ಆಗಸ್ಟ್ 16 ರಿಂದ ಶಾಲೆ ಓಪನ್ ಎಂದವರಿಗೆ ಸರ್ಕಾರ ಕೊಟ್ಟ ಶಾಕಿಂಗ್ ಉತ್ತರ
ಬೆಂಗಳೂರು, ಆ. 04: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪುನಃ ಏರುಗತಿಯತ್ತ ಸಾಗಿದೆ. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಸಾರ್ವಜನಿಕ ನಿರ್ಬಂಧಗಳನ್ನು ವಿಧಿಸಿದ್ದು, ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಸರ್ಕಾರ ಮುಂದೂಡಿದೆ. ಆ. 16 ರಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭ ವಿಚಾರ ಚರ್ಚೆಗೆ ನಾಂದಿ ಹಾಡಿದೆ. ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ಶಾಲೆಗಳು ಈ ಮಾಸದಲ್ಲಿ ಆರಂಭವಾಗುತ್ತವೆಯೇ ? ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಅನಿರ್ಧಿಷ್ಟ ಅವಧಿಗೆ ಮುಂದೂಡಲಾಗುತ್ತದೆಯೇ ? ಮುಂದೆ ಈ ಸ್ಟೋರಿ ಓದಿ.
ರಾಜ್ಯದಲ್ಲಿ ಜು. 26 ರಿಂದಲೇ ಈಗಾಗಲೇ ಪದವಿ ಕಾಲೇಜುಗಳನ್ನು ಆರಂಭಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಸ್ತವದಲ್ಲಿ ವಿದ್ಯಾರ್ಥಿಗಳು ವ್ಯಾಕ್ಸಿನ್ ಪಡೆಯಲು ಪರದಾಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ವ್ಯಾಕ್ಸಿನ್ ಪಡೆಯಲಾಗದೇ ಕಾಳಸಂತೆಯಲ್ಲಿ ವ್ಯಾಕ್ಸಿನ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪದವಿ ಕಾಲೇಜುಗಳ ಆರಂಭದ ಬೆನ್ನಲ್ಲೇ ರಾಜ್ಯದಲ್ಲಿ ಆ. 2 ರಿಂದಲೇ ತಜ್ಞರ ವರದಿ ಆಧರಿಸಿ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿತ್ತು. ಕೊರೊನಾ ಮಾರ್ಗದರ್ಶಿ ಸೂತ್ರ ಪಾಲನೆ ಹಾಗೂ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತಜ್ಞರು ನೀಡಿದ್ದ ವರದಿ ಅಧರಿಸಿ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಿತ್ತು.
ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಪ್ರಸ್ತಾಪಗಳು ನನೆಗುದಿಗೆ ಬಿದ್ದಿದ್ದವು. ನೆರೆ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ಮೂರನೇ ಅಲೆ ಭೀತಿ ನಡುವೆ ಆ. 16 ರಿಂದ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ.
ಶಿಕ್ಷಣ ಸಚಿವರು ಇಲ್ಲದ ಕಾರಣ ತೀರ್ಮಾನ ಅಸಾಧ್ಯ
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಿದೆ. ಸದ್ಯದ ಮಟ್ಟಿಗೆ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಅಂತಹ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ರಾಜ್ಯದ ದೈನಿಕಕ್ಕೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈವರೆಗೂ ಯಾವುದೇ ವರದಿ ನೀಡಿಲ್ಲ. ಇನ್ನು ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ನೇತೃತ್ವದ ಶಿಕ್ಷಣ ತಜ್ಞರ ಸಮಿತಿ ವರದಿ ನೀಡಿದೆ.
ಕೋವಿಡ್ ಮೂರನೇ ಅಲೆ ಭೀತಿ
ಅದರ ಪ್ರಕಾರ ಎರಡು ಪಾಳಿಯಲ್ಲಿ ಆ. 16 ರಿಂದ ಪ್ರಾಥಮಿಕ ಹಂತದಲ್ಲಿಯೇ ಶಾಲೆ ತೆರೆಯಲು ಶಿಫಾರಸು ಮಾಡಿತ್ತು. ಕೋವಿಡ್ ಮಾರ್ಗದರ್ಶಿ ಸೂತ್ರ ಪಾಲನೆ ಮಾಡಿ ತೆರೆಯುವ ಪ್ರಸ್ತಾಪವನ್ನು ಮಂದಿಟ್ಟಿತ್ತು. ಮುಖ್ಯಮಂತ್ರಿಗಳ ಬದಲಾವಣೆ ಹಾಗೂ ಶಿಕ್ಷಣ ಸಚಿವರು ಇಲ್ಲದ ಕಾರಣ ಉಂಟಾಗಿರುವ ರಾಜಕೀಯ ಅನಿಶ್ಚಿತತೆ ಹಾಗೂ ಕೋವಿಡ್ ಮೂರನೇ ಅಲೆ ಭೀತಿಯಿಂದ ಶಾಲೆ ಪ್ರಾರಂಭದ ಪ್ರಸ್ತಾಪವೇ ನನೆಗುದಿಗೆ ಬಿದ್ದಿದೆ. ಹೀಗಾಗಿ ಕೊರೊನಾ ಸೋಂಕಿತ ಪ್ರಕರಣಗಳ ಇಳಿಮುಖವಾದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸಬಹುದು. ಅದು ಹೊಸದಾಗಿ ಬರುವ ಶಿಕ್ಷಣ ಸಚಿವರ ತೀರ್ಮಾನದ ಮೇಲೆ ಆಧಾರ ಪಟ್ಟಿದೆ.
ಶಿಕ್ಷಣ ಹಕ್ಕಿನಿಂದ ಮಕ್ಕಳು ವಂಚಿತ
2020 ಮಾರ್ಚ್ ನಿಂದ ರಾಜ್ಯದಲ್ಲಿ ಶಾಲೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕಳೆದ ವರ್ಷ ಮೂರು ತಿಂಗಳು ವಿದ್ಯಾಗಮಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ತದನಂತರ ಅದನ್ನೂ ರದ್ದು ಪಡಿಸಲಾಗಿತ್ತು. ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಶಾಲೆಗಳನ್ನು ಪ್ರಾರಂಭ ಮಾಡಲು ಸಾಧ್ಯವಾಗಿಲ್ಲ. ಒಂದಡೆ ಶಾಳೆಗಳು ಆರ್ಥಿಕವಾಗಿ ಜರ್ಜರಿತವಾಗಿವೆ. ಶಾಲೆಗಳು ಇಲ್ಲದ ಕಾರಣ ಸಾವಿರಾರು ವಿದ್ಯಾರ್ಥಿಗಳು ಶಾಲೆಗಳಿಂದ ದೂರ ಉಳಿದಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳ 79 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಗಳಿಗೆ ದಾಖಲಾತಿ ಆಗಿಲ್ಲ. ಇನ್ನು ಸರ್ಕಾರಿ ಶಾಲೆಗಳದ್ದು ಅದೇ ಪರಿಸ್ಥಿತಿ. ಮಕ್ಕಳು ಶಿಕ್ಷಣ ಹಕ್ಕಿನಿಂದ ವಂಚಿತರಾಗಬಾರದು ಎಂದು ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಈ ವರ್ಷ ಶಾಲೆಗೆ ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಶಾಲೆಗಳ ಆನ್ಲೈನ್ ಪಾಟ ನೆಚ್ಚಿಕೊಳ್ಳದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುತ್ತಿಲ್ಲ. ಆನ್ಲೈನ್ ತರಗತಿಯ ಅವಾಂತರಗಳಿಂದ ಬಹುತೇಕ ಮಕ್ಕಳು ನಿರಾಸಕ್ತಿ ತೋರಿ ಶಿಕ್ಷಣ ಹಕ್ಕಿನಿಂದಲೇ ವಂಚಿತರಾಗುತ್ತಿದ್ದಾರೆ.
ಶಾಲೆ ತೆರೆಯುತ್ತೇವೆ ಎಂದ ಸಂಘಟನೆಗಳು ಮೌನ
ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಆರಂಭವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಸರ್ಕಾರ ಅನುಮತಿ ನೀಡದಿದ್ದರೂ ಪೋಷಕರ ಸಮ್ಮತಿ ಪಡೆದು ರಾಜ್ಯದಲ್ಲಿ ಶಾಲೆಗಳನ್ನು ನಾವೇ ಪ್ರಾರಂಭ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ರುಪ್ಸಾ ಸೇರಿದಂತೆ ಹಲವು ಸಂಘಟನೆಗಳು ಎಚ್ಚರಕೆ ನೀಡಿದ್ದವು. ಇದೀಗ ಕೊರೊನಾ ಏರುಗತಿ ನೋಡಿ ಸಂಘಟನೆಗಳು ಮೌನಕ್ಕೆ ಶರಣಾಗಿವೆ.
ರಾಜ್ಯದಲ್ಲಿ ಇನ್ನೂ ಹಿರಿಯರಿಗೆ ಕೊರೊನಾ ಲಸಿಕೆ ಕೊಟ್ಟಿಲ್ಲ. ಇನ್ನೂ ಚಿಕ್ಕ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿಸಲು ಪೋಷಕರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಶಾಲಾ ಮಕ್ಕಳು ಲಸಿಕೆ ಪಡೆದಿಲ್ಲ. ಒಂದು ವೇಳೆ ಶಾಲೆ ತೆರೆದು ಕೊರೊನಾ ಮೂರನೇ ಅಲೆಗೆ ನಾಂದಿ ಹಾಡಿದರೆ ಸಮಸ್ಯೆ ಎದುರಿಸಬೇಕಾದೀತು. ಹೀಗಾಗಿ ಸರ್ಕಾರವೇ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಿ ಎಂಬ ನಿಲವನ್ನು ಸಂಘಟನೆಗಳು ತೆಗೆದಕೊಂಡಿವೆ.
Recommended Video