಸಮಸ್ಯೆ ಆಗುತ್ತದೆ ಎಂಬುದನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಮೊದಲೇ ಹೇಳಿದ ಹಾಗೆ, ವಿಪರೀತ ಗಾಬರಿ ಆಗಲು ಆರಂಭಿಸುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಏಕಾಗ್ರತೆ ಹೋಗುತ್ತದೆ. ನಿದ್ದೆ ಸರಿಯಾಗಿ ಬರುವುದಿಲ್ಲ. ಕೊರೊನಾ ರೋಗದ ಲಕ್ಷಣಗಳೇನು ಎಂಬುದನ್ನು ಪದೇ ಪದೇ ಗೂಗಲ್ ನಲ್ಲಿ, ಯೂಟ್ಯೂಬ್ ನಲ್ಲಿ ಹುಡುಕಾಡುತ್ತಾರೆ. ಈ ಕಾಯಿಲೆ ನನಗೆ ಈಗಾಗಲೇ ಬಂದುಬಿಟ್ಟಿದೆಯೇನೋ ಎಂದು ಅನಿಸುವುದಕ್ಕೆ ಆರಂಭವಾಗುತ್ತದೆ. ರೋಗ ಲಕ್ಷಣದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಖಂಡಿತಾ ತಪ್ಪಲ್ಲ. ಆದರೆ ಅಸಹಜವಾಗಿ ಪದೇ ಪದೇ ಇಂಟರ್ ನೆಟ್ ನಲ್ಲಿ ಅದರ ಬಗ್ಗೆಯೇ ಸರ್ಚ್ ಮಾಡುವುದು, ವೈದ್ಯರ ಬಳಿ ಹೋಗಿ, ಪರೀಕ್ಷೆ ಮಾಡಿಸಿಕೊಳ್ಳದೆ ತಮಗೆ ಕಾಯಿಲೆ ಇದೆ ಅಂದುಕೊಳ್ಳುವುದು ಮಾನಸಿಕ ಸಮಸ್ಯೆಯ ಲಕ್ಷಣಗಳು ಎಂಬುದನ್ನು ತಿಳಿದುಕೊಳ್ಳಬೇಕು.
ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು?
ಪರಿಹಾರ ಕ್ರಮಗಳೇನು?
ಮನೆಯಲ್ಲಿ ಇರುವಾಗ ಕುಟುಂಬದವರ ಜತೆಗೆ ಸಮಯ ಕಳೆಯಬೇಕು, ಚೆಸ್- ಕೇರಂನಂಥ ಆಟ ಆಡಬಹುದು. ಪುಸ್ತಕ ಓದುವುದು, ಸಂಗೀತ ಕೇಳುವುದು, ಗಾರ್ಡನಿಂಗ್... ಇಂಥ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆಫಿಸ್ ಗೆ ಅಥವಾ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುವವರಿಗೆ ಅಥವಾ ಆ ವೇಳೆ ಮನೆಯಲ್ಲಿ ಇರುವವರಿಗೆ ಪರ್ಸನಲ್ ಸ್ಪೇಸ್ ಇರುತ್ತದೆ. ಅಂದರೆ ಅವರದೊಂದು ವೈಯಕ್ತಿಕ ಜೀವನ ಇರುತ್ತದೆ. ನಿತ್ಯವೂ ಯಾರೋ ಸ್ನೇಹಿತರ ಜತೆಗೆ ಮಾತನಾಡುತ್ತಿರುತ್ತಾರೆ. ಆ ಸಂಭಾಷಣೆಯ ಮೂಲಕ ಅವರಿಗೆ ಸಂತೋಷ, ಸಮಾಧಾನ ದೊರೆಯುತ್ತಿರುತ್ತದೆ. ಆದರೆ ಈಗ ಮನೆಯಲ್ಲಿ ಇರಬೇಕಾಗಿರುವುದರಿಂದ ಅಥವಾ ಎಲ್ಲರೂ ಮನೆಯಲ್ಲಿ ಇರುವುದರಿಂದ ಅಂಥ ಮಾತುಕತೆ, ಭೇಟಿ ಸಾಧ್ಯವಾಗದೆ ಮಾನಸಿಕವಾಗಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇನ್ನು ಬಹಳ ಹೊತ್ತು ಗಂಡ- ಹೆಂಡತಿ ಮನೆಯಲ್ಲಿ ಇರುವುದರಿಂದ ಸಣ್ಣ- ಪುಟ್ಟ, ಕೆಲವೊಮ್ಮೆ ದೊಡ್ಡ ಜಗಳಗಳಿಗೆ ಕಾರಣ ಆಗಬಹುದು. ಇದರಿಂದ ಸಾಂಸಾರಿಕ ಬದುಕಲ್ಲಿ ಸಮಸ್ಯೆ ಕಾಣಿಸಿಕೊಂಡು, ಮನಸಿನ ಮೇಲೆ ಪರಿಣಾಮ ಬರಬಹುದು.
ಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ
ಫೋನ್ ಮೂಲಕ ಕೌನ್ಸೆಲಿಂಗ್ ಪಡೆಯಿರಿ
ಈ ಕಾರಣದಲ್ಲಿ ನಮ್ಮ ವೃತ್ತಿಯಲ್ಲಿರುವ ಸ್ನೇಹಿತರು ಸೇರಿ, ಫೋನ್ ಮೂಲಕ ಕೌನ್ಸೆಲಿಂಗ್ ನೀಡಲು ನಿರ್ಧರಿಸಿದ್ದೇವೆ. ಗಾಬರಿ, ಭಯ, ವಿಶ್ರಾಂತಿ ಇಲ್ಲದಿರುವುದು, ಕೊರೊನಾ ಬಂದಿದೆಯೇನೋ ಎಂಬ ವಿಪರೀತ ಅನುಮಾನ, ವಿಪರೀತ ಒತ್ತಡ, ದುಃಖ, ಭರವಸೆ ಕಳೆದುಕೊಳ್ಳುವುದು, ಸರಿಯಾಗಿ ನಿದ್ರೆ ಬಾರದಿರುವುದು, ಅನಗತ್ಯವಾದ ಯೋಚನೆ ಇತ್ಯಾದಿ ಮಾನಸಿಕ ಸಮಸ್ಯೆಗಳಿಗೆ ಫೋನ್ ಮೂಲಕ ಕೌನ್ಸೆಲಿಂಗ್ ನೀಡಲಾಗುವುದು. ವೈದ್ಯರು ಹಾಗೂ ಕೌನ್ಸೆಲಿಂಗ್ ಸಮಯದ ಮಾಹಿತಿ ಹೀಗಿದೆ: ಬೆಳಗ್ಗೆ 8.30-10:00 : ಡಾ ಸಚಿನ್ (ಧಾರವಾಡ) 9880942288, ಬೆಳಗ್ಗೆ 10ರಿಂದ 11.30 ಡಾ ಆರ್. ಎಸ್. ದೀಪಕ್ (ಚಿತ್ರದುರ್ಗ) - 9353051686, ಬೆಳಗ್ಗೆ 11.30ರಿಂದ ಮಧ್ಯಾಹ್ನ 1: ಡಾ ಗೋಪಾಲ ದಾಸ್ (ಚಿತ್ರದುರ್ಗ)- 9008908206 ಮತ್ತು ಡಾ ರುಥ್ ಸ್ನೇಹಾ (ಕೋಲಾರ)- 9902987140, ಮಧ್ಯಾಹ್ನ 1ರಿಂದ 2.30 ಡಾ ಲೋಕೇಶ್ ಬಾಬು (ತುಮಕೂರು)- 9740707779, ಮಧ್ಯಾಹ್ನ 2.30ರಿಂದ ಸಂಜೆ 4 : ಡಾ ಅಲೋಕ್ ಘನತೆ (ಕಲಬುರಗಿ)- 9241177535, ಸಂಜೆ 4ರಿಂದ 5.30: ಡಾ ಸಂಜಯ್ ರಾಜ್ (ತುಮಕೂರು) - 9886979089 ಸಂಜೆ 5.30ರಿಂದ ರಾತ್ರಿ 7 : ಡಾ. ಮೃತ್ಯುಂಜಯ (ದಾವಣಗೆರೆ) - 9739238788, ರಾತ್ರಿ 7ರಿಂದ 8.30 ಡಾ. ಶರಣ್ಯಾ ದೇವನಾಥನ್ (ಬೆಂಗಳೂರು)- 9663677709. ಯಾರಿಗಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪದೇ ಪದೇ ಅನಿಸುವುದಕ್ಕೆ ಆರಂಭವಾದರೆ ಅಂಥವರು ತಕ್ಷಣವೇ ವೈದ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು.