ಕೊರೊನಾ ಸೋಂಕು ಕಡಿಮೆಯಾಗುವ ಬಗ್ಗೆ ತಜ್ಞ ವೈದ್ಯರು ನೀಡಿದ ಶಾಕಿಂಗ್ ಮಾಹಿತಿ
ಬೆಂಗಳೂರು, ಏಪ್ರಿಲ್ 21: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಕೋವಿಡ್ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಗೂ ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಈ ಎರಡನೇ ಅಲೆ ಹೀಗೇ ಮುಂದುವರೆಯುತ್ತಾ ? ಇನ್ನೂ ಎಷ್ಟು ದಿನ ಕೊರೋನಾ ಮುಂದುವರೆಲಿದೆ. ಕಡಿಮೆಯಾಗುವುದಿದ್ದರೆ ಯಾವಾಗ ಎಂಬುದಕ್ಕೆ ತಜ್ಞ ವೈದ್ಯರು ಇಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮುಂದಿನ ವಾರ ಇನ್ನೂ ಹೆಚ್ಚಳ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೂಕ್ತವಾಗಿ ಮಾಸ್ಕ್ ಧರಿಸದ ಕಾರಣ ಕೊರೋನಾ ಎರಡನೇ ಅಲೆ ಹೆಚ್ಚಾಗಿದೆ. ಇದಕ್ಕೆ ಜನರ ನಿರ್ಲಕ್ಷ್ಯವೇ ಕಾರಣ. ಇಡೀ ದೇಶವ್ಯಾಪ್ತಿ ಇನ್ನೂ ಒಂದು ವಾರ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ. ಅಷ್ಟೇ ಪ್ರಮಾಣದ ಸಾವು ಕಾಣಬೇಕಾಗುತ್ತದೆ. ಜನರ ಭಾಷೆಯಲ್ಲಿ ಹೇಳಬೇಕಾದರೆ ಇದು ಕೊರೋನಾ ನಿಜವಾದ ರಕ್ತಪಾತ. ಹೀಗಾಗಿ ಮುಂದಿನ ವಾರವೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಈ ಸಂಕಷ್ಟ ಸ್ಥಿತಿಯಲ್ಲಿ ಜನರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ತಜ್ಞ ವೈದ್ಯರಾದ ಡಾ. ಶ್ರೀನಿವಾಸ್ ಮತ್ತು ಡಾ. ಶಿವರಾಮಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ನಿರಪಯುಕ್ತ
ಕೊರೋನಾ ಕಾಣಿಸಿಕೊಂಡ ವೇಳೆ ಲಾಕ್ ಡೌನ್ ಸೂಕ್ತವಾಗಿತ್ತು. ಆದರೆ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಸೂಕ್ತ ಪರಿಹಾರವಲ್ಲ. ಯಾಕೆಂದರೆ ಇಂದು ಕೊರೋನಾ ಗಲ್ಲಿ ಗಲ್ಲಿಯಲ್ಲೂ ಕಾಣಿಸಿಕೊಂಡಿದೆ. ಸ್ಥಳೀಯರಿಂದ ಸ್ಥಳೀಯರಿಗೆ ಸೋಂಕು ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮಾಡಿದ್ರೆ ಸಮಸ್ಯೆ ಆಗುತ್ತದೆ ವಿನಃ ಉಪಯೋಗ ಆಗುವುದಿಲ್ಲ.
ಲಾಕ್ ಡೌನ್ ನಿಯಮ ಜಾರಿಗೆ ತಂದರೆ ಜನ ಸಾಮಾನ್ಯರು ಆಸ್ಪತ್ರೆಗೆ ಹೋಗಲು ಪರದಾಡಬೇಕಾಗುತ್ತದೆ. ಚಿಕಿತ್ಸೆ ಇಲ್ಲದೇ ನರಳಬೇಕಾಗುತ್ತದೆ. ಹೀಗಾಗಿ ಲಾಕ್ ಡೌನ್ ಸೂಕ್ತವಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಾವಶ್ಯಕ ಓಡಾಟ ಬಿಡುವುದು ಸೂಕ್ತ ಎಂದು ಡಾ. ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಬಂದಾಗ ಲಾಕ್ ಡೌನ್ ಸೂಕ್ತವಾಗಿತ್ತು. ಅವತ್ತಿಗೆ ಕೊರೋನಾ ಸ್ಥಳೀಯವಾಗಿ ತಗುಲಿರಲಿಲ್ಲ. ಹೀಗಾಗಿ ಅದು ಹರಡದಂತೆ ಲಾಕ್ ಡೌನ್ ಮಾಡಿದ್ದು ಸೂಕ್ತವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ.
ಮಕ್ಕಳು ಗರ್ಭಿಣಿಯರು ಹುಷಾರ್
ಕೊರೋನಾ ಸೋಂಕು ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರ ಪಾಲಿಗ ತುಂಬಾ ಅಪಾಯಕಾರಿ. ಮಕ್ಕಳು ಅನಾವಶ್ಯಕ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರ ಮೇಲೂ ಕೂಡ ಇದು ತುಂಬಾ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಸುರಕ್ಷತೆ ಬಗ್ಗೆ ಎಚ್ಚು ಅದ್ಯತೆ ಕೊಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿರುವ ಡಾ. ಶಿವರಾಮ ಕೃಷ್ಣ ತಿಳಿಸಿದ್ದಾರೆ. ಗರ್ಭಿಣಿ ಮಹಿಳೆಯರು ಇರುವ ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗುವುದೇ ಸೂಕ್ತವಲ್ಲ. ಮನೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಉಳಿದಿರುವ ದಾರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೇ ಮೊದಲ ವಾರದಿಂದ ಇಳಿಕೆ
ಕೊರೋನಾ ಸೋಂಕು ಸದ್ಯದ ಸ್ಥಿತಿಯಲ್ಲಿ ಏರುಮುಖವಾಗಿದೆ. ಮೇ. ಮೊದಲ ವಾರದಿಂದ ಕೊರೋನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಇಳಿ ಮುಖವಾಗಲಿದೆ. ಸದ್ಯದ ಮಟ್ಟಿಗೆ ಹೆಚ್ಚಳವಾಗಿದ್ದು, ಬಹುತೇಕರಿಗೆ ಒಂದಲ್ಲಾ ಒಂದು ರೂಪದಲ್ಲಿ ಬಂದು ಹೋಗಿದೆ. ಹೀಗಾಗಿ ಇನ್ನೂ ಒಂದು ವಾರ ಕಾಲ ಜನ ಸಾಮಾನ್ಯರು ಹೆಚ್ಚು ಸುರಕ್ಷತೆಗೆ ಆದ್ಯತೆ ನೀಡಬೇಕು. ಮೇ. ತಿಂಗಳ ಮೊದಲ ವಾರದಲ್ಲಿ ಗಣನೀಯವಾಗಿ ಇಳಿಕೆಯಾಗಲಿದ್ದು, ಜೂನ್ ವೇಳೆಗೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಯಿದೆ.
Recommended Video
ಸುರಕ್ಷತ ನಿಯಮ ಪಾಲಿಸಿ
ಹಾಗಂತ ಜನ ಸಾಮಾನ್ಯರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಇಳಿಕೆ ನಿರೀಕ್ಷಿಸುವುದು ಸೂಕ್ತವಲ್ಲ. ಅಷ್ಟರೊಳಗೆ ದೇಶದಲ್ಲಿ ಸಂಪೂರ್ಣವಾಗಿ ಲಸಿಕೆ ಮತ್ತು ಆಕ್ಸಿಜನ್ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ. ಈಗಾಗಲೇ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳ ಆಪರೇಷನ್ ಸೆಂಟರ್ಗಳಲ್ಲಿನ ಬೆಡ್ಗಳನ್ನು ಕೂಡ ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳಿಸಲಾಗುತ್ತಿದೆ. ಪರಿಸ್ಥಿತಿ ನೋಡಿದರೆ ಮೇ. ಮೊದಲ ವಾರದಿಂದ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗಲಿದೆ ಎಂದು ಡಾ. ಶ್ರೀನಿವಾಸ್ ದೊರಸಾಲ ಅಭಿಪ್ರಾಯ ಪಟ್ಟಿದ್ದಾರೆ.